ಬಳ್ಳಾರಿ: ‘ತುಂಗಭದ್ರಾ ಬಲದಂಡೆ ಕೆಳಮಟ್ಟದ ಕಾಲುವೆಗೆ ಏ 15ರವರೆಗೆ ನೀರು ಹರಿಸಬೇಕು’ ಎಂದು ಆಗ್ರಹಿಸಿ ರೈತ ಸಂಘ–ಹಸಿರು ಸೇನೆ ಜಿಲ್ಲಾ ಘಟಕದ ನೇತೃತ್ವದಲ್ಲಿ ರೈತರು ನಗರದ ಜಿಲ್ಲಾಧಿಕಾರಿ ಕಚೇರಿ ಮುಂಭಾಗದ ಬುಧವಾರದಿಂದ ಅನಿರ್ದಿಷ್ಟ ಅವಧಿಯ ಉಪವಾಸ ಸತ್ಯಾಗ್ರಹವನ್ನು ಆರಂಭಿಸಿದರು.‘ಮಾ 31ರಿಂದ ಕಾಲುವೆಯಲ್ಲಿ ನೀರು ಬಂದ್ ಆಗಿದೆ. ಬೆಳೆಗಳು ಒಣಗುತ್ತಿವೆ. ಕೂಡಲೇ ನೀರು ಹರಿಸಬೇಕು. ಏ 10ರವರೆಗೂ ನಿಲ್ಲಿಸಬಾರದು’ ಎಂದು ಆಗ್ರಹಿಸಿ ರೈತರು ಏ.2ರಂದು ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಧರಣಿ ನಡೆಸಿದ್ದರು. ಆ ಸಂದರ್ಭದಲ್ಲಿ ಚರ್ಚಿಸಿದ್ದ ಜಿಲ್ಲಾಧಿಕಾರಿ ಡಾ.ರಾಮಪ್ರಸಾದ್ ಮನೋಹರ್, ‘ದಿನವೂ 200 ಕ್ಯುಸೆಕ್ನಂತೆ ಐದು ದಿನ ಮಾತ್ರ ನೀರು ಹರಿಸಲಾಗುವುದು’ ಎಂದು ಹೇಳಿದ್ದರು. ಅವರ ಭರವಸೆಯನ್ನು ಒಪ್ಪದ ರೈತರು ಕಾಲುವೆಗೆ ನೀರು ಹರಿಸುವವರೆಗೂ ಉಪವಾಸ ನಡೆಸಲು ನಿರ್ಧರಿಸಿದ್ದರು.
‘ಕಾಲುವೆ ವ್ಯಾಪ್ತಿಯ ಹೊಸಪೇಟೆ, ಸಿರುಗುಪ್ಪ ಮತ್ತು ಬಳ್ಳಾರಿ ತಾಲ್ಲೂಕಿನ ಸುಮಾರು 1.32 ಲಕ್ಷ ಎಕರೆಯಲ್ಲಿ ಭತ್ತವನ್ನು ಬೆಳೆಯಲಾಗಿದೆ. ಕಾಳು ಕಟ್ಟುವ ಹಂತಕ್ಕೆ ಬಂದಿರುವಾಗಲೇ ನೀರು ದಕ್ಕದಂತಾಗಿದೆ. ತುಂಗಭದ್ರಾ ಆಡಳಿತ ಮಂಡಳಿ ಕಾಲುವೆಗೆ ನೀರು ಹರಿಸುತ್ತಿಲ್ಲ. ಈಗ ಹರಿಸಿದರೆ ಶೇ 60ರಷ್ಟು ಬೆಳೆ ಮಾತ್ರ ಕೈಗೆ ದಕ್ಕುತ್ತದೆ. ಇಂಥ ಪರಿಸ್ಥಿತಿಯಲ್ಲೂ ಕನಿಷ್ಠ ಹತ್ತು ದಿನ ನೀರು ಹರಿಸಲು ನಿರಾಕರಿಸುವುದು ಅಮಾನವೀಯ’ ಎಂದು ಮುಖಂಡ ಚಾಗನೂರು ಮಲ್ಲಿಕಾರ್ಜುನರೆಡ್ಡಿ ಆಕ್ರೋಶ ವ್ಯಕ್ತಪಡಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.