ADVERTISEMENT

ತಿಂಬಕ ಅನ್ನಬ್ಯಾಡ, ಕುಡಿಯಾಕ್ ನೀರ್ ಕೊಡ್ರಿ

​ಪ್ರಜಾವಾಣಿ ವಾರ್ತೆ
Published 5 ಏಪ್ರಿಲ್ 2012, 8:20 IST
Last Updated 5 ಏಪ್ರಿಲ್ 2012, 8:20 IST

ಹಳೆಜೋಗಿಕಲ್ಲು(ಸಂಡೂರು): `ತಿಂಬಕ ಅನ್ನಬ್ಯಾಡ, ರೊಕ್ಕಾನೂ ಬ್ಯಾಡ~ ನಮಿಗೆ ಕುಡಿಯಾಕ್ ನೀರ್ ಕೊಟ್ರ ಸಾಕು ಯಂಗೊ ... ಮಕ್ಕಳು ಮರಿ ಬದಿಕೆಂಬ್‌ತೀವಿ ಎರಡು ತಿಂಗಳಿಂದ ಕೆರಿ ವಂಡ್ ನೀರು ಕುಡ್ದು ಬದುಕಾಕ  ಹತ್ತೀವಿ. ನಮ್ಮ ಕಷ್ಟ ಯಾವ ವೈರಿಗೂ ಬ್ಯಾಡ ಸ್ವಾಮಿ~ ಎಂಬ ತಪ್ತ ನುಡಿ ವ್ಯಕ್ತವಾಗುವುದು ತಾಲ್ಲೂಕಿನ ಹಳೆಜೋಗಿಕಲ್ಲು ಗ್ರಾಮಸ್ಥರಿಂದ.

ಗ್ರಾಮದಲ್ಲಿ 150 ಮನೆಗಳಿವೆ. ಸಾವಿರ ಜನ ವಾಸವಾಗಿದ್ದಾರೆ. ಎರಡು ತಿಂಗಳಿನಿಂದ ಜನ ಜಾನುವಾರುಗಳಿಗೆ ಕುಡಿಯುವ ನೀರು ಸಿಗದಾಗಿದೆ. ದನಕರುಗಳನ್ನು ನೀರು ಕುಡಿಸಲು ಪರ ಊರುಗಳಿಗೆ ಹೊಡೆದುಕೊಂಡು ಹೋಗಬೇಕಾದ ದುಃಸ್ಥಿತಿ ಎದುರಾಗಿದೆ. ಕುಡಿಯಲು ಕೆರೆಯ ವರತೆ ನೀರನ್ನೇ ಬಳಸುವಂತಾಗಿದೆ ಎಂಬುದು ಗ್ರಾಮಸ್ಥರ ಆರೋಪ.

ಕೆರೆ ಬತ್ತಿದೆ. ಕೆರೆಯಲ್ಲಿ ತೋಡಿದ ಗುಂಡಿಯಲ್ಲಿ  ಕೆಲಸ ಬಿಟ್ಟು ಹಗಲು ರಾತ್ರಿ ನೀರು ಹಿಡಿಯುವುದೇ ಗ್ರಾಮಸ್ಥರ ಮುಖ್ಯ ಉದ್ಯೋಗವಾಗಿದೆ. `ಪಾಳೆ ತಪ್ಪಬಾರ್ದು ಅಂತ ರಾತ್ರಿ ಇಲ್ಲೆ ಕೆರೆಗಾ ಮಕ್ಕಳನ್ನ ಕರಕಂದ್ ಮಕ್ಕಂಬ್‌ತೀವಿ. ಅದೂ ದಿನಕ್ಕ ಯಲ್ಡ್ ಕೊಡ ಸಿಗದ ಕಷ್ಟಾಗಿದೆ. ಗುಂಡಿಯ ವರತೆ ನೀರೆ ಜೀವ ಬದುಕಿಸಿದೆ~ ಎನ್ನುತ್ತಾರೆ ಗ್ರಾಮದ ಕೊಟ್ರಮ್ಮ, ಚೆನ್ನಾಪುರಮ್ಮ, ಹೊನ್ನೂರಮ್ಮ, ಮಾರಮ್ಮ.

ಕಿತ್ತು ಹೋಗಿರುವ ಪೈಪ್‌ಲೈನ್ ಮೂಲಕ  ತೊಟ್ಟಿ ಬಳಿ ನೀರು ಹಿಡಿಯುವಾಗ ಹೆಣ್ಣು ಮಕ್ಕಳು ಜಗಳವಾಡಿ ತಾಳಿ ಹರಿದುಕೊಂಡ ಘಟನೆಗಳು ನಡೆದಿವೆ. ನೀರಿನ ಸಮಸ್ಯೆ ಇದೇ ರೀತಿ ಮುಂದುವರಿದರೆ ಪಕ್ಕದ ಬ್ಯಾಲಕುಂದಿ ಊರಿನಲ್ಲಿ ನೀರಿಗಾಗಿ ಹೊಡೆದಾಡಿ ವ್ಯಕ್ತಿಯೊಬ್ಬ ಮೃತಪಟ್ಟಂತೆ ಇಲ್ಲೂ ಸಾಯಬೇಕಾಗುತ್ತದೆ ಎನ್ನುವ ಆತಂಕ ವೆಂಕಟೇಶ ಮತ್ತು ಆಂಜಿನಪ್ಪ ಅವರದು.

ಗ್ರಾಮದ ಕುಡಿವ ನೀರಿಗಾಗಿ ತೊಟ್ಟಿ ಇದೆ. ಲಕ್ಷಗಟ್ಟಲೆ ವೆಚ್ಚ ಮಾಡಿ ನಿರ್ಮಿಸಿದ ಟ್ಯಾಂಕ್ ನಿರುಪಯುಕ್ತವಾಗಿದೆ. ಗ್ರಾಮಕ್ಕೆ ಪೂರೈಕೆಯಾಗುವ ವಿದ್ಯತ್‌ನ ಅವಧಿ ಎರಡು ತಾಸು. ಕಿತ್ತುಹೋಗಿರುವ ನೀರಿನ ಪೈಪ್‌ಲೈನ್ ದುರಸ್ತಿಯಾಗಬೇಕಾಗಿದೆ. ನೀರಿನ ತೊಂದರೆ ಸರಿಪಡಿಸುವಂತೆ ಗ್ರಾಮ ಪಂಚಾಯಿತಿ ಪಿಡಿಒ, ಕಾರ್ಯದರ್ಶಿ, ಅಧ್ಯಕ್ಷರಿಗೆ ತಿಳಿಸಿದರೂ ಪ್ರಯೋಜನವಾಗಿಲ್ಲ. ಶಾಸಕರಿಗೂ ಹಳ್ಳಿಯ ನೀರಿನ ಸಮಸ್ಯೆ ಹೇಳಿಕೊಂಡಾಗ ಮಾಡಿಕೊಡವ ಭರವಸೆ ನೀಡಿದರೆ ಹೊರತು ಕೆಲಸವಾಗಿಲ್ಲ ಎಂಬುದು ಮಾಜಿ ಗ್ರಾಮ ಪಂಚಾಯಿತಿ ಸದಸ್ಯ ಚೆನ್ನಾಪರಪ್ಪ ಅವರ ಆರೋಪ.
 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.