ADVERTISEMENT

ಚುನಾವಣೆ ನಾಮಪತ್ರ ಸಲ್ಲಿಕೆ ಪ್ರಕ್ರಿಯೆ ಆರಂಭ

​ಪ್ರಜಾವಾಣಿ ವಾರ್ತೆ
Published 21 ಮಾರ್ಚ್ 2014, 8:42 IST
Last Updated 21 ಮಾರ್ಚ್ 2014, 8:42 IST

ಬಳ್ಳಾರಿ: ಲೋಕಸಭೆ ಚುನಾವಣೆ ಹಿನ್ನೆಲೆಯಲ್ಲಿ ಗುರುವಾರ ಜಿಲ್ಲಾಧಿಕಾರಿ ಕಚೇರಿಯಲ್ಲಿ ಮೊದಲ ನಾಮಪತ್ರ ಸಲ್ಲಿಕೆಯಾಗಿದ್ದು, ಸೋಷಲಿಸ್ಟ್ ಯೂನಿಟಿ ಸೆಂಟರ್‌ ಆಫ್‌ ಇಂಡಿಯಾ (ಎಸ್‌ಯೂಸಿಐ)–ಸಿ ಪಕ್ಷದ ಅಭ್ಯರ್ಥಿ­ಯಾಗಿ ಎ.ದೇವದಾಸ್‌ ಉಮೇದು­ವಾರಿಕೆ ಸಲ್ಲಿಸಿದರು.

ನಗರದ ಒಡ್ಡರಬಂಡೆ ಪ್ರದೇಶ­ದಲ್ಲಿರುವ ರಾಧಿಕಾ ಚಿತ್ರಮಂದಿರದ ಮುಂಭಾಗದಿಂದ ನಗರದ ಮುಖ್ಯ ರಸ್ತೆಗಳಲ್ಲಿ ಪಕ್ಷದ ಮುಖಂಡರು ಹಾಗೂ ಬೆಂಬಲಿಗರೊಂದಿಗೆ ಪಾದ­ಯಾತ್ರೆ ಮೂಲಕ ಆಗಮಿಸಿದ ದೇವದಾಸ್‌, ನಾಲ್ವರು ಪ್ರಮುಖ­ರೊಂದಿಗೆ ತೆರಳಿ ಹೆಚ್ಚುವರಿ ಜಿಲ್ಲಾಧಿ­ಕಾರಿ ವೆಂಕಟೇಶ್‌ ಅವರಿಗೆ ನಾಮಪತ್ರ ಸಲ್ಲಿಸಿದರು.

‘ಚುನಾವಣೆಗಳು ಬರುತ್ತಿವೆ, ಹೋಗುತ್ತಿವೆ. ಆದರೆ, ಜನತೆ ಎದುರಿ­ಸುತ್ತಿರುವ ಸಮಸ್ಯೆಗಳು ಮಾತ್ರ ಮುಂದುವರಿದೇ ಇವೆ. ಈ ಹಿನ್ನೆಲೆ­ಯಲ್ಲಿ ಕೇವಲ ಆಶ್ವಾಸನೆ ನೀಡಿ ಜನರಿಗೆ ಮೋಸ ಮಾಡುವ ಪಕ್ಷಗಳ ಅಭ್ಯರ್ಥಿ­ಗಳನ್ನು ಮತದಾರರು ತಿರಸ್ಕರಿಸ­ಬೇಕಿದೆ’ ಎಂದು ಅವರು ನಂತರ ಸುದ್ದಿಗಾರ ಎದುರು ಅಭಿಪ್ರಾಯ­­ಪಟ್ಟರು.

ಜನರನ್ನು ಪ್ರತಿನಿಧಿಸುವವರು ಸಮಸ್ಯೆಗಳ ನಿವಾರಣೆಗೆ ಶ್ರಮಿಸಬೇಕು. ಜನವಿರೋಧಿ  ನೀತಿ ಅನುಸರಿಸುವ­ವರಿಗೆ ತಕ್ಕ ಪಾಠ ಕಲಿಸಬೇಕು. ಜನಪರ ಹೋರಾಟಗಳನ್ನು ರೂಪಿಸಿರುವ ಎಸ್‌ಯುಸಿಐ–ಸಿ ಪಕ್ಷ ಬೆಂಬಲಿಸುವ ಮೂಲಕ ಮತದಾರರು ತಮ್ಮ ಸೇವೆಗೆ ಅನುವು ಮಾಡಿಕೊಡಬೇಕು ಎಂದು ಅವರು ಕೋರಿದರು.

ಪಕ್ಷದ ಮುಖಂಡರಾದ ಕೆ.ಸೋಮ­ಶೇಖರ್‌, ಆರ್‌. ಸೋಮಶೇಖರಗೌಡ, ಎಂ.ಎನ್ ಮಂಜುಳಾ, ಜಿ.ಎಂ. ವೀರಭದ್ರಯ್ಯ, ಎಸ್‌.ಜಿ. ನಾಗರತ್ನಾ ಈ ಸಂದರ್ಭ ಹಾಜರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.