ADVERTISEMENT

ಬರ ಪರಿಹಾರ ವಿತರಣೆಗೆ ಆಗ್ರಹ

​ಪ್ರಜಾವಾಣಿ ವಾರ್ತೆ
Published 4 ಜೂನ್ 2013, 5:11 IST
Last Updated 4 ಜೂನ್ 2013, 5:11 IST

ಹಗರಿಬೊಮ್ಮನಹಳ್ಳಿ:  ಕಳೆದ ಸಾಲಿನ ಬರಗಾಲದ ಹಿನ್ನೆಲೆಯಲ್ಲಿ ಸರಕಾರ ತಾಲ್ಲೂಕಿಗೆ ಮಂಜೂರು ಮಾಡಿರುವ ಬರ ಪರಿಹಾರ ನಿಧಿಯಲ್ಲಿ ಬೆಳೆ ಹಾನಿ  ರೈತರಿಗೆ ಕೂಡಲೆ ಪರಿಹಾರದ ಚೆಕ್‌ಗಳನ್ನು ವಿತರಿಸುವಂತೆ ಆಗ್ರಹಿಸಿ ಸೋಮವಾರ ಬ್ಲಾಕ್ ಕಾಂಗ್ರೆಸ್ ಹಾಗೂ ಯುವ ಕಾಂಗ್ರೆಸ್ ಸಮಿತಿಯ ಪದಾಧಿಕಾರಿಗಳು ಮತ್ತು ಸದಸ್ಯರು ತಹಸೀಲ್ದಾರರಿಗೆ ಮನವಿ ಸಲ್ಲಿಸಿದರು.

ಮನವಿ ಸಲ್ಲಿಸುವ ತಂಡದ ನೇತೃತ್ವ ವಹಿಸಿದ್ದ ಬ್ಲಾಕ್ ಅಧ್ಯಕ್ಷ ಮುಟುಗನಹಳ್ಳಿ ಕೊಟ್ರೇಶ್ ಮಾತ ನಾಡಿ, ಕಳೆದ ವರ್ಷ ತಾಲ್ಲೂಕಿನಾದ್ಯಂತ ವಾಡಿಕೆಯಂತೆ ಮಳೆಯಾಗದೆ ರೈತರು ಸಂಕಷ್ಟಕ್ಕೊಳಗಾಗಿದ್ದಾರೆ. ಬಿತ್ತನೆ ಬೀಜ ಸಹಿತ ಕೃಷಿ ಚಟುವಟಿಕೆಗಳಿಗೆಂದು ರೈತರು ವ್ಯಯ ಮಾಡಿದ ಸಾಕಷ್ಟು ಹಣ ಮಣ್ಣು ಪಾಲಾಯಿತು ಎಂದು ವಿಷಾದಿಸಿದರು. 

ಬೆಳೆ ಹಾನಿಗೊಂಡ ರೈತರಿಗೆ ವಿತರಿಸಲು ಸರಕಾರ ್ಙ 93ಲಕ್ಷ ಹಣ ಬಿಡುಗಡೆ ಮಾಡಿದೆ. ಆದರೆ, ಚುನಾವಣಾ ನೀತಿ ಸಂಹಿತೆಯನ್ನು ಪಾಲಿಸುವ ನಿಟ್ಟಿನಲ್ಲಿ ತಾಲ್ಲೂಕು ಆಡಳಿತ ಪರಿಹಾರವನ್ನು ವಿತರಿಸಲಿಲ್ಲ. ಈಗ ತಾಲ್ಲೂಕಿನಾದ್ಯಂತ ಸಾಕಷ್ಟು ಮಳೆಯಾಗುತ್ತಿದ್ದು, ರೈತರು ಕೃಷಿ ಚಟುವಟಿಕೆಗಳನ್ನು ಕೈಗೆತ್ತಿಕೊಳ್ಳುವ ಸಿದ್ಧತೆಯಲ್ಲಿದ್ದಾರೆ. ಈ ಸಂದರ್ಭದಲ್ಲಿ ರೈತರಿಗೆ ಪರಿಹಾರ ವಿತರಿಸುವ ಮೂಲಕ ತಾಲ್ಲೂಕು ಆಡಳಿತ ರೈತರ ನೆರವಿಗೆ ಧಾವಿಸಬೇಕು ಎಂದು ಆಗ್ರಹಿಸಿದರು.

ಈ ಸಂದರ್ಭದಲ್ಲಿ ಮುಖಂಡ ಹೆಗ್ಡಾಳು ರಾಮಣ್ಣ, ಬುಡ್ಡಿ ಬಸವ ರಾಜ್, ಕಾರ್ಯದರ್ಶಿ ಕೊಟ್ರೇಶ್ ಉಪ್ಪಾರ್, ಯುವ ಘಟಕದ ಅಧ್ಯಕ್ಷ ಟಿ.ರಾಘವೇಂದ್ರ, ಕುರುಬರ ವೆಂಕಟೇಶ್, ಬೋವಿ ಸಣ್ಣ ಹುಲುಗಪ್ಪ, ಎಣ್ಣಿ ಇಬ್ರಾಹಿಂ, ಮಾಲವಿ ಚನ್ನಬಸಪ್ಪ, ಪತ್ರೇಶ್ ಹಿರೇಮಠ್, ಬೆಣಕಲ್ಲು ಗ್ರಾ.ಪಂ. ಅಧ್ಯಕ್ಷ ಎಚ್.ಮೈಲಾರೆಪ್ಪ, ಕೆ.ಹನಮಂತಪ್ಪ, ಎಚ್.ಮಲ್ಲೆಪ್ಪ ಹಾಗೂ ಎಸ್.ವಿಶ್ವನಾಥ್ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.