ADVERTISEMENT

ಗಣಿಯೂರಿನ ರೈಲು ಅದಿರು ಸಾಗಣೆಗೆ ಮಾತ್ರ!

ಕೆ.ನರಸಿಂಹ ಮೂರ್ತಿ
Published 22 ನವೆಂಬರ್ 2017, 6:33 IST
Last Updated 22 ನವೆಂಬರ್ 2017, 6:33 IST
ಸಂಡೂರು ತಾಲ್ಲೂಕಿನ ಯಶವಂತನಗರ ನಿಲ್ದಾಣದ ಮೂಲಕ ಸಾಗಿದ ಅದಿರು ಸಾಗಣೆ ರೈಲು
ಸಂಡೂರು ತಾಲ್ಲೂಕಿನ ಯಶವಂತನಗರ ನಿಲ್ದಾಣದ ಮೂಲಕ ಸಾಗಿದ ಅದಿರು ಸಾಗಣೆ ರೈಲು   

ಬಳ್ಳಾರಿ: ಗಣಿಗಾರಿಕೆಯ ಕೇಂದ್ರವಾದ ಜಿಲ್ಲೆಯ ಸಂಡೂರು ತಾಲ್ಲೂಕಿನಲ್ಲಿ ಹಲವು ರೈಲು ಮಾರ್ಗಗಳಿವೆ. ಆದರೆ, ಜನಬಳಕೆಗೆ ಒಂದು ರೈಲೂ ಇಲ್ಲ. ಇಲ್ಲಿನ ರೈಲು ಮಾರ್ಗಗಳು, ಎರಡು ದಶಕಕ್ಕೂ ಹೆಚ್ಚು ಕಾಲದಿಂದ ಅದಿರು ಸಾಗಣೆಗೆ ಮಾತ್ರ ಬಳಕೆಯಾಗುತ್ತಿವೆ. ಆ ರೈಲುಗಳನ್ನು ನೋಡುತ್ತಾ ತಾಲ್ಲೂಕಿನ ಜನ ನಿರಾಶೆಯ ನಿಟ್ಟುಸಿರುಬಿಡುತ್ತಿದ್ದಾರೆ.

ಸಂಡೂರು ವ್ಯಾಪ್ತಿಯಲ್ಲಿ ಗಣಿಗಾರಿಕೆ ಮತ್ತು ಅದಿರು ಸಾಗಾಣಿಕೆ ನಡೆಯುವ ಸ್ವಾಮಿಹಳ್ಳಿ, ಯಶವಂತನಗರ, ರಾಮಘಡ, ಗುಂಡಾ, ಬನ್ನಿಹಟ್ಟಿ, ರಣಜಿತ್‌ಪುರ, ನಂದಿಹಳ್ಳಿ ಮತ್ತು ನರಸಾಪುರದಲ್ಲಿ ರೈಲು ನಿಲ್ದಾಣಗಳಿವೆ. ಒಂದೇ ಊರಿನಲ್ಲಿ ಇಷ್ಟೊಂದು ನಿಲ್ದಾಣಗಳಿರುವ ನಿದರ್ಶನಗಳೂ ಅಪರೂಪ. ಈ ಸ್ಥಳಗಳಲ್ಲಿ ರೈಲುಗಳು ಸಂಚರಿಸಲೆಂದೇ ನಾಲ್ಕು ಮಾರ್ಗಗಳೂ ಇವೆ. ಆದರೆ, ದಿನವೂ ಅದಿರು ಸಾಗಿಸುತ್ತಾ ಸಂಚರಿಸುವ ರೈಲುಗಳನ್ನು ನೋಡುವುದಷ್ಟೇ ಇಲ್ಲಿನ ಜನರಿಗೆ ದಕ್ಕಿದ ಭಾಗ್ಯ.

ಒಂದು ರೈಲಿತ್ತು: ‘ಎರಡು ದಶಕಕ್ಕೂ ಹಿಂದೆ ಸಂಡೂರಿನಿಂದ ಹೊಸಪೇಟೆಗೆ ಒಂದು ಪ್ರಯಾಣಿಕರ (ಪ್ಯಾಸೆಂಜರ್‌) ರೈಲು ಸಂಚರಿಸುತ್ತಿತ್ತು. ನಂದಿಹಳ್ಳಿ–ತೋರಣಗಲ್ಲು– ಬಳ್ಳಾರಿ– ಸ್ವಾಮಿಹಳ್ಳಿ ಮಾರ್ಗವಾಗಿ ಸಂಚರಿಸುತ್ತಿದ್ದ ಈ ರೈಲು 1995ರ ವೇಳೆಗೆ ಸ್ಥಗಿತಗೊಂಡಿತು’ ಎಂದು ನೆನಪಿಸಿಕೊಳ್ಳುತ್ತಾರೆ, ಅಕ್ರಮ ಗಣಿಗಾರಿಕೆ ವಿರುದ್ಧ ಹೋರಾಡುತ್ತಿರುವ ಜನಸಂಗ್ರಾಮ ಪರಿಷತ್ತಿನ ಜಿಲ್ಲಾ ಕಾರ್ಯದರ್ಶಿ ಶ್ರೀಶೈಲ ಆಲ್ದಳ್ಳಿ.

