ಹೊಸಪೇಟೆ: ಹೊಸಪೇಟೆ ಜೆಎಂಎಫ್ಸಿ ನ್ಯಾಯಾಲಯದ ಆದೇಶದಂತೆ ಪಟೇಲ್ನಗರದಲ್ಲಿ ಡಿ.ಮಧುರೈ ನಾಯ್ಡು ಎಂಬುವವರಿಗೆ ಸೇರಿದ ಜಮೀನಿನಲ್ಲಿ ವಾಸವಾಗಿದ್ದ 88 ಕುಟುಂಬಗಳ ತೆರವು ಕಾರ್ಯಾಚರಣೆ ನ್ಯಾಯಾಲಯ ಸಿಬ್ಬಂದಿ ಮತ್ತು ಪೊಲೀಸರ ಸಮ್ಮುಖದಲ್ಲಿ ಆರಂಭವಾಗಿದೆ.
ಕಳೆದ ಎರಡು ವರ್ಷಗಳಿಂದ ನೆನೆಗುದಿಗೆ ಬಿದ್ದಿದ್ದ ತೀರ್ಪು ಜಾರಿಗೊಳಿಸಲು ಬುಧವಾರ ಬೆಳಿಗ್ಗೆ ಮುಂದಾದ ನ್ಯಾಯಾಲಯದ ಸಿಬ್ಬಂದಿಗೆ ಪೊಲೀಸರು ಸೂಕ್ತ ಬಂದೋಬಸ್ತ್ ನೀಡಿ ನಿವಾಸಿಗಳನ್ನು ಮನ ಒಲಿಸಿ ಖಾಲಿ ಮಾಡಿಸುವ ಕಾರ್ಯಕ್ಕೆ ಮುಂದಾದರು.30 ಮನೆಗಳನ್ನು ತೆರವುಗೊಳಿಸುವಲ್ಲಿ ಸಿಬ್ಬಂದಿ ಯಶಸ್ವಿಯಾಗಿದ್ದಾರೆ.
ಯಾವುದೇ ಗೊಂದಲ ಸೃಷ್ಟಿಸುವ ಇಚ್ಛೆ ಇಲ್ಲದಿರುವುದರಿಂದ ಮನ ಒಲಿಕೆಗೆ ಮುಂದಾಗಿರುವುದಾಗಿ ಇನ್ನು ಎರಡು ದಿನಗಳಲ್ಲಿ ಸಂಪೂರ್ಣ ತೆರವು ಗೊಳಿಸಿ ವಾರಸುದಾರರಿಗೆ ಹಸ್ತಾಂತ ರಿಸುವುದಾಗಿ ನ್ಯಾಯಾಲಯ ಸಿಬ್ಬಂದಿ ತಿಳಿಸಿದೆ. ನಗರಸಭೆ, ಜೆಸ್ಕಾಂ ಮತ್ತು ಪೊಲೀಸ್ ಅಧಿಕಾರಿಗಳು ಸಹ ತಮ್ಮ ಸಹಕಾರ ನೀಡಿ ನೀರು ಸರಬರಾಜು, ವಿದ್ಯುತ್ ಸಂಪರ್ಕವನ್ನು ಕಡಿತಗೊಳಿ ಸುವ ಮೂಲಕ ತೆರವು ಕಾರ್ಯಾಚರಣೆಗೆ ಬಂದಿರುವ ನ್ಯಾಯಾಲಯ ಸಿಬ್ಬಂದಿಗೆ ತಮ್ಮ ಸಹಕಾರ ನೀಡಿದರು.
ಸುಮಾರು 40 ವರ್ಷಗಳಿಂದ 2.12 ಎಕರೆ ಪ್ರದೇಶದಲ್ಲಿ 88 ಕುಟುಂಬಗಳು ವಾಸವಾಗಿದ್ದು ಮಾಲೀಕರು ಅನೇಕ ಬಾರಿ ವಿನಂತಿಸಿದರೂ ತೆರವುಗೊಳಿಸದ ಕಾರಣ ಡಿ. ಮಧುರೈ ನಾಯ್ಡು ಪರವಾಗಿ ವಿಜಯಕುಮಾರ ನ್ಯಾಯಾಲಯ ಮೆಟ್ಟಿಲೇರಿದ್ದರು. 2010ರಲ್ಲಿ ತೀರ್ಪು ಪ್ರಕಟವಾದರೂ ತೆರವುಗೊಳಿಸಲು ಅಗತ್ಯ ಸಹಕಾರ ದೊರೆಯದೇ ಮುಂದೂಡಿದ್ದ ತೆರವು ಕಾರ್ಯ ನ್ಯಾಯಾಲಯದ ಸೂಚನೆ ಯಂತೆ ಆರಂಭವಾಗಿದೆ. ಮನೆ ಕಳೆದು ಕೊಳ್ಳಲಿರುವ ನಿವಾಸಿಗಳು ಕೆಲಕಾಲ ಆಕ್ಷೇಪಿಸಿದರಾದರೂ ಅನಿವಾರ್ಯವಾಗಿ ಹಿಂದೆ ಸರಿಯ ಬೇಕಾಯಿತು.
ಆಕ್ರಂದನ: ಕಳೆದ 40 ವರ್ಷಗಳಿಂದ ನಾವು ಇಲ್ಲಿಯೇ ವಾಸವಾಗಿದ್ದೇವೆ. ಈಗ ತಕ್ಷಣವೇ ಹೊರಹೋಗಲು ತಿಳಿಸಿದರೆ ಹೇಗೆ ಎಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದರು.ನಿವೇಶನಕ್ಕೆ ಕರ ಕಟ್ಟುವಾಗ, ವಿದ್ಯುತ್ ಸಂಪರ್ಕ ನೀಡುವಾಗ ಏಕೆ ಆಕ್ಷೇಪಿಸಲಿಲ್ಲ ಎಂದು ಸ್ಥಳೀಯ ನಿವಾಸಿ ಓಬಳೇಶ್ ಆಕ್ಷೇಪ ವ್ಯಕ್ತಪಡಿಸಿದರು.
ಕೂಲಿ ಕೆಲಸ ಮಾಡಿ ಜೀವನ ಸಾಗಿಸುವುದು ಕಷ್ಟವಾಗಿರುವಾಗ ತಕ್ಷಣವೇ ಹೊರ ಹೋಗಲು ತಿಳಿಸಿದರೆ ಹೇಗೆ? ಪರ್ಯಾಯ ವ್ಯವಸ್ಥೆಗಳಿಲ್ಲ, ಜೀವನ ನಡೆಸೋದೆಲ್ಲಿ ಅನಸೂಯಾ ಪ್ರಶ್ನಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.