ಬಳ್ಳಾರಿ: ಐದು ವರ್ಷ ಕಾಲ ನಗರ ಕ್ಷೇತ್ರದಲ್ಲಿ ಜನರಿಗೆ ಕಾಣಿಸಿಕೊಳ್ಳಲಿಲ್ಲ ಎಂಬ ಗಂಭೀರ ಆರೋಪಕ್ಕೆ ಒಳಗಾದ ಕಾಂಗ್ರೆಸ್ ಶಾಸಕ ಅನಿಲ್ ಎಚ್.ಲಾಡ್. ತಮ್ಮ ನಿರ್ಲಕ್ಷ್ಯ ಧೋರಣೆಗೆ ತಕ್ಕ ಬೆಲೆ ತೆತ್ತಿದ್ದಾರೆ. ಅವರ ವಿರುದ್ಧ ಬಿಜೆಪಿಯ ಜಿ.ಸೋಮಶೇಖರ ರೆಡ್ಡಿ ಭರ್ಜರಿ ಗೆಲುವು ಸಾಧಿಸಿದ್ದಾರೆ.
‘ಕಳಂಕಿತರಿಗೆ ಟಿಕೆಟ್ ಕೊಡುವುದಿಲ್ಲ’ ಎಂಬ ಮಾತುಗಳ ನಡುವೆಯೂ, ಸೋಮಶೇಖರ ರೆಡ್ಡಿ ಚುನಾವಣೆಗೂ ಮುನ್ನ ಹಾಗೂ ಟಿಕೆಟ್ ಘೋಷಣೆಗೂ ಮುನ್ನ ಪ್ರಚಾರ ಆರಂಭಿಸಿದ್ದರು. ಅವರಿಗೆ ಜನರಿಂದ ಭರಪೂರ ಸ್ವಾಗತವೂ ಸಿಕ್ಕಿತ್ತು. ರೆಡ್ಡಿಯವರ ಮೇಲಿರುವ ಬೇಲ್ ಡೀಲ್ ಆರೋಪ ಅವರ ಗೆಲುವಿಗೆ ಅಡ್ಡಿ ಆಗಿಲ್ಲ.
ಆದರೆ ಅನಿಲ್ಲಾಡ್, ನಾಮಪತ್ರ ಸಲ್ಲಿಸಿದ ಬಳಿಕವೂ ಕ್ಷೇತ್ರದ ಹೆಚ್ಚು ಮತದಾರರನ್ನು ಮುಟ್ಟಲು ಆಗಲಿಲ್ಲ. ಅಲ್ಲದೆ, ಅವರು ಮೊದಲಿಗೆ ಪ್ರಚಾರ ಆರಂಭಿಸಿದ, ಬಿಸಿಲಹಳ್ಳಿಯಲ್ಲೇ ಮಹಿಳೆಯರು ತರಾಟೆಗೆ ತೆಗೆದುಕೊಂಡಿದ್ದರು.
‘ಶಾಸಕ ಕ್ಷೇತ್ರದಲ್ಲಿ ಇರುವುದು ಮುಖ್ಯವಲ್ಲ. ಅಭಿವೃದ್ಧಿ ಆಗುವುದು ಮುಖ್ಯ’ ಎಂಬ ಸಮರ್ಥನೆಯಿಂದ ಲಾಡ್ ಅವರಿಗೆ ಹೆಚ್ಚು ಲಾಭವಾಗಿಲ್ಲ. ಈ ಇಬ್ಬರ ನಡುವೆ, ಜೆಡಿಎಸ್ನಿಂದ ಸ್ಪರ್ಧಿಸಿದ ಮಹ್ಮದ್ ಇಕ್ಬಾಲ್ ಹೊತೂರ್, ಮತದಾನಕ್ಕೆ ಕೆಲವು ದಿನಗಳಿರುವಂತೆ ಹೆಚ್ಚು ಮತದಾರರ ಗಮನ ಸೆಳೆದಂತೆ ಕಂಡರೂ, ಅವು ಮತಗಳಾಗಿ ಪರಿವರ್ತನೆಯಾಗಿಲ್ಲ.
ಅಲ್ಪಸಂಖ್ಯಾತರು ಹೆಚ್ಚಿರುವ ಕ್ಷೇತ್ರದಲ್ಲಿ ಆ ಮತಗಳನ್ನು ಸೆಳೆಯುವ ಸಲುವಾಗಿಯೇ ಮುಸ್ಲಿಂ ಅಭ್ಯರ್ಥಿಯನ್ನು ಕಣಕ್ಕೆ ಇಳಿಸಲಾಗಿದೆ ಎಂದು ಜೆಡಿಎಸ್ ರಾಜ್ಯ ಘಟಕದ ಅಧ್ಯಕ್ಷ ಎಚ್.ಡಿ.ಕುಮಾರಸ್ವಾಮಿ ಹೇಳಿದ್ದರು.
ಕಾಂಗ್ರೆಸ್ಗೆ ಗೆಲುವು ತಂದುಕೊಡಬಹುದಾಗಿದ್ದ ಅಲ್ಪಸಂಖ್ಯಾತರ ಮತಗಳು ಹೊತೂರ್ ಅವರಿಗೆ ದಕ್ಕಿದರೂ ಗೆಲುವು ಸಾಧ್ಯವಾಗಿಲ್ಲ. ಮೂವರು ಪ್ರಮುಖರ ವಿರುದ್ಧ ಕಿಡಿ ಕಾರಿದ್ದ ಜೆಡಿಯು ಅಭ್ಯರ್ಥಿ ಟಪಾಲ್ ಗಣೇಶ್ ಕೂಡ ಗಣನೀಯ ಮತ ಗಳಿಸುವಲ್ಲಿ ವಿಫಲರಾಗಿದ್ದಾರೆ.
ಗೆಲುವಿಗೆ ಕಾರಣವಾದ ಅಂಶಗಳು
ಚುನಾವಣೆ ಘೋಷಣೆಗಿಂತ ಮುಂಚೆ ರೆಡ್ಡಿ ಪ್ರಚಾರ
2008ರಲ್ಲಿ ಶಾಸಕರಾಗಿದ್ದಾಗ ಮಾಡಿದ್ದ ಅಭಿವೃದ್ಧಿ ಕೆಲಸ
ಅನಿಲ್ಲಾಡ್ ಬಗೆಗಿನ ಮತದಾರರ ಬೇಸರ
ವ್ಯಾಪಕ ಪ್ರಚಾರ ಮಾಡದ ಲಾಡ್
ಕಾಂಗ್ರೆಸ್ ಮತಗಳನ್ನು ಸೆಳೆದ ಜೆಡಿಎಸ್ನ ಇಕ್ಬಾಲ್ ಹೊತೂರ್
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.