ADVERTISEMENT

ಮಳೆ ಬಾರದೆ ರೈತ ಕಂಗಾಲು !

​ಪ್ರಜಾವಾಣಿ ವಾರ್ತೆ
Published 17 ಅಕ್ಟೋಬರ್ 2012, 4:20 IST
Last Updated 17 ಅಕ್ಟೋಬರ್ 2012, 4:20 IST

ಸಂಡೂರು: ತಾಲ್ಲೂಕಿನಲ್ಲಿ ಬಿತ್ತನೆಯಾಗಿರುವ 24 ಸಾವಿರ ಎಕರೆ ಪ್ರದೇಶದ ಮಳೆಯಾಧಾರಿತ ಬೆಳೆಗಳು ಮಳೆಯಿಲ್ಲದೆ ಒಣಗಿಹೋಗಿದ್ದು, ಉತ್ತಮ ಬೆಳೆ ನಿರೀಕ್ಷೆಯಲ್ಲಿದ್ದ ರೈತರಿಗೆ ನಿರಾಶೆಯಾಗಿದೆ.  ಮುಂಗಾರು ಮಳೆ ನಿರೀಕ್ಷಿತ ಪ್ರಮಾಣದಲ್ಲಿ ಬೀಳದಿದ್ದರೂ ತಾಲ್ಲೂಕಿನ ರೈತರು ಜೋಳ, ರಾಗಿ, ನವಣೆ, ಸಜ್ಜೆ, ಮೆಕ್ಕೆ ಜೋಳ, ಹತ್ತಿ, ಶೇಂಗಾ ಮತ್ತಿತರ ಬೆಳೆಗಳನ್ನು ಬಿತ್ತನೆ ಮಾಡಿದ್ದರು.

ಆದರೆ, ಮಳೆಯ ಪ್ರಮಾಣ ತೀರಾ ಕಡಿಮೆಯಾಗಿದ್ದ ರಿಂದ ರೈತರಿಗೆ ಬಿತ್ತನೆ ಮಾಡಿದ ಗೊಬ್ಬರ ಬೀಜದ ಖರ್ಚೂ  ಬರಲಿಲ್ಲ. ಕೊನೆ ಪಕ್ಷ ಮನೆಯಲ್ಲಿ ಉಪಯೋಗಿಸಲಾದರೂ ಜೋಳ ಬೆಳೆಯಬಹುದೆಂಬ ರೈತರ ನಿರೀಕ್ಷೆ ಹುಸಿಯಾಗಿದೆ.

ಪ್ರಸಕ್ತ ಸಾಲಿನಲ್ಲಿ ತಾಲ್ಲೂಕಿನಾದ್ಯಂತ 15 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಮೆಕ್ಕೆ ಜೋಳ ಬಿತ್ತನೆಯಾಗಿದೆ. ಮೆಕ್ಕೆ ಜೋಳ ಬಿತ್ತಲು ಪ್ರತಿ ಎಕರೆಗೆ 5ರಿಂದ 6 ಸಾವಿರ ರೂಪಾಯಿ ಖರ್ಚು ಮಾಡಲಾಗಿದೆ. ಮಳೆಯ ಕೊರತೆಯಿಂದ ಮೆಕ್ಕೆ ಜೋಳ ಬಿತ್ತನೆಗೆ ಮಾಡಿದ ಖರ್ಚು ಬರುವುದೋ, ಇಲ್ಲವೋ ಎಂಬ ಭಯದಲ್ಲಿ ರೈತರು ಮುಳುಗಿದ್ದಾರೆ.
ಮೆಕ್ಕೆ ಜೋಳ ಕಾಳು ಕಟ್ಟುವ ಹಂತದಲ್ಲಿ ಮಳೆಯ ಅಗತ್ಯವಿದೆ. ಈ ಹಂತದಲ್ಲಿ ಮಳೆ ಬಾರದಿದ್ದರೆ ತೆನೆ ಗಾತ್ರ ದೊಡ್ಡ ಚಿಕ್ಕದಾಗಿ ಕಾಳುಗಳು ಜೊಳ್ಳಾಗುವ ಸಾಧ್ಯತೆ ಇದೆ.

ನೀರಾವರಿಯಲ್ಲಿ ಬಿತ್ತನೆಯಾಗಿರುವ ಮೆಕ್ಕೆಜೋಳ (1,250 ಹೆ.), ಜೋಳ (90 ಹೆ) ಹತ್ತಿ, ಸೂರ್ಯಕಾಂತಿ ಸೇರಿದಂತೆ 1,541 ಹೆಕ್ಟೇರ್ ಪ್ರದೇಶದ ಬೆಳೆಗಳಿಂದ ಉತ್ತಮ ಇಳುವರಿ ನಿರೀಕ್ಷಿಸಬಹುದಾಗಿದೆ. ಮಳೆ ಆಶ್ರಿತ ಬೇಸಾಯಕ್ಕೆ ಸಾಲಮಾಡಿ ಬಿತ್ತನೆ ಮಾಡಿದ ರೈತರಿಗೆ ದಿಕ್ಕು ತೋಚದಂತಾಗಿದೆ.

ಚೋರನೂರು ಭಾಗದಲ್ಲಿ ಬಿತ್ತನೆಯಾಗಿರುವ 710 ಹೆಕ್ಟೇರ್ ಪ್ರದೇಶದ ರಾಗಿ ಬೆಳೆ  ಚೆನ್ನಾಗಿ ಬಂದಿದೆ.
ಆದರೆ, ಗಾಯದ ಮೇಲೆ ಬರೆ ಎಳೆದಂತೆ ರಾಗಿ ಬೆಳೆಗೆ ಕೆಲವು ಕಡೆ (ಜಡಿಕೆ) ರೋಗ ಆವರಿಸಿ ರೈತರು ಆತಂಕಕ್ಕೆ ಒಳಗಾಗುವಂತಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.