ADVERTISEMENT

ಲಾಟರಿ ಹೆಸರಿನಲ್ಲಿ ಮೋಸ ಹೋದ ಗೋವಿಂದಪ್ಪ

​ಪ್ರಜಾವಾಣಿ ವಾರ್ತೆ
Published 21 ಜೂನ್ 2013, 9:14 IST
Last Updated 21 ಜೂನ್ 2013, 9:14 IST

ಕಂಪ್ಲಿ: ನಿಮಗೆ ರೂ50 ಲಕ್ಷ ಲಾಟರಿ ಬಂದಿದೆ ಎನ್ನುವ ಮೊಬೈಲ್ ಕರೆಯನ್ನು ಬೆನ್ನು ಹತ್ತಿದ ಬಡ ವ್ಯಕ್ತಿಯೊಬ್ಬ ರೂ 26 ಸಾವಿರ ಪಂಗನಾಮ ಹಾಕಿಸಿಕೊಂಡ ಘಟನೆ ಎರಡು ದಿನಗಳ ಹಿಂದೆ ಕಂಪ್ಲಿ ಸಮೀಪದ ದೇವಸಮುದ್ರ ಗ್ರಾಮದಲ್ಲಿ ಜರುಗಿದೆ.

ಜಿ. ಗೋವಿಂದಪ್ಪ ಟೈಲರಿಂಗ್ ಕಟಿಂಗ್ ಮಾಸ್ಟರ್ ಆಗಿದ್ದು, 11 ವರ್ಷಗಳ ಕಾಲ ಒಮನ್ ದೇಶದ ಮಸ್ಕತ್‌ನಲ್ಲಿ ಟೈಲರಿಂಗ್ ಮಾಡಿ ಇದೀಗ ದೇವಸಮುದ್ರ ಗ್ರಾಮದಲ್ಲಿ ನೆಲೆಸಿದ್ದಾರೆ. ಹೊರ ದೇಶದ ಸಂಖ್ಯೆಯಿಂದ ವಾರದ ಹಿಂದೆ ಇವರಿಗೆ ಮಿಸ್ಡ್ ಕಾಲ್ ಬಂದಿತ್ತು. ಈ ಹಿಂದೆ ಮಸ್ಕತ್‌ನಲ್ಲಿ ಕಾರ್ಯ ನಿರ್ವಹಿಸಿದ್ದರಿಂದ ಯಾರಾದರೂ ಸ್ನೇಹಿತರು, ಆಪ್ತರು ಕರೆ ಮಾಡಿರಬಹುದು ಎಂದುಕೊಂಡು ಆ ಸಂಖ್ಯೆಗೆ ಕರೆ ಮಾಡಿದ್ದಾರೆ.

ಈ ಸಂದರ್ಭದಲ್ಲಿ ಪಂಜಾಬಿ ಮಿಶ್ರಿತ ಹಿಂದಿ ಭಾಷೆಯಲ್ಲಿ ನಿಮ್ಮ ಏರ್‌ಟೆಲ್ ಸಂಖ್ಯೆಗೆ ರೂ 50 ಲಕ್ಷ ಲಾಟರಿ ಬಂದಿದ್ದು ಮಿತ್ತಲ್ ಕಂಪೆನಿ ನೀಡಲಿದೆ. ನಾನು ಮಿತ್ತಲ್ ಕಂಪೆನಿ ಮ್ಯಾನೇಜರ್ ಆಗಿ ಕೆಲಸ ನಿರ್ವಹಿಸುತ್ತಿದ್ದು, ರೂ 50 ಲಕ್ಷ ತಲುಪಿಸುವುದಾಗಿ ಆ ವ್ಯಕ್ತಿ ತಿಳಿಸಿದ. ಪ್ರೊಸೆಸಿಂಗ್ ಫೀ ಆಗಿ ಕೂಡಲೇ ರೂ 16 ಸಾವಿರ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಮೂಲಕ ಖಾತೆ ಸಂಖ್ಯೆ: 30122830939 ಹಣ ಕಳುಹಿಸಿ ಎಂದು ತಿಳಿಸಿದ್ದಾರೆ.

ಇವರ ಬಣ್ಣದ ಮಾತಿಗೆ ಮರುಳಾದ ಗೋವಿಂದಪ್ಪ, ಸಾಲ ಮಾಡಿ ಇದೇ 17ರಂದು ಬಳ್ಳಾರಿಯ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಮೂಲಕ ಆ ವ್ಯಕ್ತಿ ತಿಳಿಸಿದ ಖಾತೆಗೆ ಮೊದಲ ಕಂತಾಗಿ ರೂ10 ಸಾವಿರ ಜಮಾ ಮಾಡಿದ್ದಾರೆ.

