ADVERTISEMENT

ಭೂ ಸ್ವಾಧೀನ: ಸಭೆ ಮುಂದೂಡಿಕೆ

​ಪ್ರಜಾವಾಣಿ ವಾರ್ತೆ
Published 4 ಫೆಬ್ರುವರಿ 2011, 9:55 IST
Last Updated 4 ಫೆಬ್ರುವರಿ 2011, 9:55 IST

ಹೊಸಪೇಟೆ: ಕೈಗಾರಿಕೆಗಳಿಗೆ ಭೂಮಿ ಸ್ವಾಧೀನವಾದರೆ ಪರಿಹಾರವಾಗಿ ಎಷ್ಟು ಹಣ ಕೇಳಬೇಕು? ಭೂಮಿ ಕಳೆದುಕೊಳ್ಳುವ ರೈತರಿಗೆ ಜೀವನಕ್ಕೆ ಪರ್ಯಾಯ ವ್ಯವಸ್ಥೆಯನ್ನು ಏನು ಕಲ್ಪಿಸಲಾಗುತ್ತದೆ ಎಂಬುದನ್ನು ರೈತರು ನಿರ್ಧರಿಸುವವರೆಗೆ ತಮಗೆ ಒಂದು ತಿಂಗಳ ಕಾಲಾವಕಾಶ ನೀಡಬೇಕು ಎಂದು ಬುಧವಾರ ಇಲ್ಲಿ ನಡೆದ ಸಾರ್ವಜನಿಕ ಅಹವಾಲು ಸಭೆಯಲ್ಲಿ ನಿರ್ಣಯಿಸಲಾಯಿತು.

ರೈತರ ಬೇಡಿಕೆಗೆ ಸ್ಪಂದಿಸಿದ ಸಭೆಯನ್ನು ಆಯೋಜಿಸಿದ್ದ ಧಾರವಾಡದ ಕರ್ನಾಟಕ ಕೈಗಾರಿಕಾ ಪ್ರದೇಶಾಭಿವೃದ್ಧಿ ಮಂಡಳಿಯ ಅಧಿಕಾರಿಗಳು ಸಭೆಯನ್ನು ಒಂದು ತಿಂಗಳ ಕಾಲ ಮುಂದಕ್ಕೆ ಹಾಕಿದರು.

ಜಿಲ್ಲೆಗೆ ಬರಲಿರುವ ಭೂಷಣ್ ಸ್ಟೀಲ್ಸ್‌ನ ಭೂ ಸ್ವಾಧೀನ ಪ್ರಕ್ರಿಯೆಗೆ ಸಾರ್ವಜನಿಕರಿಂದ ಅಹವಾಲುಗಳನ್ನು ಆಲಿಸಲು ಗಾದಿಗನೂರು ಸೇರಿದಂತೆ ಸುತ್ತಮುತ್ತಲಿನ 6 ಗ್ರಾಮಗಳ ಗ್ರಾಮಸ್ಥರ ಅಹವಾಲು ಸಭೆಯನ್ನು ಬುಧವಾರ ಇಲ್ಲಿನ ನಗರಸಭಾ ಕಲಾ ಮಂದಿರದಲ್ಲಿ ಆಯೋಜಿಸಲಾಗಿತ್ತು.

ಸಭೆಯಲ್ಲಿ ರೈತ ಮುಖಂಡರಾದ ಕೆ.ಎಂ ಹಾಲಪ್ಪ, ಮುಕುಡಪ್ಪ, ಮಾತನಾಡಿ ‘ರೈತರ ಭೂಮಿಯನ್ನು ಕೈಗಾರಿಕೆಗಳು ವಶಪಡಿಸಿಕೊಳ್ಳುವು ದರಿಂದ ಕೇವಲ ಭೂಮಿ ನಾಶ ಆಗುವುದಿಲ್ಲ; ಬದಲಾಗಿ ಅವರ ಬದುಕೇ ನಾಶವಾಗುತ್ತಿದೆ. ಸರ್ಕಾರದ ಈ ತೀರ್ಮಾನ ನ್ಯಾಯ ಸಮ್ಮತ ವಾಗಿಲ್ಲ. ಆದರೂ ರೈತರಿಗೆ ನ್ಯಾಯ ಸಮ್ಮತವಾದ ದರ ನಿಗದಿ ಆಗಬೇಕು, ಪರ್ಯಾಯ ವ್ಯವಸ್ಥೆಗಳು,  ಜೀವನ ನಿರ್ವಹಣೆಗೆ ಮಾರ್ಗೋಪಾಯ ಗಳನ್ನು ಇಲಾಖೆ ಸೂಚಿಸಬೇಕಾಗಿದೆ. ಇಂತಹ ಮಹತ್ವದ ನಿರ್ಣಯಗಳನ್ನು ಕೈಗೊಳ್ಳಲು ಸಾಕಷ್ಟು ಸಮಯ ನೀಡಬೇಕು. ಕನಿಷ್ಠ ಒಂದು ತಿಂಗಳ ಮಟ್ಟಿಗಾದರೂ ಸಭೆ ಮುಂದೂಡು ವಂತೆ ಆಗ್ರಹಿಸಿದರು.

ಧಾರವಾಡದ ವಿಶೇಷ ಭೂ ಸ್ವಾಧೀನಾಧಿಕಾರಿ ಮಹಾಂತೇಶ ಬೀಳಗಿ ಮಾತನಾಡಿ ಇಂತಹ ಅಹವಾಲು ಸಭೆಗಳು ನಿರಂತರವಾಗಿ ನಡೆಯುತ್ತವೆ. ಸದ್ಯ ಸಲ್ಲಿಸಿರುವ ಅಹವಾಲುಗಳ ಬಗ್ಗೆ ಮಾತನಾಡ ಬಹುದು ಎಂದು ಆಗ್ರಹಿಸಿ ದರು. ಆದರೆ ಇದಕ್ಕೆ ರೈತರು ಒಪ್ಪದೇ ಬೆಲೆ ನಿಗದಿಯಾಗದ ಹೊರತು ಮಾತ ನಾಡುವ ಪ್ರಶ್ನೆಯೇ ಇಲ್ಲ ಎಂದು ಒಮ್ಮತದಿಂದ ಸಭೆ ಮುಂದೂಡಲು ಪಟ್ಟು ಹಿಡಿದರು. ಒಂದು ತಿಂಗಳು ಸಭೆ ಮುಂದೂಡಲಾಗಿದೆ ಎಂದು ಅಧಿಕಾರಿಗಳು ಘೋಷಿಸಿದರು. ಈ ಮಧ್ಯೆ ಇಲಾಖೆಗೆ ಅಹವಾಲು ಸಲ್ಲಿಸಲು ಅವಕಾಶ ಇದೆ ಎಂದು ರೈತರಿಗೆ ತಿಳಿಸಲಾಯಿತು. ಭೂ ಸ್ವಾಧೀನಾಧಿಕಾರಿಗಳ ಕಚೇರಿಯ ವಿವಿಧ ಹಂತದ ಅಧಿಕಾರಿಗಳು 6 ಗ್ರಾಮಗಳ ರೈತರು ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.