ADVERTISEMENT

ಪಡಿತರ ಚೀಟಿಗೆ ಮುಗಿಬಿದ್ದ ಜನತೆ

​ಪ್ರಜಾವಾಣಿ ವಾರ್ತೆ
Published 3 ಜೂನ್ 2013, 9:34 IST
Last Updated 3 ಜೂನ್ 2013, 9:34 IST

ಹೂವಿನಹಡಗಲಿ: ರಾಜ್ಯದಲ್ಲಿ ಅಸ್ಥಿತ್ವಕ್ಕೆ ಬಂದ ಹೊಸ ಸರ್ಕಾರ ಬಿಪಿಎಲ್ ಕುಟುಂಬಗಳಿಗೆ ಕೆಜಿಗೆ 1 ರೂಪಾಯಿ ಯಂತೆ 30 ಕೆಜಿ ಅಕ್ಕಿ ವಿತರಿಸುವ ಘೋಷಣೆ ಮಾಡುತ್ತಿದ್ದಂತೆ ಬಿಪಿಎಲ್ ಕಾರ್ಡ್ ಪಡೆಯಲು ಫಲಾನುಭವಿಗಳು ಹರಸಾಹಸ ನಡೆಸಿದ್ದಾರೆ.

ಇನ್ನೂ ಗ್ರಾಮೀಣ ಫಲಾನುಭವಿ ಗಳಿಗೆ ಹೊಸ ಕಾರ್ಡ್ ನೀಡಲು ಸರ್ಕಾರ ಆದೇಶ ಹೊರಡಿಸಿಲ್ಲ. ಕಾರ್ಡ್ ಪಡೆ ಯುಲ್ಲಿ ಇರುವ ತೊಡಕುಗಳನ್ನು ನಿವಾರಿಸಿಕೊಳ್ಳಲು  ನೂಕು ನುಗ್ಗಲು ಆರಂಭವಾಗಿದೆ.

ಪಡಿತರ ಕಾರ್ಡ್‌ನಲ್ಲಿರುವ ಲೋಪ ದೋಷ ಸರಿಪಡಿಸಿಕೊಳ್ಳಲು, ಕಾರ್ಡ್ ಚಲಾವಣೆಯಲ್ಲಿದೆಯೋ ಇಲ್ಲವೋ ತಿಳಿದುಕೊಳ್ಳಲು ತಾಲ್ಲೂಕಿನಾದ್ಯಂತ ನಿತ್ಯ ಸಾವಿರಾರು ಫಲಾನುಭವಿಗಳು ಇಲ್ಲಿನ ವಿನಿವಿಧಾನಸೌಧದಲ್ಲಿರುವ ಆಹಾರ ಶಾಖೆಗೆ ಭೇಟಿ ಕೊಡುತ್ತಿದ್ದಾರೆ.

ಲೋಪ ಸರಿಪಡಿಸಿಕೊಳ್ಳಲು ಕಳೆದ 6 ತಿಂಗಳ ಹಿಂದೆ ಆಹಾರ ಇಲಾಖೆ ನೀಡಿದ ಸೂಚನೆ ಹಿನ್ನೆಲೆಯಲ್ಲಿ 4 ಸಾವಿರಕ್ಕೂ ಹೆಚ್ಚು ಅರ್ಜಿಗಳು ದಾಖಲಾಗಿದ್ದವು. ಕಾರ್ಡ್ ತಿದ್ದುಪಡಿ, ಹೊಸ ಸೇರ್ಪಡೆ, ಪೋತಿಯಾದವರ ಹೆಸರು ತೆಗೆದು ಹಾಕುವುದು, ಹೊಂದಾಣಿಕೆಯಾಗದ ಫೋಟೋ ಮತ್ತು ಬೆರಳಚ್ಚು ಸರಿಪಡಿ ಸುವಂತೆ ಕೋರಿ ದಿನನಿತ್ಯ ಸಾವಿರಾರು ಫಲಾನುಭವಿಗಳು ಬರುತ್ತಿದ್ದಾರೆ.

ಇಡೀ ತಾಲ್ಲೂಕಿನ 24 ಗ್ರಾ.ಪಂ. ಗಳ ಕಾರ್ಡ್ ತಿದ್ದುಪಡಿ ಕೆಲಸ ಒಂದೇ ಕಡೆ ಆಗಬೇಕಿ ರುವುದರಿಂದ ಆಹಾರ ಶಾಖೆಯ ಮೇಲೆ ಸಹಜವಾಗಿಯೇ ಒತ್ತಡ ಬಿದ್ದಿದೆ.

