ADVERTISEMENT

ಜನವರಿಯಲ್ಲಿ ಹಂಪಿ ಉತ್ಸವ: ಜಾರಕಿಹೊಳಿ

​ಪ್ರಜಾವಾಣಿ ವಾರ್ತೆ
Published 18 ಅಕ್ಟೋಬರ್ 2011, 9:10 IST
Last Updated 18 ಅಕ್ಟೋಬರ್ 2011, 9:10 IST

ಬಳ್ಳಾರಿ: ಜಿಲ್ಲೆಯಲ್ಲಿ ಬರಗಾಲ ಸ್ಥಿತಿ ಎದುರಾಗಿರುವ ಹಿನ್ನೆಲೆಯಲ್ಲಿ ಇತಿಹಾಸ ಪ್ರಸಿದ್ಧ ಹಂಪಿ ಉತ್ಸವವನ್ನು ಜನವರಿಯಲ್ಲಿ ಹಮ್ಮಿಕೊಳ್ಳಲಾಗುವುದು  ಎಂದು  ಜಿಲ್ಲಾ ಉಸ್ತುವಾರಿ ಸಚಿವ ಬಾಲಚಂದ್ರ ಜಾರಕಿಹೊಳಿ ತಿಳಿಸಿದರು.

ನಗರದಲ್ಲಿ ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಈ ವಿಷಯ ತಿಳಿಸಿದ ಅವರು, ಜಿಲ್ಲೆಯಲ್ಲಿ ಬರಗಾಲ ಸ್ಥಿತಿ ನಿರ್ಮಾಣವಾಗಿದ್ದು, ಪ್ರಸ್ತುತ ಪರಿಹಾರ ಕಾರ್ಯ ಕೈಗೊಳ್ಳಲಾಗುತ್ತಿದೆ. ಈ ಹಿನ್ನೆಲೆಯಲ್ಲಿ ಜನವರಿ ತಿಂಗಳಲ್ಲೇ ಹಂಪಿ ಉತ್ಸವ ಹಮ್ಮಿಕೊಳ್ಳಲಾಗುವುದು ಎಂದರು.


`ಬೆಳಗಾವಿ ಜಿಲ್ಲೆಯ ಉಸ್ತುವಾರಿ ನೀಡುವಂತೆ ಮುಖ್ಯಮಂತ್ರಿ ಸದಾನಂದಗೌಡ ಅವರ ಬಳಿ ಮನವಿ ಮಾಡಿದ್ದರಿಂದ ಬಳ್ಳಾರಿ ಜಿಲ್ಲೆಯ ಉಸ್ತುವಾರಿ ವಹಿಸಿಕೊಳ್ಳಲು ನಿರಾಕರಿಸಿದ್ದೆ. ಬಿ.ಶ್ರೀರಾಮುಲು ಹಾಗೂ ಜಿ.ಜನಾರ್ದನರೆಡ್ಡಿ ಅವರ ಸಹಕಾರದಿಂದಾಗಿ ನನಗೆ ಸಚಿವ ಸ್ಥಾನ ದೊರೆಯಲು ಕಾರಣವಾಗಿತ್ತು. ಅವರ ಜಿಲ್ಲೆಯಲ್ಲಿ ಉಸ್ತುವಾರಿ ವಹಿಸಿಕೊಳ್ಳಲು ನಿರಾಕರಿಸಿದ್ದೆ. ಆ ಕುರಿತು ಜನರಲ್ಲಿ ಕ್ಷಮೆ ಯಾಚಿಸುವೆ~ ಎಂದು ಅವರು ಹೇಳಿದರು.

