ADVERTISEMENT

ನೀರು ಅಕ್ರಮ ಬಳಕೆ ವಿರುದ್ಧ ದಾಳಿ

​ಪ್ರಜಾವಾಣಿ ವಾರ್ತೆ
Published 22 ಸೆಪ್ಟೆಂಬರ್ 2011, 11:10 IST
Last Updated 22 ಸೆಪ್ಟೆಂಬರ್ 2011, 11:10 IST

ಕುರುಗೋಡು: ಸಮೀಪದ ಸೋಮಲಾಪುರ ಮತ್ತು ಓರ‌್ವಾಯಿ ಗ್ರಾಮಗಳಲ್ಲಿ ತುಂಗಭದ್ರಾ ಕೆಳಮಟ್ಟದ ಕಾಲುವೆಯಲ್ಲಿ ಅನಧಿಕೃತವಾಗಿ ನೀರು ಬಳಕೆ ಮಾಡುತ್ತಿದ್ದವರ ಹೊಲಗಳಿಗೆ ಮಂಗಳವಾರ ದಾಳಿ ನಡೆಸಿದ ನೀರಾವರಿ ಇಲಾಖೆ ಅಧಿಕಾರಿಗಳ ತಂಡ ನೀರಾವರಿ ಕಾಲುವೆಗೆ ಅಳವಡಿಸಿದ್ದ ಮೋಟರ್, ಕೊಳವೆ ವಶಪಡಿಸಿಕೊಂಡಿದೆ. ಈ ಕುರಿತು ಪಟ್ಟಣದ ಪೊಲೀಸ್ ಠಾಣೆಗೆ ದೂರು ನೀಡಿದೆ. 

ಇಲಾಖೆಯ ಅಂದಾಜಿನ ಪ್ರಕಾರ ಪಟ್ಟಣ ವ್ಯಾಪ್ತಿಯಲ್ಲಿ ಸುಮಾರು 2500ಎಕರೆಯಲ್ಲಿ ಅನಧೀಕೃತವಾಗಿ  ನೀರಿನ ಬಳಕೆಯಾಗುತ್ತಿದೆ ಎನ್ನಲಾಗಿದೆ. ಇದರಿಂದಾಗಿ ಅಯಕಟ್ಟು ಸೌಲಭ್ಯ ಹೊಂದಿದ ಕೊನೆಯ ಭಾಗದ ರೈತರಿಗೆ ಸಕಾಲಕ್ಕೆ ನೀರು ದೊರೆಯದೆ ಬೆಳೆ ಹಾಳಾಗಿ ನಷ್ಟ ಸಂಭವಿಸುತ್ತಿದೆ.

ಈ ಬಗ್ಗೆ ರೈತರು ವಿವಿಧ ಪ್ರತಿಭಟನೆ ನಡೆಸಿದ್ದರು. ಇದರನ್ವಯ ಸಹಾಯ ಆಯುಕ್ತ ಆದೇಶ ನೀಡಿದ್ದು, ಅನಧಿಕೃತ ನೀರಿನ ಬಳಕೆಗೆ ಕಡಿವಾಣ ಹಾಕುವಂತೆ ಸೂಚಿಸಿದ್ದರು.  ಸೂಚನೆ ಮೇರೆಗೆ ಕಂದಾಯ, ನೀರಾವರಿ, ಪೊಲೀಸ್ ಮತ್ತು ವಿದ್ಯುತ್ ಇಲಾಖೆ ಅಧಿಕಾರಿಗಳ ತಂಡ ಎರಡು ಗ್ರಾಮದಲ್ಲಿ ಹಠಾತ್ ದಾಳಿ ನಡೆಸಿ ವಶಪಡಿಸಿಕೊಂಡ 19ಮೋಟರ್ ಮತ್ತು ಪೈಪ್‌ಗಳನ್ನು ಪೊಲೀಸರ ವಶಕ್ಕೆ ನೀಡಿ ತಪ್ಪಿತಸ್ಥರ ಮೇಲೆ ಪ್ರಕರಣ ದಾಖಲಿಸಲು ಸೂಚಿಸಿದ್ದಾರೆ.

