ADVERTISEMENT

ರಾಸಾಯನಿಕ ಗೊಬ್ಬರಗಳ ಬಳಕೆ ಬೇಡ

​ಪ್ರಜಾವಾಣಿ ವಾರ್ತೆ
Published 19 ಜನವರಿ 2011, 8:30 IST
Last Updated 19 ಜನವರಿ 2011, 8:30 IST

ಸಂಡೂರು: ಮಣ್ಣಿನಲ್ಲಿ 16 ಪೋಷಕಾಂಶಗಳು ಇರುತ್ತವೆ. ಜೊತೆಗೆ ರೈತರು ಮಣ್ಣಿನ ಫಲವತ್ತತೆ ಹೆಚ್ಚಿಸಲು ಕೊಟ್ಟಿಗೆ ಗೊಬ್ಬರ ಮತ್ತು ಎರೆಹುಳು, ಕುರಿ ಕೋಳಿ ಗೊಬ್ಬರ ಬಳಸಬೇಕು ಎಂದು ಹಗರಿ ಕೃಷಿ ವಿಜ್ಞಾನ ಕೇಂದ್ರದ ಮಣ್ಣು ತಜ್ಞ ವಿಜಯಶಂಕರ  ರೈತರಿಗೆ ಸಲಹೆ ನೀಡಿದರು. ಪಟ್ಟಣದ ರೈತ ಸಂಪರ್ಕ ಕೇಂದ್ರದಲ್ಲಿ ಸೋಮವಾರ “ಮುಸುಕಿನ (ಮೆಕ್ಕೆ) ಜೋಳ ಅಭಿವೃದ್ಧಿ ಕುರಿತು ಏರ್ಪಡಿಸಲಾಗಿದ್ದ ತರಬೇತಿ ಶಿಬಿರದಲ್ಲಿ ಅವರು  ಮಾತನಾಡಿದರು.

ಅಧಿಕ ಆದಾಯದ ಆಸೆಯಿಂದ ಬೆಳೆಗಳಿಗೆ ರಾಸಾಯನಿಕ ಗೊಬ್ಬರ ಬಳಸುವುದರಿಂದ ಮಣ್ಣಿನ ಫಲವತ್ತತೆ ಹಾಳಾಗುತ್ತದೆ ಅಲ್ಲದೇ ರೋಗ ನಿರೋಧಕ ಶಕ್ತಿ ಸಹ ಕುಂದುತ್ತದೆ ಎಂದು ಅವರು ತಿಳಿಸಿದರು.ಶಾಸಕ ತುಕಾರಾಮ ಮಾತನಾಡಿ ತಾಲ್ಲೂಕಿನಲ್ಲಿ 33 ಸಾವಿರ ಹೆಕ್ಟೇರ್ ಕೃಷಿ ಭೂಮಿಯಲ್ಲಿ 20 ಸಾವಿರ ಹೆಕ್ಟೇರ್‌ಗೂ ಅಧಿಕ ಪ್ರದೇಶದಲ್ಲಿ ಮೆಕ್ಕೆಜೋಳ ಬೆಳೆಯಲಾಗುತ್ತಿದೆ.

ರೈತರು ಒಂದೇ ಬೆಳೆಯನ್ನು ಆಶ್ರಯಿಸದೇ ಮಣ್ಣಿಗೆ ಸರಿದೂಗುವ ಬೇರೆ ಬೇರೆ ಬೆಳೆಗಳನ್ನು ಬೆಳೆಯಬೇಕು ಇಲ್ಲದಿದ್ದರೆ ಆಹಾರ ಧಾನ್ಯದ ಸಮಸ್ಯೆ ತಲೆದೋರುತ್ತದೆ ಎಂದರು. ಯಾರ ಹಂಗಿಲ್ಲದೆ ಬದುಕುತ್ತಿರುವ ರೈತರ ಸಮಸ್ಯೆಗಳಿಗೆ ಅಧಿಕಾರಿಗಳು ಶೀಘ್ರವಾಗಿ ಸ್ಪಂದಿಸಬೇಕಾಗಿದೆ ಎಂದರು. ಹೊಸಪೇಟೆ ಡಿ.ಟಿ.ಯು ಸಂಸ್ಥೆಯ ಕೃಷಿ ತಜ್ಞ ಎಂ.ಜಿ. ಪೂಜಾರ, ನೀರಿನ ನಿರ್ವಹಣೆ, ಸಾವಯವ ಕೃಷಿ, ಮುಸುಕಿನ ಜೋಳ ಸೇರಿದಂತೆ ವಿವಿಧ ಆಹಾರ ಧಾನ್ಯಗಳ ಕುರಿತು ರೈತರಿಗೆ ಮಾಹಿತಿ ನೀಡಿದರು.

ಪ್ರಗತಿ ಪರ ರೈತ ಜಾಫರಸಾಬ್ ಮಾತನಾಡಿ, ಕೃಷಿ ಪ್ರಧಾನವಾದ ನಮ್ಮ ದೇಶದಲ್ಲಿ ಕೃಷಿ ಅಭಿವೃದ್ಧಿಗೆ ಸಂಬಂಧಿಸಿದಂತೆ ಸರ್ಕಾರಗಳು ಹೆಚ್ಚಿನ ಆಸಕ್ತಿಗಳು ತೋರುತ್ತಿಲ್ಲ. ನಮ್ಮ ತಾಲ್ಲೂಕಿನಲ್ಲಿ ಕೃಷಿ ಇಲಾಖೆ ಕಳೆದ ಹತ್ತಾರು ವರ್ಷಗಳಿಂದ ಸಿಬ್ಬಂದಿ ಹಾಗು ಸಂಪನ್ಮೂಲಗಳ ಕೊರತೆ ಎದುರಿಸುತ್ತಿದೆ ಎಂದು ಅಭಿಪ್ರಾಯಪಟ್ಟರು.ತಾ.ಪಂ. ಮಾಜಿ ಅಧ್ಯಕ್ಷ ನಾಗೇಂದ್ರಪ್ಪ, ಗೋವಿಂದಪ್ಪ, ಪುರಸಭೆಯ ಅಧ್ಯಕ್ಷ ಎಲ್.ಎಚ್ ಶಿವಕುಮಾರ, ರೈತರಾದ ಹೀರಣ್ಣ, ರೈತ ಸಂಘದ ಎಂ.ಎಲ್.ಕೆ ನಾಯ್ಡು ಬಿ. ಜಯಣ್ಣ, ಪ್ರಭಾರಿ ಸಹಾಯಕ ಕೃಷಿ ನಿರ್ದೇಶಕೆ ಎಸ್.ಎಂ ಚನ್ನಬಸಯ್ಯ, ಸಹಾಯಕ ಕೃಷಿ ಅಧಿಕಾರಿಗಳಾದ ಗಣಪತಿ ರೇಷ್ಮೆ, ಶಿವಾನಂದಪ್ಪ ಉಪಸ್ಥಿತರಿದ್ದರು. 

.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.