ADVERTISEMENT

`ಅದಿರು ಸಾಗಣೆ ಮಾಹಿತಿ ಅಂತರ್ಜಾಲದಲ್ಲಿ'

​ಪ್ರಜಾವಾಣಿ ವಾರ್ತೆ
Published 28 ಡಿಸೆಂಬರ್ 2012, 5:54 IST
Last Updated 28 ಡಿಸೆಂಬರ್ 2012, 5:54 IST
`ಅದಿರು ಸಾಗಣೆ ಮಾಹಿತಿ ಅಂತರ್ಜಾಲದಲ್ಲಿ'
`ಅದಿರು ಸಾಗಣೆ ಮಾಹಿತಿ ಅಂತರ್ಜಾಲದಲ್ಲಿ'   

ಬಳ್ಳಾರಿ: ರಾಜ್ಯದ ಗಣಿಗಳಿಂದ ಇ- ಹರಾಜು ಮೂಲಕ ಮಾರಾಟ ಮಾಡುವ ಕಬ್ಬಿಣದ ಅದಿರಿನ ಸಂಪೂರ್ಣ ವಿವರವನ್ನು ಅಂತರ್ಜಾಲಕ್ಕೆ ಅಳವಡಿಸುವ ವ್ಯವಸ್ಥೆ ಜಾರಿಗೊಳಿಸಲಾಗಿದ್ದು, ಸಾರ್ವಜನಿಕರೂ ಆ ಮಾಹಿತಿ ಪಡೆಯಬಹುದಾಗಿದೆ ಎಂದು ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ರಾಜಕುಮಾರ್ ಶ್ರೀವಾತ್ಸವ್ ತಿಳಿಸಿದರು.

ನಗರದಲ್ಲಿ ಗುರುವಾರ ಅರಣ್ಯ ಇಲಾಖೆ ಸಿಬ್ಬಂದಿ ಹಾಗೂ ಅದಿರು ಖರೀದಿದಾರರಿಗಾಗಿ ಏರ್ಪಡಿಸಲಾಗಿದ್ದ `ಅರಣ್ಯ ಉತ್ಪನ್ನಗಳ ಮಾರಾಟ ವ್ಯವಸ್ಥೆ'  ಕುರಿತ ವಿಚಾರ ಸಂಕಿರಣದಲ್ಲಿ ಅವರು ಮಾತನಾಡಿದರು.

ಅರಣ್ಯ ಇಲಾಖೆಯು ಜಿಲ್ಲೆಯಲ್ಲಿ ಒಟ್ಟು ಮೂರು ಚೆಕ್‌ಪೋಸ್ಟ್ ಸ್ಥಾಪಿಸಿದ್ದು, ಅದಿರು ಸಾಗಣೆ ಪರ್ಮಿಟ್‌ಗಳನ್ನು ಅಲ್ಲೆಲ್ಲ ಸ್ಕ್ಯಾನ್ ಮಾಡಿ, ಖಚಿತತೆ ಬಗ್ಗೆ ಖಾತರಿ ಮಾಡಿಕೊಳ್ಳಲಾಗುತ್ತದೆ. ಈ ಪ್ರಕ್ರಿಯೆ ಆನ್‌ಲೈನ್ ಮೂಲಕವೇ ನಡೆಯುವುದರಿಂದ, ಅದಿರು ಸಾಗಣೆ ವಾಹನದ ಪ್ರತಿ ನಡೆಯನ್ನೂ ತಕ್ಷಣಕ್ಕೆ ತಿಳಿದುಕೊಳ್ಳಬಹುದಾಗಿದೆ ಎಂದು ಅವರು ಹೇಳಿದರು.

ಅದಿರು ಸಾಗಣೆಯ ಆರಂಭಿಕ ಹಂತದಿಂದ ಅದು ತಲುಪುವವರೆಗಿನ ಮಾರ್ಗದ ಸಂಪೂರ್ಣ ಮಾಹಿತಿಯನ್ನು ಪಡೆಯಬಹುದಾಗಿದ್ದು, ಅಕ್ರಮ ಸಾಗಣೆ ಕುರಿತು ಸಂಶಯ ಬಂದಲ್ಲಿ, ಸಾರ್ವಜನಿಕರೇ ಅರಣ್ಯ ಇಲಾಖೆಗೆ ಎಸ್‌ಎಂಎಸ್ ಮೂಲಕ ದೂರು ನೀಡಿದರೆ, ಅದಿರು ಸಾಗಣೆ ಅಕ್ರಮವೇ ಅಥವಾ ಸಕ್ರಮವೇ ಎಂಬುದು 13 ಸೆಕೆಂಡ್‌ಗಳಲ್ಲಿ ಗೊತ್ತಾಗಲಿದೆ ಎಂದ ಅವರು ತಿಳಿಸಿದರು.

ಅರಣ್ಯ ಉತ್ಪನ್ನಗಳಾದ ಕಟ್ಟಿಗೆ ಮತ್ತಿತರ ವಸ್ತುಗಳ ಲಭ್ಯತೆ, ಮಾರಾಟ ಮತ್ತಿತರ ವಿಷಯವನ್ನೂ ಅಂತರ್ಜಾಲದಲ್ಲಿ ಪಡೆಯುವ ವ್ಯವಸ್ಥೆ ಜಾರಿಯಲ್ಲಿದೆ ಎಂದು ಅವರು ವಿವರಿಸಿದರು.

ಅಕ್ರಮ ಅದಿರು ಸಾಗಣೆ ತಡೆಯಲೆಂದೇ ಇಲಾಖೆ 50 ಜನ ಸಿಬ್ಬಂದಿಯನ್ನು ನೇಮಿಸಿಕೊಂಡಿದೆ. ಒಂದೂವರೆ ವರ್ಷದ ಹಿಂದೆ ಊಹಿಸಲೂ ಆಗದಂತಹ ಬೆಳವಣಿಗೆಗಳು ಇಲಾಖೆಯಲ್ಲಿ ಆಗಿವೆ. ಕಳೆದ ಒಂದು ವರ್ಷದ ಅವಧಿಯಲ್ಲಿ ಇ- ಹರಾಜು ಮೂಲಕ ಅದಿರು ಮಾರಾಟ ಮಾಡಿದ್ದರಿಂದ, ಇಲಾಖೆ ರೂ 800 ಕೋಟಿ ಅರಣ್ಯ ಅಭಿವೃದ್ಧಿ ತೆರಿಗೆ ಸಂಗ್ರಹಿಸಿದೆ ಎಂದು ಉಪ ಅರಣ್ಯ ಸಂರಕ್ಷಣಾಧಿಕಾರಿ  ಎಸ್.ಮಣಿಕಂಠನ್ ತಿಳಿಸಿದರು.

ಅರಣ್ಯ ಸಂರಕ್ಷಣಾಧಿಕಾರಿ ಶಾಶ್ವತಿ ಮಿಶ್ರಾ, ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಶಿವಣ್ಣ ಈ ಸಂದರ್ಭ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.