ADVERTISEMENT

ಬಡಜನರ ಕಲ್ಯಾಣಕ್ಕೆ ಶ್ರಮಿಸಿ: ರಂಭಾಪುರಿ ಶ್ರೀ

​ಪ್ರಜಾವಾಣಿ ವಾರ್ತೆ
Published 3 ಫೆಬ್ರುವರಿ 2011, 7:05 IST
Last Updated 3 ಫೆಬ್ರುವರಿ 2011, 7:05 IST

ಕಂಪ್ಲಿ: ರಾಜಕೀಯ ಧುರೀಣರು ಸೇಡಿನ ಮನೋವೃತ್ತಿ ಬಿಟ್ಟು ಜನಪರ ನಿಲುವು ಹೊಂದಿ ಬಡಜನರ ಕಲ್ಯಾಣ, ಉನ್ನತಿ ಮತ್ತು ಶ್ರೇಯಸ್ಸಿಗಾಗಿ ಶ್ರಮಿಸುವಂತೆ ಬಾಳೆಹೊನ್ನೂರು ರಂಭಾಪುರಿ ಮಠದ ವೀರ ಸೋಮೇಶ್ವರ ಜಗದ್ಗುರುಗಳು ಸಲಹೆ ನೀಡಿದರು.ಸ್ಥಳೀಯ ಗೊಗ್ಗ ಬಸಯ್ಯ ಮೆಮೊರಿಯಲ್ ಟ್ರಸ್ಟ್ ಆಶ್ರಯದಲ್ಲಿ ಮಂಗಳವಾರ ಗೊಗ್ಗ ಬಸಯ್ಯ ಮಹಾದೇವಮ್ಮ ಸ್ಮಾರಕ ಮಂಗಲ ಭವನದಲ್ಲಿ ಹಮ್ಮಿಕೊಂಡಿದ್ದ ಗೊಗ್ಗ ಬಸಯ್ಯನವರ 27ನೇ ಪುಣ್ಯಾರಾಧನೆ ಕಾರ್ಯಕ್ರಮದಲ್ಲಿ ಆಶೀರ್ವಚನ ನೀಡಿದರು.

ಜವಾಬ್ದಾರಿ ಸ್ಥಾನದಲ್ಲಿರುವ ಮಠಾಧೀಶರು, ನಾಡಿನ ಸಜ್ಜನ ಧರ್ಮನಿಷ್ಠರು ಮತ್ತು ರಾಜಕೀಯ ಧುರೀಣರು ಸತ್ಯ, ಸೈದ್ಧಾಂತಿಕ ಮತ್ತು ತತ್ವ ಪರಿಪಾಲನೆ ಹಾದಿಯಲ್ಲಿ ನಡೆದು ಭವಿಷ್ಯತ್ತಿನ ಜನರ ಆಶಾಕಿರಣ ಆಗಬೇಕಿದೆ ಎಂದು ಅಭಿಪ್ರಾಯ ಪಟ್ಟರು.ಶಿವಾಗಮಗಳು,ಸಿದ್ಧಾಂತ ಶಿಖಾಮಣಿ ಧರ್ಮಗ್ರಂಥ ಮತ್ತು ಶರಣರ ವಚನ ಬದುಕಿ ಬಾಳುವ ಜನಾಂಗಕ್ಕೆ ಜೀವಸೆಲೆಯಾಗಿದ್ದು,ಇವುಗಳಲ್ಲಿ ಅಡಗಿರುವ ಪರಮ ಸತ್ಯ ಒಂದೆ. ಆ ದಾರಿಯಲ್ಲಿ ಹೆಜ್ಜೆ ಹಾಕಿದಾಗ ಎಲ್ಲೆಡೆ ಶಾಂತಿ ಸೌಹಾರ್ದತೆ, ಸಾಮರಸ್ಯ ಬೆಳೆಯಲು ಸಾಧ್ಯ ಎಂದು ಶ್ರೀಗಳು ತಿಳಿಸಿದರು.

