ADVERTISEMENT

ಅರ್ಧಕ್ಕೇ ಕೈ ತೊಳೆದುಕೊಂಡ ಸಿಬಿಐ: ಗೃಹ ಸಚಿವ

​ಪ್ರಜಾವಾಣಿ ವಾರ್ತೆ
Published 13 ನವೆಂಬರ್ 2017, 5:47 IST
Last Updated 13 ನವೆಂಬರ್ 2017, 5:47 IST
ಎ.ರಾಮಲಿಂಗಾರೆಡ್ಡಿ
ಎ.ರಾಮಲಿಂಗಾರೆಡ್ಡಿ   

ಬಳ್ಳಾರಿ: ಅಕ್ರಮ ಗಣಿಗಾರಿಕೆ ಮತ್ತು ಅದಿರು ಸಾಗಾಣಿಕೆ ಪ್ರಕರಣಗಳ ತನಿಖೆಯನ್ನು ಅರ್ಧಕ್ಕೇ ಕೈಬಿಟ್ಟು ಸಿಬಿಐ ಕೈತೊಳೆದುಕೊಂಡಿದೆ ಎಂದು ಗೃಹ ಸಚಿವ ರಾಮಲಿಂಗಾರೆಡ್ಡಿ ವ್ಯಂಗ್ಯವಾಡಿದರು.

ನಗರದಲ್ಲಿ ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಪ್ರಕರಣಗಳ ಮೂಲವನ್ನು ಹುಡುಕಿದ್ದರೆ ತನಿಖೆ ಪೂರ್ಣ ಗೊಳಿಸಲು ಸಿಬಿಐಗೆ ಸಾಧ್ಯವಿತ್ತು. 57 ಕಂಪೆನಿಗಳು ಅವ್ಯವಹಾರದಲ್ಲಿ ಪಾಲ್ಗೊಂಡಿವೆ, ಎಲ್ಲಿಂದ ಎಷ್ಟು ಅದಿರನ್ನು ಯಾವ ಕಂಪೆನಿ ಸಾಗಿಸಿದೆ ಎಂದು ಹೇಳುವ ಸಿಬಿಐ, ತನಿಖೆಯನ್ನು ಪೂರ್ಣಗೊಳಿಸಬಹುದಾಗಿತ್ತು’ ಎಂದರು.

‘ಇದು ಸಿಬಿಐನ ಅಸಮರ್ಥತೆಯನ್ನು ತೋರುತ್ತದೆ ಎಂಬುದಕ್ಕಿಂತಲೂ ಅಕ್ರಮ ಗಣಿಗಾರಿಕೆಯಿಂದ ರಾಜ್ಯದ ಬೊಕ್ಕಸಕ್ಕೆ ಆಗಿರುವ ಆಗಿರುವ ನಷ್ಟ ದೊಡ್ಡದು. ಆ ಅಂಶವನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಿದೆ. ತನಿಖೆ ಸಂಬಂಧ ಗೃಹ ಸಚಿವರ ಅಧ್ಯಕ್ಷತೆಯಲ್ಲಿರುವ ಸಚಿವ ಸಂಪುಟ ಉಪಸಮಿತಿ ಈಗಾಗಲೇ ಕೆಲವು ತೀರ್ಮಾನ ಕೈಗೊಂಡಿದೆ. ನಾನು ಗೃಹ ಸಚಿವನಾದ ಬಳಿಕ ಸಮಿತಿ ಸಭೆ ನಡೆದಿಲ್ಲ’ ಎಂದರು.

ADVERTISEMENT

‘ಪರಿಶಿಷ್ಟ ಸಮುದಾಯದ ನೌಕರರಿಗೆ ಬಡ್ತಿ ಮೀಸಲಾತಿ ನೀಡಬೇಕೆಂದು ಸಂಪುಟದಲ್ಲಿ ತೀರ್ಮಾನಿಸಲಾಗಿದ್ದು, ಈ ಸಂಬಂಧ ಅಧಿವೇಶನದಲ್ಲಿ ಚರ್ಚೆ ನಡೆಯಬೇಕಾಗಿದೆ’ ಎಂದರು. ಕಲಬುರ್ಗಿ ಹಂತಕರ ಬಂಧನ ಶೀಘ್ರ ‘ಗೌರಿ ಲಂಕೇಶ್‌ ಹತ್ಯೆಗೆ ಸಂಬಂಧಿಸಿ ಶಂಕಿತರನ್ನು ಎಸ್ಐಟಿ ವಶಕ್ಕೆ ಪಡೆದಿದೆ.

ಅವರು ಎಡಪಂಥೀಯರೋ ಬಲಪಂಥೀಯರೋ ಎಂಬುದನ್ನು ಈಗಲೇ ಬಹಿರಂಗ ಪಡಿಸಲು ಸಾಧ್ಯವಿಲ್ಲ. ಎಂ.ಎಂ. ಕಲಬುರ್ಗಿ ಅವರ ಕೊಲೆ ಆರೋಪಿಗಳನ್ನೂ ಶೀಘ್ರದಲ್ಲೇ ಬಂಧಿಸಲಾಗುವುದು. ಅದಕ್ಕೆ ಎಲ್ಲರೂ ಸ್ವಲ್ಪ ಸಾವಧಾನವಾಗಿರಬೇಕಷ್ಟೇ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.