ಶಾಸಕರು ಮತ್ತು ಜಿಲ್ಲಾಧಿಕಾರಿಯವರು ಹಾಗೂ ಅಧಿಕಾರಿಗಳ ನಡುವೆ ಸಾಮರಸ್ಯ ನಿರ್ಮಾಣ ಮಾಡಲು ಶ್ರಮಿಸುವುದಾಗಿ ತಿಳಿಸಿದ ಅವರು, ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳು ಒಂದಾಗಿ ಕೆಲಸ ಮಾಡಿದರೆ ಮಾತ್ರ ಜನರ ಸಮಸ್ಯೆಗಳಿಗೆ ಪರಿಹಾರ ದೊರೆಯಲಿದೆ ಎಂಬುದನ್ನು ಮನವರಿಕೆ ಮಾಡಿದ್ದಾಗಿ ಸ್ಪಷ್ಟಪಡಿಸಿದರು.

ತಿಂಗಳಿಗೆ ಎರಡು ಬಾರಿ ಜಿಲ್ಲೆಗೆ ಭೇಟಿ ನೀಡಿ, ಸಭೆ ನಡೆಸುವುದಾಗಿ ತಿಳಿಸಿದ ಅವರು, ನವೆಂಬರ್ 3 ಅಥವಾ 4ರಂದು ಕೆಡಿಪಿ ಸಭೆ ನಡೆಸಲಾಗುವುದು ಎಂದರು.

ಶಾಸಕರಾದ ಸೋಮಲಿಂಗಪ್ಪ, ನೇಮರಾಜ ನಾಯ್ಕ, ಚಂದ್ರಾ ನಾಯ್ಕ, ಮೃತ್ಯುಂಜಯ ಜಿನಗಾ, ಮೇಯರ್ ಪಾರ್ವತಿ ಇಂದುಶೇಖರ್, ಉಪಮೇಯರ್ ಶಶಿಕಲಾ, ಜಿಲ್ಲಾಧಿಕಾರಿ ಎ.ಎ. ಬಿಸ್ವಾಸ್ ಉಪಸ್ಥಿತರಿದ್ದರು. 

ವಾಲ್ಮೀಕಿ ಜಯಂತಿ ಆಚರಣೆ
ಮರಿಯಮ್ಮನಹಳ್ಳಿ:
ಸಮೀಪದ ಡಣಾಪುರ ಗ್ರಾಮದಲ್ಲಿ ವಾಲ್ಮೀಕಿ ಯುವಕ ಸಂಘದವರು ಈಚೆಗೆ ವಾಲ್ಮೀಕಿ ಜಯಂತಿ ಆಚರಿಸಿದರು. ಗ್ರಾ.ಪಂ. ಅಧ್ಯಕ್ಷ ಎನ್. ಮುದುಕಪ್ಪ ಕಾರ್ಯಕ್ರಮ ಉದ್ಘಾಟಿಸಿ, ವಾಲ್ಮೀಕಿಯವರ ಆದರ್ಶಗಳನ್ನು ಜೀವನದಲ್ಲಿ ಅಳವಡಿಸಿಕೊಂಡು, ಅವುಗಳನ್ನು ಪಾಲಿಸುವಂತೆ ತಿಳಿಸಿದರು.

ತಾ.ಪಂ. ಮಾಜಿ ಉಪಾಧ್ಯಕ್ಷ ವ್ಯಾಸನಕೆರೆ ಶ್ರೀನಿವಾಸ, ವಾಲ್ಮೀಕಿ ಯುವಕ ಸಂಘದ ಅಧ್ಯಕ್ಷ ಪ್ರಕಾಶ್, ಗ್ರಾ.ಪಂ. ಕಾರ್ಯದರ್ಶಿ ಟಿ. ಮಹಮ್ಮದ್ ಅಲಿ, ಸದಸ್ಯರಾದ ವೆಂಕಟಗಿರಿ, ಮಾಜಿ ಸದಸ್ಯ ಅಂಜಿನಪ್ಪ, ಮುಖ್ಯ ಶಿಕ್ಷಕ ಬಿ.ಎಂ.ಎಸ್. ಮೃತ್ಯುಂಜಯ, ಸೋಮಪ್ಪ ಇತರರು ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT