ADVERTISEMENT

ಮೂಲಸೌಕರ್ಯಕ್ಕೆ ಆಗ್ರಹಿಸಿ ಹೆದ್ದಾರಿ ತಡೆ

​ಪ್ರಜಾವಾಣಿ ವಾರ್ತೆ
Published 2 ಆಗಸ್ಟ್ 2012, 7:45 IST
Last Updated 2 ಆಗಸ್ಟ್ 2012, 7:45 IST

ಕುರುಗೋಡು: ಕೋಳೂರು ಹೋಬಳಿ ವ್ಯಾಪ್ತಿಯ ವಿವಿಧ ಗ್ರಾಮಗಳಿಗೆ ಮೂಲ ಸೌಲಭ್ಯ ಒದಗಿಸುವಂತೆ ಜಿಲ್ಲಾಡಳಿತವನ್ನು ಒತ್ತಾಯಿಸಿ  ಕರವೇ ಗ್ರಾಮ ಘಟಕಗಳ  ಕಾರ್ಯಕರ್ತರು ಶ್ರೀರಂಗಪಟ್ಟಣ-ಬೀದರ್ ರಾಜ್ಯ ಹೆದ್ದಾರಿಯಲ್ಲಿ ಬರುವ ಕೋಳೂರು ಕ್ರಾಸ್‌ನಲ್ಲಿ ಬುಧವಾರ ರಸ್ತೆ ತಡೆ ನಡೆಸಿದರು.

ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದ ಕರವೇ ರಾಜ್ಯ ಘಟಕದ ಸಂಘಟನಾ ಕಾರ್ಯದರ್ಶಿ ಗುಜ್ಜಲ ನಾಗರಾಜ್ ಮಾತನಾಡಿ, ಕೋಳೂರು, ದಮ್ಮೂರು,  ಹಂದ್ಯಾಳು ಮತ್ತು ಚಾನಾಳು ಗ್ರಾಪಂ. ವ್ಯಾಪ್ತಿಯ ಗ್ರಾಮಗಳು ರಸ್ತೆ, ಚರಂಡಿ, ಕುಡಿವ ನೀರು, ಮತ್ತಿತರ ಮೂಲ ಸೌಲಭ್ಯದಿಂದ ವಂಚಿತವಾಗಿವೆ.  ಸಮಸ್ಯೆಗಳ ನಿವಾರಣೆಗೆ ಜಿಲ್ಲಾಡಳಿತ ಸೂಕ್ತ ಕ್ರಮ ಕೈಗೊಳ್ಳದಿದ್ದರೆ ಎಲ್ಲಾ ರಸ್ತೆ ಬಂದ್ ಮಾಡುವ ಚಳವಳಿ ಹಮ್ಮಿಕೊಳ್ಳಲಾಗುತ್ತದೆ ಎಂದು ಎಚ್ಚರಿಸಿದರು.

ಮನವಿಯಲ್ಲಿ ನಾಲ್ಕು ಗ್ರಾಪಂ. ವ್ಯಾಪ್ತಿಯಲ್ಲಿ ಬರುವ ಕೋಳೂರು ಕುರುಗೋಡು ರಸ್ತೆ, ಕೋಳೂರು ಗ್ರಾಮದ ನೆಮ್ಮದಿ ಕೇಂದ್ರಕ್ಕೆ ಸಮರ್ಪಕ ಪರಿಕರ, ದಮ್ಮೂರು ಚಾನಾಳು ರಸ್ತೆ, ವಿದ್ಯಾರ್ಥಿಗಳಿಗೆ ಶಾಲಾ ಸಮಯಕ್ಕೆ ಸಾರಿಗೆ ಬಸ್, ಮಹಿಳೆಯರ ಶೌಚಾಲಯ, ಹಾಗೂ ಒಳ ಚರಂಡಿ, ಡಿ.ಕಗ್ಗಲ್ ಗ್ರಾಮದ ಓಣಿ ರಸ್ತೆ ಅಭಿವೃದ್ಧಿ.

ಚಾನಾಳು ಗ್ರಾಮದಲ್ಲಿ ಸ್ಥಗಿತಗೊಂಡಿದರುವ 1.25ಕೋಟಿ ರೂ ವೆಚ್ಚದ ಕುಡಿವ ನೀರಿನ ಕಾಮಗಾರಿಗೆ ತ್ವರಿತ ಚಾಲನೆ, ದಮ್ಮೂರು, ಕಗ್ಗಲ್ಲು ಚಾನಾಳು ಗ್ರಾಮದಲ್ಲಿ ಸುವರ್ಣ ಗ್ರಾಮ ಯೋಜನೆ ಜಾರಿ ಕುರಿತಂತೆ ವಿವಿಧ ನ್ಯಾಯಯುತ ಬೇಡಿಕೆ ಮನವಿ ಪತ್ರವನ್ನು ತಹಶೀಲ್ದಾರ್‌ಗೆ ಸಲ್ಲಿಸಿದರು.

ಬಳ್ಳಾರಿ ತಾಲ್ಲೂಕು ತಹಶೀಲ್ದಾರ್ ಶಶಿಧರ ಬಗಲಿ ಪ್ರತಿಭಟನಾ ಸ್ಥಳಕ್ಕೆ ಭೇಟಿನೀಡಿ, ಮನವಿ ಸ್ವೀಕರಿಸಿದರು. ಈ ಬಗ್ಗೆ ಸಂಬಂಧಿಸಿದ ಅಧಿಕಾರಿಗಳ ಗಮನಕ್ಕೆ ತರುವುದಾಗಿ ಭರವಸೆ ನೀಡಿದ ನಂತರ ರಸ್ತೆ ತಡೆ ಹಿಂಪಡೆಯಲಾಯಿತು.

ಕರವೇ ಜಿಲ್ಲಾ ಘಟಕದ ಅಧ್ಯಕ್ಷ ಚಾನಾಳ್ ಶೇಖರ್, ಉಪಾಧ್ಯಕ್ಷ ಕೋಳೂರು ಜಿ.ತಿಪ್ಪಾರೆಡ್ಡಿ, ತಾಲ್ಲೂಕು ಅಧ್ಯಕ್ಷ ಜಿ. ಬಸವರಾಜ್ ಸ್ವಾಮಿ, ಉಪಾಧ್ಯಕ್ಷ, ಕಗ್ಗಲ್ ಶಂಕರ್, ಪಿ ಜಗನ್ನಾಥ್, ರಾಘವೇಂದ್ರ ಈಶ್ವರರಾವ್, ಬಸವರಾಜಸ್ವಾಮಿ, ಜಿಲ್ಲಾ ಉಪಾಧ್ಯಕ್ಷ ಕೆ.ಎಂ. ಶಿವಕುಮಾರ ಭಾಗವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.