ಕಂಪ್ಲಿ: ಇಲ್ಲಿಗೆ ಸಮೀಪದ ನಂ.1 ಇಟಗಿ ಗ್ರಾಮದಲ್ಲಿ ರೂ 38 ಲಕ್ಷ ವೆಚ್ಚದಲ್ಲಿ ನಿರ್ಮಿಸಿರುವ 25 ಅಡಿ ಎತ್ತರದ ಗ್ರಾಮದ ಆರಾಧ್ಯ ದೈವ ಸಂಗಮೇಶ್ವರ ನೂತನ ರಥಕ್ಕೆ ವಿವಿಧ ಮಠಾಧೀಶರು, ಮುಖಂಡರು ಸೋಮವಾರ ಚಾಲನೆ ನೀಡಿದರು.
ಈ ಹಿನೆಲೆಯಲ್ಲಿ ದೇವಸ್ಥಾನ ಆವರಣದಲ್ಲಿ ಜರುಗಿದ `ಧರ್ಮಸಭೆ~ಯಲ್ಲಿ ಹಂಪಿ ಸಾವಿರದೇವರ ಮಹಂತರ ಮಠದ ವಾಮದೇವ ಮಹಾಂತ ಶಿವಾಚಾರ್ಯ ಸ್ವಾಮೀಜಿ ಮಾತನಾಡಿ, ಸನಾತನ ಭಾರತೀಯ ಸಂಸ್ಕೃತಿಯಲ್ಲಿ ಹಾಸು ಹೊಕ್ಕಾಗಿರುವ ಹಬ್ಬಗಳು ಜನರಲ್ಲಿ ಪ್ರೀತಿ, ವಿಶ್ವಾಸ, ಸಾಮರಸ್ಯ ಇಮ್ಮಡಿಗೊಳಿಸುತ್ತವೆ ಎಂದರು.
ಜೆಡಿಎಸ್ ಜಿಲ್ಲಾ ಘಟಕದ ಅಧ್ಯಕ್ಷ, ಮಾಜಿ ಶಾಸಕ ಎನ್. ಸೂರ್ಯನಾರಾಯಣರೆಡ್ಡಿ ಮಾತನಾಡಿ, ಸಂಗಮೇಶ್ವರ ದೇವರಿಗೆ 5 ಕೆ.ಜಿ ತೂಕದ ಬೆಳ್ಳಿ ಮುಖವಾಡ ಮಾಡಿಸಿ ಕೊಡಲಾಗುವುದು ಎಂದು ಅವರು ಭರವಸೆ ನೀಡಿದರು.
ತೇರು ನಿರ್ಮಿಸಿದ ಶಿಲ್ಪಿಗಳಾದ ಹಂಸಾನಂದಾಚಾರ್ಯ ಮತ್ತು ಮೌನೇಶಾಚಾರ್ಯ ಅವರನ್ನು ಸನ್ಮಾನಿಸಲಾಯಿತು. ಹೆಬ್ಬಾಳು ನಾಗಭೂಷಣ ಶಿವಾಚಾರ್ಯ ಸ್ವಾಮೀಜಿ, ಕಂಪ್ಲಿ ಕಲ್ಮಠ ಅಭಿನವ ಪ್ರಭು ಸ್ವಾಮೀಜಿ, ಸಿಂಧನೂರು ಸೋಮನಾಥ ಶಿವಾಚಾರ್ಯ ಸ್ವಾಮೀಜಿ, ಮಹಾರಾಷ್ಟ್ರ ರಾಚೋಟೇಶ್ವರ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು.
ಇಟಗಿ ಮಲ್ಲನಗೌಡ, ಬ್ರಹ್ಮಕುಮಾರಿ ಭಾರತಿ, ತಾ.ಪಂ ಸದಸ್ಯ ಕೆ. ವೆಂಕಟರಾಮರಾಜು, ಜೆಡಿಎಸ್ ಮುಖಂಡ ಕೆ.ಎಂ. ಹೇಮಯ್ಯಸ್ವಾಮಿ, ಎಚ್. ಶಿವಶಂಕರಗೌಡ, ತಾಳೂರು ವೆಂಕಟೇಶ, ಮೀನಳ್ಳಿ ಚಂದ್ರಶೇಖರ, ಕೆ.ಎಂ. ರುದ್ರಮುನಿಸ್ವಾಮಿ, ಗುಂಡಯ್ಯಶಾಸ್ತ್ರಿ, ಟಿ. ಗಿರಿಧರ, ಬಸವಲಿಂಗಪ್ಪ, ಬಸವರಾಜಗೌಡ, ಶರಣಗೌಡ ಉಪಸ್ಥಿತರಿದ್ದರು.
ಗ್ರಾಮದಲ್ಲಿ ಸಂಗಮೇಶ್ವರ ನೂತನ ರಥೋತ್ಸವ ಸಂಜೆ ವಿಜೃಂಭಣೆಯಿಂದ ಜರುಗಿತು. ಭಕ್ತರು ಭಾಗವಹಿಸಿ ಹಣ್ಣು ಹೂವು ಎಸೆದು ಮನದ ಹರಕೆ ತೀರಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.