ರೈತರ ಮನವಿ:  ಸೋಮಲಾಪುರ ಕ್ರಾಸ್‌ಬಳಿ ಮೋಟರ್ ವಶಪಡಿಸಿ ಕೊಳ್ಳುತ್ತಿದ್ದ ತಂಡವನ್ನು ತಡೆದ ರೈತರು ಸಹಸ್ರಾರು ರೂಪಾಯಿ ವೆಚ್ಚಮಾಡಿ ಬೆಳೆಸಿದ ಬೆಳೆ ನಷ್ಟವಾಗುತ್ತದೆ. ಹೀಗಾಗಿ ಇದೊಂದು ಬಾರಿ ಸಹಕಾರ ನೀಡುವಂತೆ ಅಧಿಕಾರಿಗಳನ್ನು ಬೇಡಿಕೊಂಡರು. ಇದಕ್ಕೆ ಅಧಿಕಾರಿಗಳು ಸಮ್ಮತಿಸದೆ ದಾಳಿ ಮುಂದುವರೆಸಿದರು. 

ತುಂಗಭದ್ರಾ ಮಂಡಳಿ ಉಪ ವಿಭಾಗಾಧಿಕಾರಿ ಪಾರ್ಥಸಾರಥಿ, ವಿಶೇಷ ತಹಸೀಲ್ದಾರ ದಾಸಪ್ಪ, ಉಪ ತಹಸೀಲ್ದಾರ ಎಚ್. ವಿಶ್ವನಾಥ್, ಜೆಸ್ಕಾಂ ಹಾಗೂ ಪೊಲೀಸ್ ಇಲಾಖೆ ಅಧಿಕಾರಿಗಳು ದಾಳಿಯಲ್ಲಿ ಪಾಲ್ಗೊಂಡಿದ್ದರು.

`ಶಿಕ್ಷಕ ವೃತ್ತಿ ಪ್ರೀತಿಸಿ~
ಹೊಸಪೇಟೆ: ಶಿಕ್ಷಕರು ತಮ್ಮ ವೃತ್ತಿ ಪ್ರೀತಿಸಿ ಜೊತೆಗೆ ಭೋದನೆಯಲ್ಲಿ ತಮ್ಮನ್ನು ತಾವು ತೊಡಗಿಸಿಕೊಳ್ಳಬೇಕು ಎಂದು ಗುಲ್ಬರ್ಗಾ ಸಿಇಟಿ ರೀಡರ್ ಡಾ.ರಾಜೇಂದ್ರಪ್ರಸಾದ್ ತಿಳಿಸಿದರು.
ನಗರದ ಮಂಗಳವಾರ ಪೂಲ್‌ಬನ್ ಉರ್ದು ಶಾಲೆಯಲ್ಲಿ ಜಿಲ್ಲಾ ಮಟ್ಟದ ಆಂಗ್ಲಭಾಷಾ ಪ್ರೌಢಶಾಲೆಗಳ ಶಿಕ್ಷಕರ ತರಬೇತಿ ಕಾರ್ಯಾಗಾರದಲ್ಲಿ ಅವರು ಮಾತನಾಡಿದರು.

ಕ್ಷೇತ್ರ ಶಿಕ್ಷಣಾಧಿಕಾರಿ ಎಲ್.ಡಿ.ಜೋಶಿ ಮಾತನಾಡಿ,  ಕಲಿಕೆ ವಿಧಾನಗಳಲ್ಲಿ ಆಗುತ್ತಿರುವ ಬದಲಾವಣೆಗಳನ್ನು ತಿಳಿದು ಭೋಧನಾ ಸಾಮರ್ಥ್ಯವನ್ನು ವೃದ್ದಿಸಿಕೊಂಡು ಮಕ್ಕಳಿಗೆ ತಿಳಿಸಲು ಕಾರ್ಯಾಗಾರ ಮೈಲುಗಲ್ಲಾಗಲಿ ಎಂದರು.

ಸಂಸ್ಥೆ ಅಧ್ಯಕ್ಷ ಜಾಫರ್‌ಸಾಬ್, ಎ.ಎಂ ಮುಲ್ಲಾ ಉಪನ್ಯಾಸಕ ಹಿರೇಮಠ, ಸೇರಿದಂತೆ ಸಂಪನ್ಮೂಲ ವ್ಯಕ್ತಿಗಳು ಹಾಜರಿದ್ದರು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.