ADVERTISEMENT

ಕೆರೆಗಾಗಿ ಭೂಮಿ ಸ್ವಾಧೀನಕ್ಕೆ ವಿರೋಧ

​ಪ್ರಜಾವಾಣಿ ವಾರ್ತೆ
Published 6 ಜುಲೈ 2012, 5:50 IST
Last Updated 6 ಜುಲೈ 2012, 5:50 IST

ಸಿರುಗುಪ್ಪ: ಸಿರುಗುಪ್ಪ ಪಟ್ಟಣದ ಕುಡಿಯುವ ನೀರಿನ ಕೆರೆ ನಿರ್ಮಾಣದ ಯೋಜನೆಗೆ ಹಳೇಕೋಟೆ ಗ್ರಾಮದ ಭೂಮಿಯನ್ನು ಸರ್ಕಾರ ಸ್ವಾಧೀನಪಡಿಸಿ ಕೊಳ್ಳುವುದನ್ನು ವಿರೋಧಿಸಿ ಗುರುವಾರ ಗ್ರಾಮಸ್ಥರು ಬಳ್ಳಾರಿ-ಸಿರುಗುಪ್ಪ ರಸ್ತೆ ಮಾರ್ಗದಲ್ಲಿ ರಸ್ತೆ ತಡೆ ನಡೆಸಿದರು.

ಈ ಯೋಜನೆಗೆ 118 ಎಕರೆ ಭೂಮಿಯನ್ನು ಗುರುತಿಸಿದ್ದು ಅದನ್ನು ಭೂಸ್ವಾಧೀನ ಮಾಡಿಕೊಳ್ಳಲು ಸರ್ಕಾರ ಮುಂದಾಗಿ ಈಗಾಗಲೇ ಗ್ರಾಮ ಪಂಚಾಯ್ತಿಯಲ್ಲಿ ನೋಟಿಸ್‌ಗಳನ್ನು ಅಂಟಿಸಿದ್ದಾರೆ, ಇದರ ಬಗ್ಗೆ ಗ್ರಾಮಸ್ಥರು ಹಲವು ಬಾರಿ ಮೌಖಿಕವಾಗಿ, ಲಿಖಿತವಾಗಿ ಭೂಮಿ ಕೊಡುವುದಿಲ್ಲವೆಂದು ಮನವಿ ಸಲ್ಲಿಸಿದರೂ ಅಧಿಕಾರಿಗಳು ನಮಗೆ ಸ್ಪಂದಿಸಿಲ್ಲ ಎಂದು ಪ್ರತಿಭಟನಾಕಾರರು ದೂರಿದರು.

ಈ ಭೂಮಿಯ ಮಾಲೀಕರು ಬಹುತೇಕ ಬಡವರಿದ್ದು, ಕುಟುಂಬಕ್ಕೆ ಆಸರೆಯಾಗಿರುವ ಈ ಭೂಮಿಯನ್ನು ಸರ್ಕಾರ ಯೋಜನೆಗೆ ಬಳಸಿ ಕೊಂಡರೆ 80 ಕುಟುಂಬಗಳು ಬೀದಿ ಪಾಲಾಗುತ್ತವೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ನಮ್ಮ ಭೂಮಿಯನ್ನು ನಾವು ಬಿಟ್ಟುಕೊಡುವು ದಿಲ್ಲ, ಪ್ರಾಣ ಬಿಟ್ಟೇವೇ ಹೊರತು ಭೂಮಿ ಬಿಡುವುದಿಲ್ಲ ಎಂದು ಘೋಷಣೆ ಕೂಗುತ್ತಾ ರಸ್ತೆತಡೆ ನಡೆಸಿ ಪ್ರತಿಭಟಿಸಿದರು. ತಮ್ಮ ಬೇಡಿಕೆಯ ಮನವಿಯನ್ನು ತಹಶೀಲ್ದಾರ್ ಅವರಿಗೆ ಸಲ್ಲಿಸಿದರು.

ಗ್ರಾಮದ ಮುಖಂಡರಾದ ಬಿ.ದಿವಾಕರಗೌಡ, ಅಂಗಯ್ಯ, ಶೇಕ್ಷಾವಲಿ, ಮಲ್ಲಿಕಾರ್ಜುನಸ್ವಾಮಿ, ಬಿ.ಕೆ.ರಾಘು, ರುದ್ರಮುನಿಗೌಡ, ಎಂ.ನಾಗಪ್ಪ, ಈರಣ್ಣ, ಮಾರೆಪ್ಪ ಮತ್ತಿತರರು ನೇತೃತ್ವ ವಹಿಸಿದ್ದರು.

ಅರ್ಜಿ ಆಹ್ವಾನ: 2012-13ನೇ ಸಾಲಿಗೆ ಹಿಂದುಳಿದ ವರ್ಗಗಳ ಮತ್ತು ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ಮೆಟ್ರಿಕ್ ನಂತರದ ಬಾಲಕರ ವಿದ್ಯಾರ್ಥಿ ನಿಲಯ ಸಿರುಗುಪ್ಪ ಮತ್ತು ತೆಕ್ಕಲ ಕೋಟೆ ಹಾಗೂ ಮೆಟ್ರಿಕ್ ನಂತರದ  ಬಾಲಕಿಯರ ವಿದ್ಯಾರ್ಥಿ ನಿಲಯ ಸಿರುಗುಪ್ಪ ಈ ನಿಲಯಗಳಿಗೆ ಪ್ರವೇಶಕ್ಕಾಗಿ ಅರ್ಜಿಯನ್ನು ಆಹ್ವಾನಿಸಲಾಗಿದೆ. ಅರ್ಜಿ ಸಲ್ಲಿಸುವ ವಿದ್ಯಾರ್ಥಿಗಳು ಪ್ರವರ್ಗ-1, 2ಎ, 2ಬಿ, 3ಎ, 3ಬಿಗೆ ಸೇರಿದವರಾಗಿರಬೇಕು.
 
ವಾರ್ಷಿಕ ಆದಾಯ ರೂ. 15,000 ಹೊಂದಿರಬೇಕು. ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡದ ವಿದ್ಯಾರ್ಥಿಗಳು  ವಾರ್ಷಿಕ ಆದಾಯ ರೂ. 50,920 ಹೊಂದಿರ ಬೇಕು. ಅರ್ಜಿಯಲ್ಲಿ ವಿವರಗಳನ್ನು ದಾಖಲಿಸಿ ಕಾಲೇಜು ಮುಖ್ಯಸ್ಥರ ದೃಢೀಕರಣದ ನಂತರ ಇದೇ 11ರೊಳಗೆ ಅರ್ಜಿಗಳನ್ನು ಸಂಬಂಧಿಸಿದ ತಾಲ್ಲೂಕು ಹಿಂದುಳಿದ ವರ್ಗಗಳ ವಿಸ್ತರಣಾಧಿಕಾರಿಗಳ ಕಚೇರಿ, ಸಿರುಗುಪ್ಪ ಮತ್ತು ಸಂಬಂಧಿಸಿದ ನಿಲಯ ಪಾಲಕರಿಗೆ ಸಲ್ಲಿಸಿ ಸ್ವೀಕೃತಿ ಪಡೆಯಬೇಕು. ಅರ್ಜಿಗಳನ್ನು ಹಿಂದುಳಿದ ವರ್ಗಗಳ ವಿಸ್ತರಣಾ ಅಧಿಕಾರಿಗಳ ಕಚೇರಿಯಲ್ಲಿ ಪಡೆಯಬಹುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.