ADVERTISEMENT

‘ಸ್ಥಳೀಯವಾಗಿ ಪ್ರಭಾವಿ ರಾಜಕರಣಿಯಾಗಿದ್ದ ಎಂ.ವೈ.ಘೋರ್ಪಡೆಯವರ ಮುತುವರ್ಜಿಯ ಪರಿಣಾಮವಾಗಿ ರೈಲು ಮಾರ್ಗವನ್ನು ಮೀಟರ್‌ಗೇಜ್‌ನಿಂದ ಬ್ರಾಡ್‌ಗೇಜ್‌ಗೆ ಪರಿವರ್ತಿಸುವ ಕಾರ್ಯಕ್ಕೆ ಚಾಲನೆ ದೊರೆತಿತ್ತು. ಆದರೆ ಪರಿವರ್ತನೆಯಾದ ಬಳಿಕ ಪ್ಯಾಸೆಂಜರ್‌ ರೈಲು ಸೌಕರ್ಯ ಬರಲೇ ಇಲ್ಲ’ ಎಂದು ‘ಪ್ರಜಾವಾಣಿ’ಗೆ ತಿಳಿಸಿದರು.

ಸಾಲು ಮನವಿ: ‘ಸ್ವಾಮಿಹಳ್ಳಿವರೆಗೂ ಸಂಚರಿಸುತ್ತಿದ್ದ ಪ್ರಯಾಣಿಕರ ರೈಲನ್ನು ವಿಸ್ತರಿಸಬೇಕು ಎಂದು, ಹದಿನೈದು ವರ್ಷಗಳ ಹಿಂದೆಯೇ ತಾಲ್ಲೂಕಿನ ಯರದಮ್ಮನಹಳ್ಳಿ, ಲಿಂಗನಹಳ್ಳಿ, ನಾಗೇನಹಳ್ಳಿ, ಏಳುಗುಡ್ಡ, ಗೊಲ್ಲಲಿಂಗಮ್ಮನಹಳ್ಳಿಯ ಜನರು ಘೋರ್ಪಡೆ ಅವರಿಗೆ ಮನವಿಯನ್ನೂ ಸಲ್ಲಿಸಿದ್ದರು. ಅವರ ಆಸೆಯೂ ಈಡೇರಲಿಲ್ಲ’ ಎಂದು ವಿಷಾದಿಸಿದರು.

‘ತೋರಣಗಲ್ಲಿನಿಂದ ನಂದಿಹಳ್ಳಿಗೆ, ಹೊಸಪೇಟೆಯಿಂದ ಮರಿಯಮ್ಮನಹಳ್ಳಿ ಮಾರ್ಗವಾಗಿ ಸ್ವಾಮಿಹಳ್ಳಿವರೆಗೆ, ರಾಷ್ಟ್ರೀಯ ಖನಿಜ ಅಭಿವೃದ್ಧಿ ನಿಗಮ (ಎನ್‌.ಎಂ.ಡಿ.ಸಿ) ಕಾರ್ಯನಿರ್ವಹಿಸುವ ರಣಜಿತ್‌ಪುರದಿಂದ ತೋರಣಗಲ್‌ವರೆಗೆ ರೈಲು ಮಾರ್ಗವಿದೆ. ಇಲ್ಲೆಲ್ಲ ನಮಗೂ ಪ್ರಯಾಣಿಸಲು ರೈಲು ಇದ್ದಿದ್ದರೆ ಹೆಚ್ಚು ಅನುಕೂಲ ಆಗುತ್ತಿತ್ತು’ ಎಂದು ಭುಜಂಗನಗರದ ವೈ.ಸುಬ್ರಮಣಿ ಹೇಳುತ್ತಾರೆ.

‘ಎರಡು ದಶಕಗಳಿದ ರೈಲು ಸೌಕರ್ಯಕ್ಕಾಗಿ ಏಕೆ ಹೋರಾಟ ನಡೆಸಲಿಲ್ಲ’ ಎಂದು ಕೇಳಿದರೆ, ‘ಗಣಿಗಾರಿಕೆ ವಿರುದ್ಧದ ಹೋರಾಟದಲ್ಲೇ ಬಸವಳಿದಿದ್ದೇವೆ’ ಎನ್ನುತ್ತಾರೆ ಕಮತೂರಿನ ಎನ್‌.ಮಲ್ಲೇಶ್‌.

* * 

ಸಂಡೂರಿನಲ್ಲಿ ಪ್ಯಾಸೆಂಜರ್‌ ರೈಲು ಸಂಚರಿಸುತ್ತಿದ್ದ ಬಗ್ಗೆ ತಿಳಿದಿರಲಿಲ್ಲ. ಮತ್ತೆ ರೈಲು ಸೌಕರ್ಯ ಕಲ್ಪಿಸುವಂತೆ ರೈಲ್ವೆ ಇಲಾಖೆಯ ಗಮನ ಸೆಳೆಯುವೆ.
ಡಾ.ರಾಮಪ್ರಸಾದ್‌ ಮನೋಹರ್, ಜಿಲ್ಲಾಧಿಕಾರಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.