ಕೊಟ್ಟೂರು: ಮುಂಗಾರು ಹಂಗಾಮಿನ ಬಿತ್ತನೆ ಅವಧಿ ಆರಂಭದಲ್ಲಿಯೇ ಸಮರ್ಪಕ ಮಳೆ ಸುರಿದಿರುವುದರಿಂದ ತಾಲ್ಲೂಕಿನ ರೈತರು ಸಂಭ್ರಮದಲ್ಲಿದ್ದಾರೆ.
ಹಲವೆಡೆ ಬಿತ್ತನೆ ಕಾರ್ಯ ಚುರುಕುಗೊಂಡಿದೆ. ಹೆಸರು, ಮೆಕ್ಕೆ ಜೋಳ, ಬಿಳಿ ಜೋಳ, ತೊಗರಿ, ಸಜ್ಜೆ ಬಿತ್ತನೆ ಭರದಿಂದ ನಡೆದಿದೆ. ಮೇ ಅಂತ್ಯಕ್ಕೆ 45 ಮಿಲಿ ಮೀಟರ್ ಮಳೆಯನ್ನು ನಿರೀಕ್ಷಿಸಲಾಗಿತ್ತು. ಆದರೆ, ಈಗಾಗಲೇ 90 ಮಿಲಿ ಮೀಟರ್ ಮಳೆ ಸುರಿದಿದೆ.
ಬಿತ್ತನೆ ಕಾರ್ಯಕ್ಕೆ ಎತ್ತುಗಳನ್ನು ಬಳಸಿದರೆ ಬೆಳೆ ಸಮೃದ್ಧವಾಗಿ ಬೆಳೆದು ಉತ್ತಮ ಇಳುವರಿ ದೊರೆಯುತ್ತದೆ ಎಂಬುದು ರೈತರ ನಂಬಿಕೆ. ಆದರೆ, ಕೃಷಿ ಕೂಲಿ ಕಾರ್ಮಿಕರ ಕೊರತೆಯಿಂದಾಗಿ ರೈತರು ಎತ್ತುಗಳನ್ನು ತೊರೆದು ಟ್ರ್ಯಾಕ್ಟರ್ಗಳನ್ನು ಬಳಸಬೇಕಾಗಿದೆ. ಸ್ವಂತ ಎತ್ತುಗಳನ್ನು ಉಳ್ಳವರು ಮಾತ್ರ ಬಿತ್ತನೆ ಕಾರ್ಯ ಪೂರ್ಣಗೊಳಿಸಿ ನಂತರ ಬೇಡಿಕೆ ಇಟ್ಟಿರುವ ಕೃಷಿಕರ ಜಮೀನುಗಳಿಗೆ ಬಾಡಿಗೆ ನೀಡುವುದಾಗಿ ತಿಳಿಸಿದ್ದಾರೆ. ಹೀಗಾಗಿ ಹಲವರಿಗೆ ಕಾಯುವುದು ಅನಿವಾರ್ಯವಾಗಿದೆ.
‘ಹಿಂದಿನ ವರ್ಷಕ್ಕಿಂತ ಹೆಚ್ಚಿನ ಪ್ರಮಾಣದಲ್ಲಿ ರಿಯಾಯಿತಿ ದರದ ಬಿತ್ತನೆ ಬೀಜಗಳನ್ನು ಸಂಗ್ರಹಿಸಿ ಡಲಾಗಿದೆ’ ಎಂದು ತಾಲ್ಲೂಕು ಸಹಾಯಕ ಕೃಷಿ ನಿರ್ದೇಶಕ ಪ್ರಕಾಶ್ ತಿಳಿಸಿದರು. ‘ಈ ಬಾರಿಯ ಮುಂಗಾರು ಮಳೆ ಆರಂಭದಲ್ಲಿ ಉತ್ತಮವಾಗಿ ಬಂದಿದ್ದರಿಂದ ಹೊಲಗಳು ಹಸನಾಗಿವೆ. ಹೆಸರು,ಸಜ್ಜೆ, ತೊಗರಿ, ಸೂರ್ಯಕಾಂತಿ, ಎಳ್ಳು ಬಿತ್ತನೆ ಮಾಡುತ್ತಿದ್ದೇವೆ. ಮುಂದೆ ಮುಂಗಾರು ಬೆಳೆಗಳು ಉತ್ತಮ ಫಸಲು ನೀಡುವ ಭರವಸೆ ಇದೆ’ ಎಂದು ನಾಗೇನಹಳ್ಳಿ ಗ್ರಾಮದ ರೈತ ಅಂಜಿನಪ್ಪ ಹೇಳಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.