ADVERTISEMENT

ಬೇಡಿಕೆ ಈಡೇರಿಕೆಗೆ ಅಂಗವಿಕಲರಿಂದ ಮನವಿ

​ಪ್ರಜಾವಾಣಿ ವಾರ್ತೆ
Published 13 ಸೆಪ್ಟೆಂಬರ್ 2011, 8:25 IST
Last Updated 13 ಸೆಪ್ಟೆಂಬರ್ 2011, 8:25 IST

 ಕುರುಗೋಡು: ನ್ಯಾಯಯುತ ಬೇಡಿಕೆ ಈಡೇರಿ ಸುವಂತೆ ಒತ್ತಾಯಿಸಿ ಪಟ್ಟಣದ ವಿಶೇಷ ತಹಸೀಲ್ದಾರ ಕಚೇರಿ ಎದುರು ಅಂಗವಿಕಲರು ಸೋಮವಾರ ಪ್ರತಿಭಟನೆ ನಡೆಸಿದರು.ಕುರುಗೋಡು ಅಂಗವಿಕಲರ ಸಂಘದ ಅಧ್ಯಕ್ಷ ಇ.ಹನುಮಂತಪ್ಪ ಮಾತನಾಡಿ, ಗ್ರಾಮ ಪಂಚಾಯಿತಿಗಳಿಂದ ಹಂಚಿಕೆ ಮಾಡುವ ಆಶ್ರಯ ಮನೆಗಳಲ್ಲಿ ಶೇ.3ರಷ್ಟು ಮನೆಗಳನ್ನು ಅಂಗವಿಕಲರಿಗೆ ನೀಡಬೇಕು ಎಂದು ಸರ್ಕಾರ ಸೂಚಿಸಿದೆ ಆದರೆ ಅದನ್ನು ಸರಿಯಾಗಿ ಪಾಲಿಸಲಾಗುತ್ತಿಲ್ಲ ಎಂದು ದೂರಿದರು.

ಗ್ರಾಮಸಭೆಯಲ್ಲಿ ಫಲಾನುಭವಿಗಳನ್ನು ಆಯ್ಕೆಮಾಡಬೇಕು ಎನ್ನುವ ನಿಯಮವಿದ್ದರೂ ನಿಯಮ ಗಾಳಿಗೆ ತೂರಿ ಪ್ರಭಾವಿ ವ್ಯಕ್ತಿಗಳಿಗೆ, ಶ್ರೀಮಂತರಿಗೆ ಆಶ್ರಯ ಮನೆ ವಿತರಿಸಲಾಗುತ್ತಿದೆ ಎಂದು ಅವರು ಆರೋಪಿಸಿದರು. ಈ ಬಗ್ಗೆ ಅನೇಕ ಬಾರಿ  ಮೇಲಾಧಿಕಾರಿಗಳ ಗಮನಕ್ಕೆ ತಂದರೂ ಯಾವುದೇ ಕ್ರಮಕೈಗೊಂಡಿಲ್ಲ ಎಂದರು.

ಅಂಗವಿಕಲರು ಸರ್ಕಾರದಿಂದ ಬರುವ ಮಾಸಾಶನ ಪಡೆಯಲು ತಿಂಗಳುಗಟ್ಟಲೆ ಅಲೆದಾಡಬೇಕಾದ ಪರಿಸ್ಥಿತಿ ನಿಮಾರ್ಣವಾಗಿದೆ. ಸಮಸ್ಯೆಗಳಿಗೆ ಸ್ಪಂದಿಸಬೇಕಾದ ಅಧಿಕಾರಿಗಳು ಗಮನಹರಿಸುತ್ತಿಲ್ಲ ಎಂದು ಆರೋಪಿಸಿದರು.

ಅಂಗವಿಕಲರ ಸಮಸ್ಯೆಗಳಿಗೆ ಸ್ಪಂದಿಸಬೇಕು, ಗ್ರಾಮ ಪಂಚಾಯಿತಿ ಮಟ್ಟದಲ್ಲಿ ನಿವೇಶನ ವಿತರಿಸಬೇಕು, ಅರ್ಜಿ ಸಲ್ಲಿಸಿದವರಿಗೆ ಕೂಡಲೇ ಮಾಸಾಶನ ಮಂಜೂರು ಮಾಡಬೇಕು ಮುಂತಾದ ಬೇಡಿಕೆಗಳನ್ನೊಳಗೊಂಡ ಮನವಿ ಪತ್ರವನ್ನು ವಿಶೇಷ ತಹಸೀಲ್ದಾರ್ ದಾಸಪ್ಪ ಅವರಿಗೆ ಸಲ್ಲಿಸಲಾಯಿತು.

ಸಂಘದ ಉಪಾಧ್ಯಕ್ಷ ರವಿ, ವೀರೇಶ, ಕಾರ್ಯದರ್ಶಿ ವೀರಶೇಖರ, ಸದಸ್ಯರಾದ ಸುಜಾತ, ಮಹೇಶ್ವರಿ, ಈರಣ್ಣ, ಎ.ಚ್.ವೀರೇಶ್, ಹನು ಮಂತ, ಮಹೇಶ, ಜಡೆಪ್ಪ,ವೆಂಕಟೇಶ, ಶರಣಮ್ಮ, ಮಂಜುನಾಥ ಮುಂತಾದವರು ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.