ADVERTISEMENT

ರೈತರಿಗೆ ಭೀತಿ ಹುಟ್ಟಿಸಿದ ಮೊಸಳೆ

​ಪ್ರಜಾವಾಣಿ ವಾರ್ತೆ
Published 19 ಸೆಪ್ಟೆಂಬರ್ 2011, 5:45 IST
Last Updated 19 ಸೆಪ್ಟೆಂಬರ್ 2011, 5:45 IST

ಸಿರುಗುಪ್ಪ: ಕಾಲುವೆಯಲ್ಲಿ ಮೊಸಳೆಯೊಂದು ವಾಸವಾಗಿ ಪ್ರತಿನಿತ್ಯ ಜನರ ಕಣ್ಣಿಗೆ ಕಾಣಿಸಿಕೊಂಡು ಭೀತಿಯನ್ನುಂಟು ಮಾಡುತ್ತಿದೆ.

ಪಟ್ಟಣ ಸಮೀಪದ ಹಳೇಕೆಂಚನಗುಡ್ಡ ರಸ್ತೆಯ ಕಲ್ಲುಗಟ್ಟಿಕಾಲುವೆಯಲ್ಲಿ ಕಳೆದ ಒಂದು ತಿಂಗಳಿಂದ ದೊಡ್ಡ ಮೊಸಳೆಯೊಂದು ವಾಸವಾಗಿದ್ದು ರೈತಾಪಿ ವರ್ಗಕ್ಕೆ ಕೃಷಿ ಚಟುವಟಿಕೆಗೆ ಅಡ್ಡಿ ಉಂಟಾಗಿದೆ.

ತುಂಗಭದ್ರಾ ಜಲಾಶಯದಿಂದ ನದಿಗೆ ನೀರು ಬಿಟ್ಟ ಪರಿಣಾಮ ಕೆಂಚನಗುಡ್ಡ ಬಳಿಯ ನದಿಯಿಂದ ಕಾಲುವೆಗೆ ನಿತ್ಯ ಹರಿಯುವ ನೀರಿನಲ್ಲಿ ಬಂದಿರುವ ಮೊಸಳೆ ಕಾಲುವೆ ದಡದ ಪೊದೆಯಲ್ಲಿ ನೆಲೆಸಿ ಆಹಾರಕ್ಕಾಗಿ ಹೊರಗೆ ಬಂದು ಕಾದು ಹೊಂಚು ಹಾಕುತ್ತಿರುವುದು ಸಾಮಾನ್ಯವಾಗಿದೆ.

ಈ ಕಾಲುವೆಯ ಅಚ್ಚುಕಟ್ಟು ಪ್ರದೇಶದ ರೈತರು ತಮ್ಮ ನೀರಾವರಿ ಜಮೀನುಗಳಿಗೆ ನೀರು ಹರಿಸಲು ಹೋದ ಸಮಯದಲ್ಲಿ ಕಾಲುವೆಯಲ್ಲಿ ಮೊಸಳೆಯನ್ನು ನೋಡಿ ಹೌಹಾರಿ ಭಯಭೀತರಾಗಿದ್ದಾರೆ. ಇದೇ ರೀತಿ ಕಾಲುವೆಯಲ್ಲಿ ಇನ್ನೂ ಒಂದೆರೆಡು ಮೊಸಳೆಗಳು ಬಂದು ಇಲ್ಲಿಯೇ ಬೀಡುಬಿಟ್ಟಿವೆ ಎಂದು ರೈತರಾದ ರಘು, ರಾಜೇಶ್, ಸೋಮ ಭಾನುವಾರ ಪತ್ರಿಕೆಗೆ ಮಾಹಿತಿ ನೀಡಿದರು.

ಪ್ರತಿ ಅರ್ಧಗಂಟೆಗೊಮ್ಮೆ ಹೊರ ಬರುವ ಮೊಸಳೆ ಜನರ ಶಬ್ದ ಅರಿತು ನೀರಿನಲ್ಲಿ, ಪೊದೆಯಲ್ಲಿ ಅಡಗಿಕೊಳ್ಳುತ್ತವೆ. ಸುಮಾರು ಐದು ಅಡಿಗೂ ಅಧಿಕ ಉದ್ದವಿರುವ ದಷ್ಟಪುಷ್ಟವಾಗಿರುವ ಮೊಸಳೆಗಳಿದ್ದು ರೈತರು ಬತ್ತದ ಗದ್ದೆಗಳಿಗೆ ನೀರು ಹರಿಸಲು ಹೋಗದಂತೆ ಆತಂಕ ಸೃಷ್ಟಿಸಿದೆ, ಅರಣ್ಯ ಇಲಾಖೆಯವರು ಇವುಗಳನ್ನು ಸೆರೆ ಹಿಡಿದು ಸ್ಥಳಾಂತರ ಮಾಡುವಂತೆ ರೈತರು ಕೋರಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.