ADVERTISEMENT

ಅಕ್ಕಿ ಸಾಗಿಸುತ್ತಿದ್ದ ಆರೋಪಿಗಳ ಬಂಧನ

​ಪ್ರಜಾವಾಣಿ ವಾರ್ತೆ
Published 6 ಫೆಬ್ರುವರಿ 2012, 4:55 IST
Last Updated 6 ಫೆಬ್ರುವರಿ 2012, 4:55 IST

ಸಿರುಗುಪ್ಪ: ಇಲ್ಲಿಯ ಅಕ್ಕಿಗಿರಣಿಗಳಿಂದ ಲಕ್ಷಾಂತರ ರೂಪಾಯಿ ಮೌಲ್ಯದ ಸೋನಾಮಸೂರಿ ಅಕ್ಕಿಯನ್ನು ತಮಿಳುನಾಡಿಗೆ ನಕಲಿ ದಾಖಲೆಗಳನ್ನು ಸೃಷ್ಟಿಸಿ ಮಾರಾಟ ಮಾಡಿ ಮಾಲೀಕರಿಗೆ ವಂಚನೆ ಮಾಡುತ್ತಿದ್ದ ತಂಡವನ್ನು ಸಿರುಗುಪ್ಪ ಪೋಲಿಸರು ಭಾನುವಾರ ಅಕ್ಕಿ ಮತ್ತು ಲಾರಿಗಳ ಸಮೇತ ಆರೋಪಿಗಳನ್ನು ಬಂಧಿಸುಲ್ಲಿ ಯಶಸ್ವಿಯಾಗಿದ್ದಾರೆ.

ಜನವರಿ 20, 21, 22 ರಂದು ಈ ತಂಡ ಪಟ್ಟಣಲ್ಲಿ ಕರ್ನಾಟಕ ಮತ್ತು ತಮಿಳುನಾಡು ರೋಡ್‌ಲೈನ್ಸ್ ಎಂಬ ಹೆಸರಿನಲ್ಲಿ ಟ್ರಾನ್ಸ್‌ಪೋರ್ಟ್ ಮೂಲಕ ಒಬ್ಬ ವಂಚಕ ಇಲ್ಲಿಯ ವರಲಕ್ಷ್ಮಿ ಹಾಗೂ ರಾಮಲಿಂಗೇಶ್ವರ ರೈಸ್‌ಮಿಲ್ ಮತ್ತು ಭಾಗ್ಯೋದಯ ರೈಸ್ ಮಿಲ್‌ಗಳಿಂದ 11.50 ಲಕ್ಷ ರೂಪಾಯಿ ಮೌಲ್ಯದ ಸೋನಾಮಸೂರಿ ಅಕ್ಕಿಯನ್ನು ತಮಿಳುನಾಡಿಗೆ ಸಾಗಿಸಲು ಒಪ್ಪಂದ ಮಾಡಿಕೊಂಡು ವಾಹನಗಳ ನಕಲಿ ದಾಖಲೆ ಪತ್ರಗಳು, ನಕಲಿ ಡ್ರೈವಿಂಗ್ ಲೈಸನ್ಸ್ ಹಾಗೂ ನಕಲಿ ನಂಬರ್ ಪ್ಲೇಟ್‌ಗಳನ್ನು ಉಪಯೋಗಿಸಿ ಸದರಿ ರೈಸ್‌ಮಿಲ್ ಮಾಲೀಕರಿಗೆ ಮೋಸ ಮಾಡಿ ಇಲ್ಲಿಂದ ಲೋಡ್ ಮಾಡಿ ಕೊಂಡು ಹೋದ ಅಕ್ಕಿಯನ್ನು ತಮಿಳು ನಾಡಿಗೆ ತಲುಪಿಸದೇ ಮೋಸ ಮಾಡಿ ಪರಾರಿಯಾಗಿದ್ದರು ಎನ್ನಲಾಗಿದೆ.

ಈ ಬಗ್ಗೆ ಇಲ್ಲಿಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿಗಳು ಯಾವುದೇ ಸುಳಿವು ಸಿಗದಂತೆ ಈ ವಂಚನೆ ಮಾಡಿದ್ದರು.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಚಂದ್ರಗುಪ್ತ, ಡಿಎಸ್‌ಪಿ ಎನ್. ರುದ್ರಮುನಿ ಮಾರ್ಗದರ್ಶನದಲ್ಲಿ ಇಲ್ಲಿಯ ಸಿಪಿಐ ಎನ್.ಲೋಕೇಶ, ಪಿಎಸ್‌ಐ ಲಿಂಗರಾಜ್, ಸಿಬ್ಬಂದಿ ಇನಾಯತ್ ಉಲ್ಲಾ, ಮಲ್ಲಿಕಾರ್ಜುನ, ಕಾಶೀನಾಥ ತಂಡಗಳು ಆರೋಪಿಗಳನ್ನು ಪತ್ತೆ ಹಚ್ಚಿ ಬಂಧಿಸಿದ್ದಾರೆ.

ಆರೋಪಿಗಳಾದ ಮಂಜುನಾಥ ತಂದೆ ಪ್ರಭಾಕರ ಆಚಾರ್, ಮಹಾಂತೇಶ ಸೌಧತಿ ಹಾಗೂ ಕೇಶವ ಇವರನ್ನು ಬಂಧಿಸಿ, ಅವರಿಂದ 10.84 ಲಕ್ಷ ರೂಪಾಯಿ ಸೋನಾ ಮಸೂರಿ ಅಕ್ಕಿ ಮತ್ತು 3 ಲಾರಿಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.

ಪೊಲೀಸರ ತನಿಖೆ ಮುಂದುವರಿದಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.