ADVERTISEMENT

ಮೌಲ್ಯಮಾಪನ ಸಮಸ್ಯೆ: ಪರಿಹಾರದ ಭರವಸೆ

​ಪ್ರಜಾವಾಣಿ ವಾರ್ತೆ
Published 3 ಮಾರ್ಚ್ 2012, 4:40 IST
Last Updated 3 ಮಾರ್ಚ್ 2012, 4:40 IST

ಬಳ್ಳಾರಿ: ಸ್ಥಳೀಯ ವಿಜಯನಗರ ಶ್ರೀ ಕೃಷ್ಣದೇವರಾಯ ವಿಶ್ವವಿದ್ಯಾಲಯ ವಿದ್ಯಾರ್ಥಿ ಹೋರಾಟ ಸಮಿತಿ ಪದಾಧಿಕಾರಿಗಳು ಶುಕ್ರವಾರ ವಿವಿಯ ಕುಲಪತಿ ಡಾ.ಮಂಜಪ್ಪ ಹೊಸಮನೆ ಹಾಗೂ ಕುಲಸಚಿವರಾದ ರಂಗರಾಜ ವನದುರ್ಗ ಅವರನ್ನು ಭೇಟಿ ಮಾಡಿ, ಮೌಲ್ಯಮಾಪನ ಸಮಸ್ಯೆಗಳ ಕುರಿತು ಚರ್ಚಿಸಿ, ಸಮಸ್ಯೆಗಳ ಪರಿಹಾರ ಕೋರಿದರು.

ಮೌಲ್ಯಮಾಪನ ದೋಷದಿಂದಾಗಿ ನ್ಯಾಯಯುತವಾಗಿ ಅಂಕ ಪಡೆಯದ  ವಿದ್ಯಾರ್ಥಿಗಳಿಂದ ರಿಯಾಯಿತಿ ಶುಲ್ಕ ಪಡೆದು, ಮರು ಮೌಲ್ಯಮಾಪನಕ್ಕೆ  ಕ್ರಮ ಕೈಗೊಳ್ಳಲಾಗುವುದು ಎಂದು ಕುಲಪತಿಗಳು ಭರವಸೆ ನೀಡಿದರು.
ಕಾಲೇಜುಗಳಿಗೆ ಈ ಕುರಿತು ಸುತ್ತೋಲೆ ಕಳುಹಿಸಲಾಗುವುದು, ಎಲ್ಲ ವಿಷಯಗಳ ಮೌಲ್ಯಮಾಪನಗೊಂಡ ಉತ್ತರ ಪತ್ರಿಕೆಯ ಹಸ್ತ್ರಪ್ರತಿ ನೀಡಲೂ ಕಡಿಮೆ ಶುಲ್ಕ ಪಡೆಯಲು ಕ್ರಮ ಕೈಗೊಳ್ಳಲಾಗುವುದು.

ಈ ಕುರಿತು ಮಾರ್ಚ್ 21 ರಂದು ನಡೆಯಲಿರುವ ಅಕಾಡೆಮಿಕ್ ಕೌನ್ಸಿಲ್‌ನ ಸಭೆಯಲ್ಲಿ ಚರ್ಚಿಸಿ, ವಿದ್ಯಾರ್ಥಿಗಳ ಪರ ನಿರ್ಧಾರ ಕೈಕೊಳ್ಳಲಾಗುವುದು, ಸ್ಥಳೀಯ ವೀರಶೈವ ವಾಣಿಜ್ಯ ಮಹಾ ವಿದ್ಯಾಲಯದ ವಿದ್ಯಾರ್ಥಿಗಳು ಪಡೆದ ವಿವಿಧ ವಿಷಯಗಳ ಮೌಖಿಕ ಪರೀಕ್ಷೆ ಯ ಅಂಕಗಳನ್ನು  ಅಂಕಪಟ್ಟಿಯಲ್ಲಿ ಸೇರಿಸಿ, ಹೊಸ ಅಂಕಪಟ್ಟಿ ನೀಡ ಲಾಗುವುದು.

ಆಯಾ ಸೆಮಿಸ್ಟರ್‌ಗಳ ಪರೀಕ್ಷೆಯ ದಿನಾಂಕವನ್ನು ಒಂದು ತಿಂಗಳು ಅಥವಾ ಕನಿಷ್ಠ 20 ದಿನ ಮುಂಚಿತವಾಗಿ ಘೋಷಿಸಲಾಗು ವುದು, ಎರಡು ವಿಷಯಗಳ ಪರೀಕ್ಷೆಗಳ ನಡುವೆ ಕನಿಷ್ಠ ಒಂದು ದಿನದ ಸಮಯಾವಕಾಶ ನೀಡಲಾಗುವುದು ಎಂದು ಅವರು ಭರವಸೆ ನೀಡಿದರು.

ಹೋರಾಟ ಸಮಿತಿ ಸಂಚಾಲಕ ಡಾ.ಪ್ರಮೋದ್ ಸಹ ಸಂಚಾಲಕ ಅರುಣ್,  ಸಿದ್ಧಾರ್ಥ, ವಿನಯ್, ದೀಪಕ್, ದೇವಿಸಿಂಗ್ ಮತ್ತಿತರರು ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.