ಗೊಗ್ಗ ಮೆಮೊರಿಯಲ್ ಟ್ರಸ್ಟ್ ಪದಾಧಿಕಾರಿಗಳು ಪಟ್ಟಣದ ವೈದಿಕ ಜ್ಯೋತಿಷ ಪಾಠ ಶಾಲೆಗೆ ಅನ್ನದಾನ, ಉಚಿತ ಸಾಮೂಹಿಕ ವಿವಾಹ, ಜನಪರ ಕೆಲಸಗಳನ್ನು ವರ್ಷಪೂರ್ತಿ ಮಾಡುತ್ತಿದ್ದು,ಇದಕ್ಕಾಗಿ ಶ್ರೀಗಳು ಟ್ರಸ್ಟ್‌ನವರನ್ನು ಅಭಿನಂದಿಸಿದರು. ಉಜ್ಜಯಿನಿ ಜಗದ್ಗುರುಗಳು ಸಮಾಜಕ್ಕೆ ನೀಡಿದ ಕೊಡುಗೆ ಕುರಿತು ವಿವರಿಸಿದರು.   ಗೊಗ್ಗ ಬಸಯ್ಯನವರ ಪುಣ್ಯಾರಾಧನೆ ಅಂಗವಾಗಿ ಗದ್ದುಗೆಗೆ ರುದ್ರಾಭಿಷೇಕ, ವಿವಿಧ ಧಾರ್ಮಿಕ ಆಚರಣೆಗಳು ಶ್ರದ್ಧೆ ಭಕ್ತಿಯಿಂದ ಜರುಗಿದವು. ಕಾರ್ಯಕ್ರಮದಲ್ಲಿ ವಿವಿಧ ರಂಗಗಳ ಸಾಧಕರನ್ನು, ಗಣ್ಯರನ್ನು ಸನ್ಮಾನಿಸಲಾಯಿತು.

ನಂದೀಪುರ ಮಹೇಶ್ವರ ಸ್ವಾಮಿಗಳು, ಸಿಂಧನೂರು ಬಾಳೆಹೊನ್ನೂರು ಶಾಖಾ ಮಠದ ಸೋಮನಾಥ ಶಿವಾಚಾರ್ಯರು, ಹೆಬ್ಬಾಳು ಶಿವಪ್ರಕಾಶ ಶರಣರು, ಡಾ. ಮೃತ್ಯುಂಜಯ ರುಮಾಲೆ, ಕೆ.ಎಂ. ಹೇಮಯ್ಯಸ್ವಾಮಿ, ಪಿ. ಮೂಕಯ್ಯಸ್ವಾಮಿ, ಎಂ.ಎಸ್. ಶಶಿಧರ ಶಾಸ್ತ್ರಿಗಳು ಮಾತನಾಡಿದರು.ಗೊಗ್ಗ ಚನ್ನಬಸವರಾಜ, ಗೊಗ್ಗ ಶರಬಯ್ಯ, ಗೊಗ್ಗ ಗುರುಸಿದ್ಧಯ್ಯ, ಗೊಗ್ಗ ಸಿದ್ರಾಮಯ್ಯ, ಎಚ್.ಎಂ. ವೀರಭದ್ರಯ್ಯ, ಗೊಗ್ಗ ಕಾರ್ತಿಕ್, ಗೊಗ್ಗ ಶಾಂತ, ಮುಕ್ಕುಂದಿ ಬಸವರಾಜ, ಮುಕ್ಕುಂದಿ ರುದ್ರಾಣಿ, ಶೋಭಾ, ಶ್ರೀದೇವಿ, ಜಿ.ಪಂ ಅಧ್ಯಕ್ಷೆ ಅರುಣಾ ತಿಪ್ಪಾರೆಡ್ಡಿ, ತಾ.ಪಂ ಸದಸ್ಯೆ ಸುಲೋಚನಮ್ಮ, ವೀರಶೈವ ಸಮಾಜದ ಗಣ್ಯರು ಇತರರು ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.