ADVERTISEMENT

ಮೊಳಕೆಯೊಡೆಯದ ಸೂರ್ಯಕಾಂತಿ: ರೈತನ ಆತಂಕ

​ಪ್ರಜಾವಾಣಿ ವಾರ್ತೆ
Published 13 ಡಿಸೆಂಬರ್ 2012, 8:20 IST
Last Updated 13 ಡಿಸೆಂಬರ್ 2012, 8:20 IST

ಕಂಪ್ಲಿ: ನಾಲ್ಕು ಎಕರೆ ಭೂಮಿಯಲ್ಲಿ ಬಿತ್ತನೆ ಮಾಡಿದ್ದ ಸೂರ್ಯಕಾಂತಿ 10ದಿನ ಕಳೆದರೂ ಮೊಳಕೆಯೊಡೆಯದೆ ರೈತ ಆತಂಕಗೊಂಡ ಘಟನೆ ಇಲ್ಲಿಗೆ ಸಮೀಪದ ಹೊಸದರೋಜಿ ಗ್ರಾಮದಲ್ಲಿ ಜರುಗಿದೆ.

ರೈತ ಡಿ. ರಮೇಶ್‌ಬಾಬು ಬಳ್ಳಾರಿ ನಗರದ ಸುಚಿತ್ರ ಆಗ್ರೋ ಏಜಿನ್ಸಿಸ್(ಇದೀಗ ಶ್ರೀ ವೀರಭದ್ರೇಶ್ವರ ಆಗ್ರೋ ಏಜೆನ್ಸಿ ಎಂದು ಬದಲಾವಣೆಯಾಗಿದೆ) ಅವರಿಂದ ನ. 21ರಂದು ಲಕ್ಷ್ಮಿ ಸೀಡ್ಸ್ ಹೆಸರಿನ 8 ಕೆ.ಜಿ ಸೂರ್ಯಕಾಂತಿ ಬೀಜವನ್ನು ಖರೀದಿಸಿದ್ದಾರೆ. ನ. 25ರಂದು ತಮ್ಮ 4ಎಕರೆ ಭೂಮಿಯಲ್ಲಿ ಹಿಂಗಾರು ಬಿತ್ತನೆಯಾಗಿ ಸೂರ್ಯಕಾಂತಿ ಬಿತ್ತನೆ ಮಾಡಿದ್ದಾರೆ. ಕನಿಷ್ಠ 5ದಿನಗಳಲ್ಲಿ ಮೊಳಕೆ ಒಡೆಯಬೇಕಿದ್ದ ಬೀಜ ಹತ್ತು ದಿನಗಳು ಕಳೆದರೂ ಯಾವ ಸುಳಿವೂ ಇಲ್ಲದೆ ಕಂಗಾಲಾಗುವಂತೆ ಮಾಡಿದೆ. ಇದರಿಂದ ಆತಂಕಗೊಂಡ ರಮೇಶಬಾಬು ಅಂಗಡಿ ಮಾಲೀಕರನ್ನು ವಿಚಾರಿಸಿದಾಗ ಭರವಸೆಯೊಂದನ್ನು ಬಿಟ್ಟು ಬೇರೆನೂ ಸಿಕ್ಕಿಲ್ಲ. ಬಿತ್ತನೆಯಾದ ಕ್ಷೇತ್ರದಲ್ಲಿ ಹತ್ತು ದಿನಗಳು ಕಳೆದಾಗ ಶೇ 30ರಷ್ಟು ಮಾತ್ರ ಮೊಳಕೆ ಒಡೆದಿದ್ದು, ಉಳಿದ ಶೇ 70ರಷ್ಟು ನಾಶವಾಗಿದೆ.

ಈ ಕುರಿತು ಸೂರ್ಯಕಾಂತಿ ಬೀಜ ಮಾರಾಟ ಮಾಡಿದ ಅಂಗಡಿ ಮಾಲೀಕರನ್ನು ಪ್ರಶ್ನಿಸಿದಾಗ, ನೀವು ಸಮರ್ಪಕ ಬಿತ್ತನೆ ಮಾಡಿಲ್ಲ. ತಾವು ಯಾವುದೇ ಕಳಪೆ ಬೀಜವನ್ನು ಮಾರಾಟ ಮಾಡಿಲ್ಲ. ಈ ಕಾರಣದಿಂದ ನಷ್ಟವನ್ನು ಭರಿಸುವ ಪ್ರಶ್ನೆಯೇ ಇಲ್ಲ ಎಂದು ಸ್ಪಷ್ಟಪಡಿಸಿದ್ದಾರೆ ಎಂಬುದು ನೊಂದ ರೈತ ರಮೇಶ್‌ಬಾಬು ಅವರ ಅಳಲು. ಕಳೆದ 25ವರ್ಷಗಳಿಂದ ಒಕ್ಕಲುತನ ನಂಬಿ ಜೀವನ ಮಾಡುತ್ತ್ದ್ದಿದು, ಕೃಷಿಯಲ್ಲಿ ನನಗೆ ಅನುಭವ ಇದೆ. ನನ್ನ ಬಳಿ ಲಾಟ್ ನಂಬರ್ ಇರುವ ನಾಲ್ಕು ಸೂರ್ಯಕಾಂತಿ ಖಾಲಿ ಪಾಕೆಟ್ ಮತ್ತು ಅಂಗಡಿ ಮೂಲ ಪಾವತಿ ಇದೆ. ಈಗಾಗಲೇ ಸುಮಾರು ರೂ 10 ಸಾವಿರ ಖರ್ಚು ಮಾಡಿದ್ದು, ನಷ್ಟ ಪಾವತಿಸದಿದ್ದಲ್ಲಿ ಕಾನೂನು ಮೊರೆ ಹೋಗುವುದಾಗಿ ಎಚ್ಚರಿಸಿದ್ದಾರೆ.

ಈ ರೀತಿ ರೈತರ ಬೆನ್ನಿಗೆ ಚೂರಿ ಹಾಕುವ ಏಜೆನ್ಸಿಗಳ ವಿರುದ್ಧ ಕೃಷಿ ಇಲಾಖೆ ಅಧಿಕಾರಿಗಳು ಕ್ರಮ ತೆಗೆದುಕೊಳ್ಳಬೇಕು. ನನಗಾಗಿರುವ ನಷ್ಟ ಭರಿಸಲು ರೈತ ಸಂಘಟನೆಗಳ ಸಹಕಾರ ಜೊತೆಗೆ ಕೃಷಿ ಇಲಾಖೆ ಅಧಿಕಾರಿಗಳು ಹೊಲಕ್ಕೆ ಭೇಟಿ ನೀಡಿ ಪರೀಕ್ಷಿಸುವಂತೆ ಮನವಿ ಮಾಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.