ಹೂವಿನಹಡಗಲಿ: ತಾಲ್ಲೂಕಿನ ಉತ್ತಂಗಿ ಗ್ರಾಮದ ಗುಡೇಕೋಟಿ ಕರಿಬಸಪ್ಪ ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ಶಾಲಾ ಪ್ರಾರಂಭೋತ್ಸವ ಹಾಗೂ ವಿಶೇಷ ದಾಖಲಾತಿ ಆಂದೋಲನ ಕಾರ್ಯಕ್ರಮ ಗಮನ ಸೆಳೆಯಿತು.
ನಂದಿಕೋಲು, ಸಮಾಳ ಹಾಗೂ ಕಲಾತಂಡಗಳ ಮೆರವಣಿಗೆಯೊಂದಿಗೆ ದಾಖಲಾತಿ ಆಂದೋಲನದ ಜಾಗೃತಿ ಜಾಥಾ ನಡೆಯಿತು. ವಿದ್ಯಾರ್ಥಿನಿಯರು ಪೂರ್ಣಕುಂಭ ಕಳಸದೊಂದಿಗೆ ಪಾಲ್ಗೊಂಡರು. ಮಕ್ಕಳಿಗೆ ಸರ್ಕಾರ ನೀಡುವ ವಿಶೇಷ ಯೋಜನೆಗಳು ಹಾಗೂ ದಾನಿಗಳ ನೆರವಿನಲ್ಲಿ ಪ್ರಾರಂಭಿಸಲಾದ ಸ್ಮಾರ್ಟ್ ಕ್ಲಾಸ್ ಕುರಿತು ಸ್ತಬದ್ಧಚಿತ್ರಗಳೊಂದಿಗೆ ಅರಿವು ಮೂಡಿಸಲಾಯಿತು. ಗ್ರಾಮದಲ್ಲಿ ಹಬ್ಬದ ವಾತಾವರಣ ಮನೆಮಾಡಿತ್ತು.
ಉತ್ತಂಗಿ ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ 1ನೇ ತರಗತಿಗೆ ಪ್ರವೇಶ ಪಡೆದ ಮಕ್ಕಳ ಹಣೆಗೆ ಕುಂಕಮ ತಿಲಕವಿಟ್ಟು, ಆರತಿ ಬೆಳಗಿ ಶಾಲೆಗೆ ಸ್ವಾಗತಿಸಲಾಯಿತು. ಶಾಲೆ ಬಿಟ್ಟ ಮಕ್ಕಳ ಮನೆಗೆ ಶಿಕ್ಷಕರು ಭೇಟಿ ನೀಡಿ ಮಕ್ಕಳು ಹಾಗೂ ಪಾಲಕರ ಮನವೋಲಿಸಿದರು.
ಕ್ಷೇತ್ರ ಸಮನ್ವಯಾಧಿಕಾರಿ ಎಚ್.ಕೆ.ಚಂದ್ರಪ್ಪ ಮಾತನಾಡಿ, ಬಡ ವಿದ್ಯಾರ್ಥಿಗಳ ಶಿಕ್ಷಣಕ್ಕೆ ಸರ್ಕಾರ ವಿಶೇಷ ಯೋಜನೆಗಳನ್ನು ರೂಪಿಸಿದ್ದು, ಅವುಗಳನ್ನು ಸದುಪಯೋ ಗಪಡಿಸಿಕೊಳ್ಳಬೇಕು’ ಎಂದರು.
ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಜಿಲ್ಲಾ ಉಪಾಧ್ಯಕ್ಷ ವಿ.ಬಿ.ಜಗದೀಶ ಮಾತನಾಡಿದರು. ದೈಹಿಕ ಶಿಕ್ಷಣ ಅಧೀಕ್ಷಕ ಮಂಜುನಾಥ, ಪ್ರೌಢಶಾಲೆ ಮುಖ್ಯಶಿಕ್ಷಕ ಕೆ.ರಾಜಶೇಖರ, ಶಾಲೆಯ ಮುಖ್ಯಶಿಕ್ಷಕ ಎಲ್.ಗಂಗ್ಯಾನಾಯ್ಕ, ಶಿಕ್ಷಕ ಎನ್.ಎಂ.ಚನ್ನಯ್ಯ, ಎಸ್ಡಿಎಂಸಿ ಅಧ್ಯಕ್ಷ ಕೆ.ಸಿದ್ದಪ್ಪ, ಸಂಪನ್ಮೂಲ ವ್ಯಕ್ತಿಗಳಾದ ಬಿ.ಶಿವಮೂರ್ತಿ, ಐ.ಬಸವರಾಜ, ಎಂ.ರಾಜು, ಎಸ್.ಪ್ರಕಾಶ್, ಅಬ್ದುಲ್ ಖಾದರ್ ಇದ್ದರು.
ಶಾಲಾ ಪ್ರಾರಂಭೋತ್ಸವ ತಾಲ್ಲೂಕಿನ ಎಲ್ಲ ಶಾಲೆಗಳಲ್ಲಿ ಸಂಭ್ರಮದಿಂದ ನಡೆಯಿತು. ಪ್ರಾರಂಭೋತ್ಸವ ದಿನದಂದೇ ಮಕ್ಕಳಿಗೆ ಪಠ್ಯಪುಸ್ತಕ, ಸಮವಸ್ತ್ರ ವಿತರಿಸಲಾಯಿತು. ಎಲ್ಲ ಶಾಲೆಗಳಲ್ಲೂ ಮಧ್ಯಾಹ್ನ ಮಕ್ಕಳಿಗೆ ಸಿಹಿ ಊಟ ಬಡಿಸಲಾಯಿತು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.