ಬಳ್ಳಾರಿಯಿಂದ ದೂರದ ದೇವಸಮುದ್ರ ಗ್ರಾಮದ ಮನೆ ತಲುಪುವ ಮುನ್ನವೇ ಮತ್ತೊಂದು ಕರೆ ಮಾಡಿದ ವ್ಯಕ್ತಿ, `ರೂ 50 ಲಕ್ಷ ಚೆಕ್ ರೆಡಿ ಆಗಿದೆ. ಕಳಿಸಲು ಇಲ್ಲಿನ ಬ್ಯಾಂಕ್‌ಗೆ ರೂ 25 ಸಾವಿರ ಪಾವತಿಸಬೇಕಿದೆ. ತಕ್ಷಣ ಹಣ ಕಳುಹಿಸುವಂತೆ' ತಿಳಿಸಿದ್ದಾರೆ. ಆಗ ಗೋವಿಂದಪ್ಪ, ರೂ 25 ಸಾವಿರ ಬದಲಿಗೆ ರೂ16 ಸಾವಿರ ಕಳುಹಿಸುವುದಾಗಿ ಹೇಳಿದ್ದಾರೆ. ಇನ್ನುಳಿದ ಬಾಕಿ ರೂ9 ಸಾವಿರ ಮೊತ್ತವನ್ನು ಲಾಟರಿ ಹಣ ಬಂದ ನಂತರ ಪಾವತಿಸುವುದಾಗಿ ಟೇಲರ್ ಗೋವಿಂದಪ್ಪ ಹೇಳಿದಾಗ ಸಮ್ಮತಿಸಿದ್ದಾರೆ.

ಕಂಪ್ಲಿ ಸಮೀಪದ ಗಂಗಾವತಿ ನಗರದ ಫೆಡರಲ್ ಬ್ಯಾಂಕ್‌ನಲ್ಲಿ ರೂ26 ಗ್ರಾಂ ಬಂಗಾರದ ಚೈನ್ ಅಡವಿಟ್ಟು ರೂ15 ಸಾವಿರ ಸಾಲ ಮಾಡಿ ಮತ್ತೆ ಎಸ್‌ಬಿಐನಿಂದ ಇದೇ 18ರಂದು ಎರಡನೇ ಬಾರಿ ರೂ16 ಸಾವಿರ ಹಣ ಸಂದಾಯ ಮಾಡಿದ್ದಾನೆ.

ಹಣ ಜಮಾ ಮಾಡಿದ ಕೆಲವೇ ನಿಮಿಷಗಳಲ್ಲಿ ಗೋವಿಂದಪ್ಪನ ಮೊಬೈಲ್‌ಗೆ `ನಿಮ್ಮ ಹಣ ತಲುಪಿದೆ. ದುಬೈನಿಂದ ಲಾಟರಿ ಪಿನ್ ಕೋಡ್ ತರಿಸಬೇಕಿದೆ. ಕೂಡಲೇ ರೂ50 ಸಾವಿರ ಖಾತೆಗೆ ಹಾಕಬೇಕು ಎಂದು ತಿಳಿಸಿದ್ದಾರೆ. ಗೋವಿಂದಪ್ಪ ಎರಡು ಕಂತುಗಳಲ್ಲಿ ಈಗಾಗಲೇ ರೂ 26 ಸಾವಿರ ಪಾವತಿಸಿದ್ದೀನಿ. ನನ್ನ ಬಳಿ ಹಣ ಇಲ್ಲ ಎಂದು ಪರಿಪರಿಯಾಗಿ ವಿನಂತಿಸಿಕೊಂಡರೂ ಕರುಣೆ ತೋರದ ಕಂಪೆನಿಯವರು ಎರಡು ಗಂಟೆಯೊಳಗೆ ರೂ 50 ಸಾವಿರ ಹಣ ಸಂದಾಯ ಮಾಡದಿದ್ದಲ್ಲಿ ನಾವು ಜವಾಬ್ದಾರರಲ್ಲ' ಎಂದು ಮೊಬೈಲ್ ಕರೆ ಕಟ್ ಮಾಡಿದ್ದಾರೆ.

ನಂತರ ಟೈಲರ್ ಗೋವಿಂದಪ್ಪ, ಕಂಪೆನಿ ಮೊಬೈಲ್ ಸಂಖ್ಯೆ 00923037804369 ಹಲವು ಬಾರಿ ಕರೆ ಮಾಡಿದರೂ ರಿಂಗ್ ಕೂಡ ಆಗಿಲ್ಲ. ತಕ್ಷಣ ಗಂಗಾವತಿ ಎಸ್‌ಬಿಐ ಬ್ಯಾಂಕ್ ವ್ಯವಸ್ಥಾಪಕ ಬಳಿ ತೆರಳಿ ತಾವು ಹಣ ಸಂದಾಯ ಮಾಡಿದ ಖಾತೆ ವಿವರ ನೋಡಿದಾಗ ಎಲ್ಲಾ ಹಣ ಬಿಡಿಸಿಕೊಂಡಿರುವುದು ಮತ್ತು ಖಾತೆ ವಿವರದಲ್ಲಿ ಯಾವುದೇ ಮೊಬೈಲ್ ಸಂಪರ್ಕ ಸಂಖ್ಯೆ ಇಲ್ಲದಿರುವುದು ಕಂಡು ಬಂದಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.