ADVERTISEMENT

ಪಾದಚಾರಿ ರಸ್ತೆಯಲ್ಲಿ ವ್ಯಾಪಾರ: ಸಂಚಾರಕ್ಕೆ ಅಡ್ಡಿ- ಆರೋಪ

​ಪ್ರಜಾವಾಣಿ ವಾರ್ತೆ
Published 25 ಜನವರಿ 2012, 4:30 IST
Last Updated 25 ಜನವರಿ 2012, 4:30 IST

ಕಂಪ್ಲಿ: ಪಟ್ಟಣದ ಡಾ. ರಾಜ್‌ಕುಮಾರ ಮುಖ್ಯರಸ್ತೆಯಲ್ಲಿ ಚಿಲ್ಲರೆ ವ್ಯಾಪಾರಿಗಳು ಪಾದಚಾರಿ ರಸ್ತೆಯಲ್ಲಿಯೇ ವ್ಯಾಪಾರ ಶುರು ಮಾಡಿದ್ದರಿಂದ ಸಂಚಾರಕ್ಕೆ ತೀವ್ರ ತೊಂದರೆಯಾಗಿದೆ. ವಾಹನ ನಿಲುಗಡೆಗೂ ಅಡ್ಡಿಯಾಗಿದೆ. ಸಮಸ್ಯೆಗೆ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಪುರಸಭೆ ಸದಸ್ಯ ವಿ. ವಿದ್ಯಾಧರ ಪುರಸಭೆ ಮತ್ತು ಪೊಲೀಸ್ ಇಲಾಖೆಗೆ ಮನವಿ ಮಾಡಿದ್ದಾರೆ.

ಪಟ್ಟಣದ ಪ್ರಮುಖ ರಸ್ತೆಯಲ್ಲಿ ಚಿಲ್ಲರೆ ವ್ಯಾಪಾರಿಗಳ ವ್ಯಾಪಾರದ ಭರಾಟೆಯಲ್ಲಿ ಪಾದಚಾರಿ ದಾರಿಯಲ್ಲಿ ಜನ ಸಂಚಾರಕ್ಕೆ ತೊಂದರೆಯಾಗಿದೆ. ಹೀಗಾಗಿ ಪಾದಚಾರಿಗಳು ಮುಖ್ಯರಸ್ತೆಯಲ್ಲಿ ಓಡಾಡುತ್ತಿದ್ದಾರೆ. ಜನರ ಓಡಾಟದ ದಟ್ಟಣೆಯಿಂದಾಗಿ ವಾಹನಗಳ ಸುಗಮ ಸಂಚಾರಕ್ಕೆ ಅಡ್ಡಿಯಾಗುತ್ತಿದೆ ಎಂದು ತಿಳಿಸಿದ್ದಾರೆ.

ಪಟ್ಟಣದ ಗಂಗಾನಗರ ಕಮಾನು ಬಳಿ, ಉದ್ಭವ ಗಣಪತಿ ದೇವಸ್ಥಾನ ಮತ್ತು ನಡುಲ ಮಸೀದಿ ಹತ್ತಿರ ರಸ್ತೆಗೆ ಅಡ್ಡಲಾಗಿ ಬೀಡಾಡಿ ದನಗಳು ಮಲಗಿಕೊಳ್ಳುತ್ತಿವೆ. ಅವುಗಳ ಮಾಲೀಕರು ದನಗಳನ್ನು ರಸ್ತೆಗೆ ಬಿಟ್ಟು ಸುಮ್ಮನಾಗುವರು. ಅಪಘಾತ ಸಂಭವಿಸಿದರೆ ತಕ್ಷಣವೇ ಸ್ಥಳಕ್ಕೆ ಆಗಮಿಸಿ, ದನಗಳಿಗೆ ಲಕ್ಷಗಟ್ಟಲೆ ಬೆಲೆ ಕಟ್ಟಿ ದೌರ್ಜನ್ಯ ನಡೆಸುವರು. ಅಲ್ಲದೆ ವಾಹನಗಳ ಓಡಾಟದಿಂದಾಗಿ ಸಂಚಾರಕ್ಕೂ ಮತ್ತು ಜನತೆಗೂ ತೊಂದರೆ ಆಗುತ್ತಿದೆ ಎಂದು ಹೇಳಿದ್ದಾರೆ.

ಪಟ್ಟಣದ ಹಳೇ ಬಸ್ ನಿಲ್ದಾಣದಲ್ಲಿ ಲಕ್ಷಾಂತರ ರೂಪಾಯಿ ವೆಚ್ಚ ಮಾಡಿ ತಳ್ಳು ಬಂಡಿ ವ್ಯಾಪಾರಿಗಳಿಗೆ ಪುರಸಭೆ ಪ್ರತ್ಯೇಕ ಅನುಕೂಲ ಮಾಡಿಕೊಟ್ಟಿದೆ. ಆದರೆ ಎಲ್ಲ ತಳ್ಳು ಬಂಡಿ ವ್ಯಾಪಾರಿಗಳು ಮುಖ್ಯರಸ್ತೆ ಮತ್ತು ಡಾ. ಅಂಬೇಡ್ಕರ್ ವೃತ್ತದಲ್ಲಿ ವ್ಯಾಪಾರ ಮಾಡುತ್ತಿದ್ದಾರೆ. ಇದೂ ಸಹ ಸಂಚಾರಕ್ಕೆ ತೊಂದರೆಯಾಗುತ್ತಿದೆ ಇದನ್ನೂ ಸರಿಪಡಿಸಬೇಕು ಎಂದು ಮನವಿ ಮಾಡಿದ್ದಾರೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.