ರಬಕವಿ ಬನಹಟ್ಟಿ: ‘ನಾವು ಧರ್ಮವನ್ನು ರಕ್ಷಿಸಿದರೆ ಧರ್ಮ ನಮ್ಮನ್ನು ರಕ್ಷಿಸುತ್ತದೆ’ ಎಂದು ಹಳಿಂಗಳಿ ಭದ್ರಗಿರಿ ಬೆಟ್ಟದ ಜೈನ ಮುನಿ ಕುಲರತ್ನ ಭೂಷಣ ಮಹಾರಾಜರು ಹೇಳಿದರು.
ಸಮೀಪದ ಹಳಿಂಗಳಿ ಭದ್ರಗಿರಿ ಬೆಟ್ಟದಲ್ಲಿ ಹಮ್ಮಿಕೊಂಡ ಶೃತಾವತಾರ ಶೃತ ಪಂಚಮಿ ಮಹಾಪರ್ವ ನಿಮಿತ್ತವಾಗಿ ಹಮ್ಮಿಕೊಂಡ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಮಾತನಾಡಿದರು.
ದೇಶದಲ್ಲಿ ಶಾಂತಿ ನೆಲೆಸಲಿ, ಮಳೆ ಬೆಳೆಗಳು ಚೆನ್ನಾಗಿ ಆಗಿ ರೈತನ ಬಾಳು ಬೆಳಗಲಿ, ಅನ್ಯಾಯ ಅತ್ಯಾಚಾರಗಳು ಕಡಿಮೆಯಾಗಲಿ ಎಂಬ ಸದುದ್ದೇಶದಿಂದ ಈ ಶಾಂತಿ ಸಮಾರಂಭವನ್ನು ಹಮ್ಮಿಕೊಂಡಿದ್ದು ನಮಗೆ ಸಂತಸ ತಂದಿದೆ. ವಿವೇಚನೆಯಿಂದ ಕೂಡಿದ ಸಣ್ಣ ಪರಿಹಾರವೂ ಉತ್ತಮವಾಗಿರುತ್ತದೆ ಎಂಬುದನ್ನು ಗಮನದಲ್ಲಿಟ್ಟುಕೊಳ್ಳಬೇಕು. ಭದ್ರಗಿರಿ ಬೆಟ್ಟ ಪ್ರದೇಶದಲ್ಲಿ ದೊರೆತ ರತ್ನ ಖಚಿತ ಜಿನ ಬಿಂಬಗಳ ಪ್ರದರ್ಶನ ಮೂರು ದಿನಗಳವರೆಗೆ ನಡೆಯಲಿದೆ ಎಂದರು. ಭದ್ರಗಿರಿ ಕ್ಷೇತ್ರದ ಮತ್ತು ಆಚಾರ್ಯ ಭದ್ರಬಾಹು ಮುನಿ ಮಹಾರಾಜರ ಕುರಿತು ಕುಲರತ್ನಭೂಷಣ ಮಹಾರಾಜರು ವಿವರಿಸಿದರು.
ಮಹಾರಾಷ್ಟ್ರದಿಂದ 1,008 ಶ್ರಾವಕರು ಬೈಕ್ ರ್ಯಾಲಿ ಮೂಲಕ ಭದ್ರಗಿರಿ ಬೆಟ್ಟ ಪ್ರದೇಶಕ್ಕೆ ಆಗಮಿಸಿದರು. ಕಾರ್ಯಕ್ರಮದಲ್ಲಿ ದಿ.ಸಿದ್ದು ನ್ಯಾಮಗೌಡ ಅವರಿಗೆ ಮರಣೋತ್ತರವಾಗಿ ‘ರೈತರ ಕಣ್ಮಣಿ’ ಪ್ರಶಸ್ತಿಯನ್ನು ನೀಡಲಾಯಿತು. ಅವರ ಮಕ್ಕಳಾದ ಆನಂದ ಮತ್ತು ಬಸವರಾಜ ನ್ಯಾಮಗೌಡ ಇದ್ದರು.
ಜೈನ ಸಮಾಜದ ಹಿರಿಯರು ಮತ್ತು ದೇಶದ ಜೈನ ಸಮಾಜದ ಮುಖಂಡರಾದ ಸುರೇಶ ಜೈನ ಅವರಿಗೆ ಭದ್ರಗಿರಿ ಬೆಟ್ಟದ ವತಿಯಿಂದ ‘ಜೈನ ರತ್ನ’, ರಾಜೇಂದ್ರ ಕೇರಕರ್ ಅವರಿಗೆ ‘ಪರಿಸರವಾದಿ ರಾಷ್ಟ್ರೀಯ ಸೇವಾ ರತ್ನ’ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.