ADVERTISEMENT

ಭಾರಿ ಮಳೆ: ಜನಜೀವನ ಅಸ್ತವ್ಯಸ್ತ

​ಪ್ರಜಾವಾಣಿ ವಾರ್ತೆ
Published 11 ಸೆಪ್ಟೆಂಬರ್ 2013, 6:54 IST
Last Updated 11 ಸೆಪ್ಟೆಂಬರ್ 2013, 6:54 IST

ಬಳ್ಳಾರಿ: ನಗರವೂ ಒಳಗೊಂಡಂತೆ ಜಿಲ್ಲೆಯ ವಿವಿಧೆಡೆ ಕಳೆದ 24 ಗಂಟೆಯಿಂದ ಭಾರಿ ಮಳೆ ಸುರಿದಿದ್ದು, ಜನಜೀವನ ಅಸ್ತವ್ಯಸ್ತಗೊಂಡಿದೆ. ಆದರೆ, ಹಿಂಗಾರು ಹಂಗಾಮಿನ ಬಿತ್ತನೆಯ ನಿರೀಕ್ಷೆಯಲ್ಲಿರುವ ರೈತರಲ್ಲಿ ಸಂತಸ ಮೂಡಿಸಿದೆ.

ಸೋಮವಾರ ಮತ್ತು ಮಂಗಳವಾರ ನಗರದಲ್ಲಿ 22 ಮಿಮೀ, ಜಿಲ್ಲೆಯ ಹೂವಿನ ಹಡಗಲಿಯಲ್ಲಿ 84 ಮಿಮೀ, ಹಗರಿ ಬೊಮ್ಮನಹಳ್ಳಿಯಲ್ಲಿ 40 ಮಿಮೀ, ಹೊಸಪೇಟೆಯಲ್ಲಿ 16 ಮಿಮೀ, ಕೂಡ್ಲಿಗಿ­ಯಲ್ಲಿ 20.4 ಮಿಮೀ, ಸಂಡೂರಿನಲ್ಲಿ 20 ಮಿಮೀ, ಸಿರುಗುಪ್ಪದಲ್ಲಿ 22 ಮಿಮೀ  ಮಳೆ ಸುರಿದಿದೆ. ನಗರದಲ್ಲಿ ಸೋಮವಾರ ರಾತ್ರಿ­ಯಿಂದಲೇ ಸುರಿದ ತುಂತುರು ಮಳೆ, ಮಧ್ಯಾಹ್ನ 2ರಿಂದ ಸಂಜೆ 5ರವರೆಗೆ ಭಾರಿ ಪ್ರಮಾಣದಲ್ಲಿ ಸುರಿದ ಪರಿಣಾಮ ಜನಜೀವನ ಅಸ್ತವ್ಯಸ್ತ­ಗೊಂಡಿತು.

ಜಿಲ್ಲಾ ಕ್ರೀಡಾಂಗಣದ ಬಳಿಯ ರೈಲ್ವೆ ಕೆಳ ಸೇತುವೆ ಅಡಿ ನೀರು ನುಗ್ಗಿ ವಾಹನ  ಸಂಚಾರಕ್ಕೆ ಅಡಚಣೆ ಉಂಟಾಯಿತು. ಅಲ್ಲದೆ, ನಗರದ ಕೌಲ್‌ಬಝಾರ್‌ ಮತ್ತಿತರ ಕಡೆ ತಗ್ಗು ಪ್ರದೇಶಗಳಿಗೆ ನೀರು ನುಗ್ಗಿ  ಜನತೆ ಪರದಾಡುವಂತಾಯಿತು.

ಸಂಚಾರಕ್ಕೆ ಸಂಚಕಾರ
ಕಂಪ್ಲಿ: ಇಲ್ಲಿಗೆ ಸಮೀಪದ ದರೋಜಿ ಕೆರೆಯಿಂದ ನೀರು ಸರಬರಾಜು ಆಗುವ ಎರಡನೇ ತೂಬು ಬಳಿ ರಾಜ್ಯ ಹೆದ್ದಾರಿ–29ರ ಪಾದಾಚಾರಿ ರಸೆ್ತ ಕುಸಿದು ಅಪಾಯದ ಸ್ಥಿತಿಯಲ್ಲಿದೆ.

ಈ ರಸ್ತೆ ಮೂಲಕ ರಾಜ್ಯ ರಸ್ತೆ ಸಾರಿಗೆಯ ನೂರಾರು ಬಸ್‌ ಸೇರಿದಂತೆ ಭಾರಿ ಸರಕು ಲಾರಿಗಳು ನಿತ್ಯ ಸಂಚರಿಸುತ್ತವೆ.
ಈ ಸ್ಥಳದಲ್ಲಿ ಚಾಲಕ ಸ್ವಲ್ಪ ಅಜಾಗರೂಕತೆ ವಹಿಸಿದರೂ ವಾಹನ ನೇರವಾಗಿ ಕಾಲುವೆಗೆ ಬೀಳುತ್ತದೆ. ರಾತ್ರಿ ವೇಳೆ ಮಂದ ಬೆಳಕಿನಲಿ್ಲ ಪಾದಾಚಾರಿ ರಸ್ತೆ ಕುಸಿದಿರುವುದು ಕಾಣುವುದೇ ಇಲ್ಲ. ಸದ್ಯ ಕಲ್ಲುಗಳನ್ನು ಜೋಡಿಸಿದ್ದು, ಶಾಶ್ವತ ಕಾಮಗಾರಿ ಕೈಗೊಳ್ಳುವಂತೆ ದರೋಜಿ ಜನತೆ ಆಗ್ರಹಿಸಿದ್ದಾರೆ.

ಕಾಮಗಾರಿ ವಿಳಂಬವಾದಲ್ಲಿ ಕನಿಷ್ಠ ಸ್ಥಳದಲ್ಲಿ ಮುನ್ಸೂಚನಾ ಫಲಕ, ಅಪಾಯ ಸೂಚಿಸುವ ರೇಡಿಯಂ ಸ್ಟಿಕರ್‌ ಹಾಕುವಂತೆ ಆಗ್ರಹಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.