ADVERTISEMENT

ಮಳೆ: ಹರಿಗೋಲಲ್ಲಿ ಪ್ರಯಾಣ

​ಪ್ರಜಾವಾಣಿ ವಾರ್ತೆ
Published 11 ಜೂನ್ 2013, 6:42 IST
Last Updated 11 ಜೂನ್ 2013, 6:42 IST

ಸಿರುಗುಪ್ಪ: ಇಲ್ಲಿಯ ತುಂಗಭದ್ರಾ ಮತ್ತು ಹಗರಿ ನದಿಯಲ್ಲಿ ಎರಡು ದಿನಗಳಿಂದ ಒಳ ಹರವಿನ ಪ್ರಮಾಣ ಹೆಚ್ಚಳವಾಗಿದ್ದು, ನದಿಗಳಲ್ಲಿ ಜೀವ ಕಳೆ ಬಂದಿದೆ.

ತಾಲ್ಲೂಕಿನಾದ್ಯಂತ ಮಳೆಯಾಗದಿದ್ದರೂ ಎರಡೂ ನದಿಯ ಮೇಲ್ಭಾಗದಲ್ಲಿ ಕಳೆದ ಎರಡು ದಿನಗಳಿಂದ ಉತ್ತಮ ಮಳೆಯಾದ ಪರಿಣಾಮ ನದಿಗಳಿಗೆ ನೀರು ಹರಿದು ಬರುತ್ತಿದೆ.

ಬತ್ತಿದ್ದ ಎರಡೂ ನದಿಗಳಲ್ಲಿ ನೀರಿನ ಹರಿವು ಕಂಡು ಜನ ಸಂತಸಗೊಂಡಿದ್ದಾರೆ. ನದಿ ದಂಡೆಯ ಏತ ನೀರಾವರಿಯ ಕೃಷಿ ಚಟುವಟಿಕೆಗಳು ಚುರುಕುಗೊಂಡು ರೈತ ವರ್ಗ ಮುಂಗಾರಿನ ಬತ್ತದ ಸಸಿ ಮಡಿಗಳ ಸಿದ್ಧತೆಯಲ್ಲಿ ಮಗ್ನರಾಗಿದ್ದಾರೆ.

ಹರಗೋಲಿನಲ್ಲಿ ಪ್ರಯಾಣ: ತುಂಗಭದ್ರಾ ನದಿಯಲ್ಲಿ ನೀರಿನ ಹರಿವು ಹೆಚ್ಚಾದ ಪರಿಣಾಮ ತಾಲ್ಲೂಕಿನ ಹೊನ್ನರಹಳ್ಳಿ ಗ್ರಾಮದ ಬಳಿ ಶನಿವಾರ ಹರಗೋಲು ಸಹಾಯದಿಂದ ಜನರನ್ನು ನದಿ ದಾಟಿಸಲಾಯಿತು.
ಶನಿವಾರದ ಅಮವಾಸ್ಯೆಗೆ ವಳಬಳ್ಳಾರಿಯ ಚನ್ನಬಸವತಾತನವರ ಮಠಕ್ಕೆ ತೆರಳುವ ಭಕ್ತರು ನದಿ ದಾಟಲು ಹರಗೋಲು ಮುಖಾಂತರ ತೆರಳಿದರು.

ಮುಂಗಾರು ಮಳೆ ನೀರಿನ ಹರಿವು ನದಿಗಳಲ್ಲಿ ಹರಿಯುತ್ತಿರುವುದು ರೈತಾಪಿ ವರ್ಗಕ್ಕೆ ಹೊಸ ಚೈತನ್ಯ ತಂದಿದೆ ಎಂದು ಚಿಕ್ಕಬಳ್ಳಾರಿಯ ಪ್ರಗತಿಪರ ರೈತ ಶ್ರೀನಿವಾಸರೆಡ್ಡಿ ಹರ್ಷ ವ್ಯಕ್ತಪಡಿಸಿದರು. ಕಳೆದ ಬೇಸಿಗೆಯಲ್ಲಿ ಹನಿ ನೀರಿಗೂ ಪರದಾಡಿದ ನಮಗೆ ಜೂನ್ ಆರಂಭದಲ್ಲಿಯೇ ನದಿಗೆ ನೀರು ಬಂದಿರುವುದು ರೈತರಿಗೆ ಅನುಕೂಲವಾಗಿದೆ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.