ADVERTISEMENT

ಠಾಣೆಯಲ್ಲಿ ಸಾವು ಪ್ರಕರಣ: ಕುರುಗೋಡು ಇಂದು ಬಂದ್

​ಪ್ರಜಾವಾಣಿ ವಾರ್ತೆ
Published 10 ಅಕ್ಟೋಬರ್ 2011, 5:10 IST
Last Updated 10 ಅಕ್ಟೋಬರ್ 2011, 5:10 IST

ಕುರುಗೋಡು: ಕಳ್ಳತನ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಚಾರಣೆಗೆ ಕರೆ ತಂದಿದ್ದ ಶಿವಕುಮಾರ್ ಎನ್ನುವ ವ್ಯಕ್ತಿ ಪಟ್ಟಣದ ಪೊಲೀಸ್ ಠಾಣೆಯಲ್ಲಿ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆಯನ್ನು ನ್ಯಾಯಾಂಗ ತನಿಖೆಗೆ ವಹಿಸುವಂತೆ ಒತ್ತಾಯಿಸಿ ಸೋಮವಾರ ಕುರುಗೋಡು ಬಂದ್‌ಗೆ ಕರೆ ನೀಡಲಾಗಿದೆ.

ಪಟ್ಟಣದಲ್ಲಿ ವಿವಿಧ ಸಂಘಟನೆಗಳ ಮುಖಂಡರು ಭಾನುವಾರ ಪತ್ರಿಕಾ ಗೋಷ್ಠಿಯಲ್ಲಿ ಈ ವಿಷಯ ತಿಳಿಸಿದ್ದಾರೆ.
ಘಟನೆ ಸಂಬಂಧ ಪೊಲೀಸ್ ಇಲಾಖೆ ಪಿಎಸ್‌ಐ ಮತ್ತು ಎಎಸ್‌ಐಯನ್ನು ಅಮಾನತುಗೊಳಿಸಿ, ಇಲಾಖೆಯ ತಪ್ಪು ಮುಚ್ಚಿ ಹಾಕಲು ಘಟನೆಯ ತನಿಖೆ ಯನ್ನು ಸಿಓಡಿಗೆ ವಹಿಸಿ  ಕೈತೊಳೆದು ಕೊಂಡಿದ್ದಾರೆ. ಇದರಿಂದ ಘಟನೆಯ ಸತ್ಯಾಂಶ ತಿಳಿದು ನಿಜವಾದ ಅಪರಾಧಿ ಗಳಿಗೆ ಶಿಕ್ಷೆಯಾಗುವುದಿಲ್ಲ. ಆದ್ದರಿಂದ ಘಟನೆಯ ಸತ್ಯಾಸತ್ಯತೆ ತಿಳಿಯಲು ನ್ಯಾಯಾಂಗ ತನಿಖೆಗೆ ವಹಿಸಬೇಕು. ಆತ್ಮಹತ್ಯೆ ಮಾಡಿಕೊಂಡ ವ್ಯಕ್ತಿಯ ಕುಟುಂಬಕ್ಕೆ ಸೂಕ್ತ ಪರಿಹಾರ ನೀಡಬೇಕು ಎಂದು ಒತ್ತಾಯಿಸಿದ್ದಾರೆ.

ವಿವಿಧ ಪಕ್ಷಗಳ ಮುಖಂಡರಾದ ಕೆ.ಗಾದಿಲಿಂಗಪ್ಪ, ಎಚ್.ಎಂ. ವಿಶ್ವನಾಥ ಸ್ವಾಮಿ, ಮಹ್ಮದ್ ಖಾನ್, ಗಾಳಿ ಬಸವರಾಜ, ಟಿ.ಸಿದ್ದಪ್ಪ, ಕೆ.ಜಿ. ಮಂಜುನಾಥ ಶೆಟ್ಟಿ,  ಚಾನಾಳು ಆನಂದ, ನರಸಪ್ಪ, ದಿವಾಕರ್, ವಿ.ಅಂಬಣ್ಣ, ವಿ.ಭೋಗಪ್ಪ ಹಾಗೂ ಇತರರು ಉಪಸ್ಥಿತರಿದ್ದರು.

ಬಿಗಿ ಬಂದೋಬಸ್ತ್
ಕಳ್ಳತನ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಚಾರಣೆಗೆ ಕರೆ ತರಲಾಗಿದ್ದ ಶಿವಕುಮಾರ್ ಮೃತಪಟ್ಟ ವಿಷಯ ಬಳಿಕ ಪಟ್ಟಣದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿದೆ. ಈ ಹಿನ್ನೆಲೆಯಲ್ಲಿ ಠಾಣೆ ಎದುರು ಬಿಗಿ ಬಂದೋಬಸ್ತ್ ಏರ್ಪಡಿಸಲಾಗಿದೆ.

ಪರಿಸ್ಥಿತಿ ತೀವ್ರತೆಯನ್ನು ಅರಿತ ಪೊಲೀಸ್ ಇಲಾಖೆ ಜಿಲ್ಲೆಯ ವಿವಿಧ ಭಾಗಗಳಿಂದ ಬಂದಿರುವ ಹೆಚ್ಚುವರಿ ಪೊಲೀಸ್ ಸಿಬ್ಬಂದಿ ಜಿಲ್ಲಾ ಮೀಸಲು ಪಡೆದಯ ಒಂದು ತುಕಡಿ ಪಟ್ಟಣದ ಪ್ರಮುಖ ಸ್ಥಳಲ್ಲಿ ಮತ್ತು ಪೊಲೀಸ್ ಠಾಣೆಯಲ್ಲಿ ಬೀಡುಬಿಟ್ಟಿದೆ.

ಜಿಲ್ಲಾ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಕ್ಯಾತನ್ ಮತ್ತು ಬಳ್ಳಾರಿ ಗ್ರಾಮೀಣ ವಿಭಾಗದ ಡಿವೈಎಸ್‌ಪಿ ಬಾಬು ಡಿ.ಕೋಳೇಕರ್ ಠಾಣೆಯಲ್ಲಿ ಮುಕ್ಕಾಂ ಹೂಡಿದ್ದಾರೆ.

ಮನವಿ ಪತ್ರ: ಕರ್ನಾಟಕ ರಕ್ಷಣಾ ವೇದಿಕೆ ಕಾರ್ಯಕರ್ತರು ಜಿಲ್ಲಾ ಕಾರ್ಯದರ್ಶಿ ಚಾನಾಳ್ ಚನ್ನ ಬಸವರಾಜ ನೇತೃತ್ವದಲ್ಲಿ ಪೊಲೀಸ್ ಠಾಣೆಗೆ ತೆರಳಿ ಬಳ್ಳಾರಿ ಗ್ರಾಮೀಣ ವಿಭಾಗದ ಡಿವೈಎಸ್‌ಬಿ ಬಾಬು ಡಿ. ಕೋಳೇಕರ್‌ಗೆ ಮನವಿಪತ್ರಸಲ್ಲಿಸಿ ತಪ್ಪಿತಸ್ಥರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದ್ದಾರೆ. ಸಾಳೇರು ವೆಂಕಟೇಶ್, ಗವಿಯಪ್ಪ, ಪಂಚಾಕ್ಷರಿಸ್ವಾಮಿ, ನಾಗನಗೌಡ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.