ಕೂಡ್ಲಿಗಿ: ಖಾಸಗಿ ಬಸ್ಸೊಂದು ಚಾಲಕ ನಿಯಂತ್ರಣ ತಪ್ಪಿ ರಸ್ತೆಯ ಪಕ್ಕಕ್ಕೆ ಉರುಳಿ ಬಿದ್ದಿದ್ದರಿಂದ 37 ಪ್ರಯಾಣಿಕರು ಗಾಯಗೊಂಡಿದ್ದಾರೆ. ಗುರುವಾರ ಮಧ್ಯಾಹ್ನ ಕೂಡ್ಲಿಗಿಯಿಂದ ಚಿಕ್ಕಜೋಗಿಹಳ್ಳಿ ಕಡೆ ಹೋಗುತ್ತಿದ್ದ ಎಸ್ಆರ್ಜೆ ಬಸ್ ಪಟ್ಟಣದ ಹೊರ ವಲಯದ ರಾಷ್ಟ್ರೀಯ ಹೆದ್ದಾರಿ 50ರಲ್ಲಿ ಮೊರಬನಹಳ್ಳಿ ಕ್ರಾಸ್ ಬಳಿ ಬಂದಾಗ ಚಾಲಕನ ನಿಯಂತ್ರಣ ತಪ್ಪಿ ಹೆದ್ದಾರಿ ನಿರ್ಮಾಣಕ್ಕಾಗಿ ತೋಡಿದ್ದ ಗುಂಡಿಗೆ ಬಿದ್ದಿದೆ.
ಇದರಿಂದ ಬಸ್ಸಿನಲ್ಲಿದ್ದ ಒಬ್ಬರು ತೀವ್ರವಾಗಿ ಗಾಯಗೊಂಡಿದ್ದು, 13 ಮಹಿಳೆಯರು ಹಾಗೂ ಮೂವರು ವಿದ್ಯಾರ್ಥಿನಿಯರು ಗಾಯಗೊಂಡಿದ್ದಾರೆ. ಗಾಯಳುಗಳನ್ನು ಕೂಡ್ಲಿಗಿ ಸಾರ್ವಜನಿಕ ಆಸ್ಪತ್ರೆಗೆ ಸಾಗಿಸಲಾಗಿದ್ದು, ತಾಲ್ಲೂಕು ಆರೋಗ್ಯಧಿಕಾರಿ ಡಾ. ಷಣ್ಮುಖ ನಾಯ್ಕ್ ಗಾಯಳುಗಳಿಗೆ ಚಿಕಿತ್ಸೆ ನೀಡಿದರು. ಇವರಿಗೆ ಆಸ್ಪತ್ರೆಯ ವೈದ್ಯರಾದ ಹನುಮಂತಪ್ಪ, ಮಧು ಸಹಕರಿಸಿದರು.
ಹೆಚ್ಚಿನ ಚಿಕಿತ್ಸೆಗಾಗಿ ಐವರು ಗಾಯಳುಗಳು ಆಸ್ಪತ್ರೆಯಲ್ಲಿದ್ದು, ಉಳಿದವರು ಚಿಕಿತ್ಸೆ ಪಡೆದು ಮನೆಗೆ ತೆರಳಿದ್ದಾರೆ. ಬಸ್ ಬಿದ್ದ ವಿಷಯ ತಿಳಿದು ತಮ್ಮ ಸಂಬಂಧಿಕರನ್ನು ನೋಡಲು ನೂರಾರು ಜನರು ಆಸ್ಪತ್ರೆಯ ಬಳಿ ಜಮಾಯಿಸಿದ್ದರು.
ಕ್ಯಾಸನಕೆರೆ, ಅಮಲಾಪುರ, ಬಣವಿಕಲ್ಲು ಗ್ರಾಮಗಳ ಪ್ರಯಾಣಿಕರೇ ಹೆಚ್ಚಾಗಿದ್ದರು. ತೀವ್ರವಾಗಿ ಗಾಯಗೊಂಡಿದ್ದ ಅಮಲಾಪುರ ಗ್ರಾಮದ ಬಿ. ವಿರುಪಾಕ್ಷಪ್ಪ ಅವರನ್ನು ಹೆಚ್ಚಿನ ಚಿಕಿತ್ಸೆಗಾಗಿ ಬಳ್ಳಾರಿ ವಿಮ್ಸ್ಗೆ ಕಳಿಸಲಾಗಿದೆ ಎಂದು ವೈದ್ಯರು ತಿಳಿಸಿದ್ದಾರೆ. ಕೂಡ್ಲಿಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.