ಈಗಿರುವ ಸಿಬ್ಬಂದಿ ಮತ್ತು ಕಂಪ್ಯೂಟರ್ ವ್ಯವಸ್ಥೆಯಲ್ಲಿ ಪ್ರತಿದಿನ 300 ಕಾರ್ಡ್‌ಗಳ ಲೋಪಗಳನ್ನು ಸರಿಪಡಿಸಿ ಹೊಸ ಕಾರ್ಡ್ ಗಳನ್ನು ಮುದ್ರಿಸಿ ಕೊಡಬಹುದಾಗಿದೆ. ಕನಿಷ್ಠ ಐದಾರು ನೂರು ಫಲಾನು ಭವಿಗಳು ದಿನವಿಡೀ ಸರದಿ ಸಾಲಿನಲ್ಲಿ ನಿಲ್ಲುತ್ತಿರುವುದರಿಂದ ಹೆಚ್ಚಿನ ಸಂಖ್ಯೆಯ ಫಲಾನುಭವಿಗಳು ನಿರಾಸೆಯಿಂದ ವಾಪಾಸ್ಸಾಗುತ್ತಿದ್ದಾರೆ.

ಪಡಿತರ ಕಾರ್ಡ್‌ನ ಲೋಪದೋಷ, ಬೆರಳಚ್ಚು ಗುರುತುಗಳನ್ನು ಸರಿಪಡಿ ಸುವ ಕೆಲಸ ಒಂದೇ ಕಡೆ ಆಗಿರುವು ದರಿಂದ ತೀವ್ರ ತೊಂದರೆಯಾಗಿದೆ. ಕೂಲಿ ಕೆಲಸ ಬಿಟ್ಟು ಇಡೀ ದಿನ ಕಾದು ಕುಳಿತರೂ ಕಾರ್ಡ್ ತಿದ್ದುಪಡಿಯಾಗದೇ ಬರಿಗೈಯಲ್ಲಿ ವಾಪಾಸ್ಸಾಗುತ್ತಿದ್ದೇನೆ ಎಂದು ಹಗರನೂರಿನ ತಿಮ್ಮಪ್ಪ ಬೇಸರ ವ್ಯಕ್ತಪಡಿಸುತ್ತಾರೆ.

ಕಾರ್ಡ್ ತಿದ್ದುಪಡಿ ಕೆಲಸವನ್ನು ಪ್ರತಿ ಗ್ರಾ.ಪಂ.ನಲ್ಲಿ ನಡೆಸುವ ಮೂಲಕ ಬಡವರ ನೆರವಿಗೆ ಸರ್ಕಾರ ಬರಲಿ ಎಂದು ಒತ್ತಾಯಿಸಿದರು.

ನಗರ ಪ್ರದೇಶಗಳಲ್ಲಿನ ಫಲಾನುಭವಿ ಗಳಿಂದ ಹೊಸ ಕಾರ್ಡ್‌ಗೆ ಅರ್ಜಿ ಸ್ವೀಕರಿಸಲು ಸರ್ಕಾರ ಆದೇಶಿಸಿದೆ. ಸಮರ್ಪಕ ಮಾಹಿತಿ ಇಲ್ಲದ ಗ್ರಾಮೀಣ ಪ್ರದೇಶದ ಜನತೆ ಈಗಲೇ ಹೊಸ  ಕಾರ್ಡ್ ನೀಡುವಂತೆ ಆಹಾರ ಇಲಾಖೆ ಅಧಿಕಾರಿಗಳಲ್ಲಿ ಮೊರೆ ಇಡುತ್ತಿದ್ದಾರೆ.

ಅಗ್ಗ ದರದಲ್ಲಿ ಅಕ್ಕಿ ನೀಡುವ ಸರ್ಕಾರದ ಘೋಷಣೆಯಿಂದ ಬಿಪಿಎಲ್ ಕಾರ್ಡ್‌ಗಳಿಗೆ ಬೇಡಿಕೆ ಹೆಚ್ಚಾಗಿದ್ದು, ಹೊಸ ಅರ್ಜಿ ಸ್ವೀಕರಿಸಲು ಸರ್ಕಾರ ಆದೇಶಿಸಿದರೆ  ಮತ್ತೆ ಲೆಕ್ಕವಿಲ್ಲದಷ್ಟು ಅರ್ಜಿ ಸಲ್ಲಿಕೆಯಾಗುವ ನಿರೀಕ್ಷೆ ಇದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.