ADVERTISEMENT

ಗುಡ್ಡ ಕುಸಿತ: ಸ್ಮಾರಕಗಳ ರಕ್ಷಣೆ ಭರವಸೆ

​ಪ್ರಜಾವಾಣಿ ವಾರ್ತೆ
Published 11 ಮಾರ್ಚ್ 2011, 9:45 IST
Last Updated 11 ಮಾರ್ಚ್ 2011, 9:45 IST

ಹೊಸಪೇಟೆ: ಇಲ್ಲಿಗೆ ಸಮೀಪದ ಹಂಪಿಯ ಅಕ್ಕ ತಂಗಿಯರ ಗುಡ್ಡ ಬುಧವಾರ ಕುಸಿದು ಬಿದ್ದ ಹಿನ್ನೆಲೆಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಜನಾರ್ದನ ರೆಡ್ಡಿ ಹಾಗೂ ಇತರ ಜನಪ್ರತಿನಿಧಿಗಳು ಗುರುವಾರ ಸ್ಥಳಕ್ಕೆ  ಭೇಟಿ ನೀಡಿ ಸ್ಮಾರಕಗಳ ಸಂರಕ್ಷಣೆಗೆ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದರು.ಸಚಿವ ಬಿ. ಶ್ರೀರಾಮುಲು ಶಾಸಕ ಬಿ.ಎಸ್.ಆನಂದ ಸಿಂಗ್ ಈ ಸಂದರ್ಭದಲ್ಲಿ ಹಾಜರಿದ್ದರು.

ರಾಜ್ಯ ಹಾಗೂ ಕೇಂದ್ರ ಪುರಾತತ್ವ ಇಲಾಖೆಗಳು ತಮ್ಮ ವ್ಯಾಪ್ತಿಗೆ ಬರದು ಎಂದು ಹೇಳುವ ಮೂಲಕ ಘಟನೆಯ ಬಗ್ಗೆ ಮಾತನಾಡದಿರುವುದಕ್ಕೆ ಕಾರಣ ವಾಗಿದೆ. ಆದರೆ ಜಿಲ್ಲಾಧಿಕಾರಿಗಳ ಜತೆ ಮಾತನಾಡಿ ತಂಡ ರಚಿಸಿ ಸದ್ಯ ಆಗಿರುವ ಅನಾಹುತಕ್ಕೆ ಕಾರಣ ಮುಂದೆ ಅಪಾಯವಿದೆಯೇ, ಎಂಬ ನಿಖರ ತನಿಖೆ ಕೈಗೊಂಡು ಕ್ರಮ ಜರುಗಿಸುವುದಾಗಿ ತಿಳಿಸಿದರು.

ಅಲ್ಲದೆ ಪ್ರವಾಸೋದ್ಯಮ ಇಲಾಖೆಯಿಂದ ಇಂತಹ ಐತಿಹ್ಯಗಳಿಗೆ ಹಾನಿಯಾಗದಂತೆ ಕ್ರಮ ಕೈಗೊಳ್ಳುವುದಾಗಿ ತಿಳಿಸಿದರು.ಇತ್ತೀಚೆಗೆ ಕೆಲ ದಿನಗಳಿಂದ ನಿಧಿ ಶೋಧನಾ ನೆಪದಲ್ಲಿ ಅನೇಕ ಸ್ಮಾರಕಗಳನ್ನು ಭಗ್ನಗೊಳಿಸಿ ಹಾಳು ಮಾಡುತ್ತಿರುವ ಘಟನೆಗಳು ನೆನಪಿರುವಾಗಲೇ ನೈಸರ್ಗಿಕ ಸೌಂದರ್ಯದ ಜೊತೆಗೆ ಮೌಖಿಕ ಹಿನ್ನೆಲೆಯ ಅಕ್ಕ-ತಂಗಿಯರ ಗುಡ್ಡ ಕುಸಿದಿರುವುದು ಇತಿಹಾಸ ಹಾಗೂ ಸಂಸ್ಕೃತಿ ಪ್ರಿಯರಿಗೆ ಭಾವೋದ್ವೇಗಕ್ಕೆ ಒಳಗಾಗುವಂತೆ ಮಾಡಿದೆ.

ಕಮಲಾಪುರದಿಂದ ಹಂಪಿಗೆ ಹೋಗುವ ದಾರಿಯಲ್ಲಿ ಎಡಬದಿಗೆ ರಸ್ತೆಯ ಪಕ್ಕದಲ್ಲಿ ಎರಡು ಬೃಹದಾಕಾರದ ಅಕ್ಕ- ತಂಗಿಯರ ಒಡೆದ ಹಿನ್ನೆಲೆಯಲ್ಲಿ ಪ್ರವಾಸಿಗರು ಇದನ್ನು ನೋಡಲು ಬರುವ ದೃಶ್ಯ ಸಾಮಾನ್ಯವಾಗಿದೆ.

ನಿರ್ಲಕ್ಷ್ಯ: ಹಂಪಿ ಪರಿಸರ ವ್ಯಾಪ್ತಿಯಲ್ಲಿ ಬಹುತೇಕ ಇಲಾಖೆಗಳು ಪರಸ್ಪರ ಸಾಮರಸ್ಯದ ಕೊರತೆಯಿಂದ ಇಂತಹ ಅನೇಕ ಅವಘಡಗಳಿಗೆ ಕಾರಣ ಆಗುತ್ತಿದ್ದು ಯುನೆಸ್ಕೊ ಮಾರ್ಗಸೂಚಿ ಯಂತೆ ಕಾರ್ಯ ನಿರ್ವಹಿಸಲು ಮುಂದಾಗದಿರುವುದು ಬೇಸರದ ಸಂಗತಿಯಾಗಿದೆ ಎಂದು ಸ್ಥಳೀಯರು ಹೇಳುತ್ತಿದ್ದಾರೆ.
 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.