ಕಂಪ್ಲಿ: ಮಾಲಿನ್ಯರಹಿತ, ಪರಿಸರಸ್ನೇಹಿ ಸೌರ ವಿದ್ಯುತ್ ಉತ್ಪಾದನೆಗೆ ಮನಸೋತ ರೈತ ತಮ್ಮ 10 ಎಕರೆ ಜಮೀನಿನಲ್ಲಿ ಸೌರ ವಿದ್ಯುತ್ ಉತ್ಪಾದನಾ ಘಟಕ ಆರಂಭಿಸಿದ್ದಾರೆ. ಕಂಪ್ಲಿ ಪಟ್ಟಣ ಹೊರವಲಯದ ತುಂಗಭದ್ರಾ ಬಲದಂಡೆ ಕೆಳಮಟ್ಟದ ಸಣಾಪುರ ವಿತರಣಾ ನಾಲೆ ಪಕ್ಕದಲ್ಲಿ ಎಂ. ತುಳಸಿರಾಮ್ ಎಂಬುವರು ಸೋಲಾರ್ನಿಂದ ಉತ್ಪಾದನೆಯಾದ ವಿದ್ಯುತ್ತನ್ನು ವಿದ್ಯುತ್ ಕಂಪೆನಿಗೆ(ಜೆಸ್ಕಾಂ) ಮಾರಾಟ ಮಾಡುವ ಮೂಲಕ ಹೊಸ ಸಾಧನೆಗೆ ಮುನ್ನುಡಿ ಬರೆದಿದ್ದಾರೆ.
ವತ್ಸಲಾ ಬಳ್ಳಾರಿ ಸೋಲರ್ ಪ್ರಾಜೆಕ್ಟ್ ಪ್ರೈವೇಟ್ ಲಿಮಿಟೆಡ್ ಸಹಕಾರದಿಂದ ₹12ಕೋಟಿ ವೆಚ್ಚದಲ್ಲಿ ಹಾಲಿ ಘಟಕ ಸ್ಥಾಪಿಸಿದ್ದು, ನಿತ್ಯ 2 ಮೆಗಾ ವ್ಯಾಟ್ ಉತ್ಪಾದನೆ ಪ್ರಾಯೋಗಿಕವಾಗಿ ಆರಂಭಿಸಲಾಗಿದೆ.
‘ಸೂರ್ಯನ ಕಿರಣಗಳು ಸೌರ ಫಲಕಗಳ ಮೇಲೆ ಸದಾ ಬೀಳುವಂತೆ ಟಿ–10 ಟ್ರ್ಯಾಕರ್ ಸಿಸ್ಟಮ್ ತಾಂತ್ರಿಕತೆಯನ್ನು ಘಟಕದಲ್ಲಿ ಅಳವಡಿಸಲಾಗಿದೆ. ಇದರಿಂದ ಸೂರ್ಯನ ಕಿರಣಗಳು ಯಾವ ದಿಕ್ಕಿಗೆ ಮುಖ ಮಾಡಿದರೂ ಸೌರ ಫಲಕಗಳು ಸ್ವಯಂ ಚಾಲಿತವಾಗಿ ವಾಲಿಕೊಳ್ಳುವುದರಿಂದ ಗರಿಷ್ಠ ಪ್ರಮಾಣದ ವಿದ್ಯುತ್ ಉತ್ಪಾದನೆಗೆ ಅನುಕೂಲವಾಗಿದೆ’ ಎಂದು ಸನಿವಾ ರಿನಿವೊಬಲ್ಸ್ ಪ್ರೈವೇಟ್ ಲಿಮಿಟೆಡ್ ಎಂಜಿನಿಯರ್ ವಿ. ಸೆಂಥಿಲ್ಕುಮಾರ್ ತಿಳಿಸಿದರು.
‘ನೇರ ವಿದ್ಯುತ್ (ಡೈರೆಕ್ಟ್ ಕರಂಟ್) ಅನ್ನು ಪರ್ಯಾಯ(ಆಲ್ಟರ್ ನೇಟ್) ವಿದ್ಯುತ್ ಆಗಿ ಪರಿವರ್ತಿಸುವ ಬೃಹತ್ ಪರ್ಯಾಯಕ(ಇನ್ವರ್ಟರ್)ಗಳು ಈ ಪ್ಲಾಂಟ್ನಲ್ಲಿವೆ. ಇಲ್ಲಿ 380 ರಿಂದ 415 ವೋಲ್ಟ್ನಷ್ಟಿರುವ ವಿದ್ಯುತ್ ಅನ್ನು 11ಕೆ.ವಿಗೆ ಹೆಚ್ಚಿಸುವ ಪರಿವರ್ತಕಗಳು ಕಾರ್ಯನಿರ್ವಹಿಸುತ್ತಿವೆ’ ಎಂದು ಮಾಹಿತಿ ನೀಡಿದರು.
ಪಂಡಿತಾರಾಧ್ಯ ಎಚ್.ಎಂ. ಮೆಟ್ರಿ
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.