ADVERTISEMENT

`ವೈಚಾರಿಕ ಪ್ರಜ್ಞೆ ಬೆಳೆಸುವ ಬರವಣಿಗೆ ಅಗತ್ಯ'

​ಪ್ರಜಾವಾಣಿ ವಾರ್ತೆ
Published 16 ಜುಲೈ 2013, 5:56 IST
Last Updated 16 ಜುಲೈ 2013, 5:56 IST

ಹಗರಿಬೊಮ್ಮನಹಳ್ಳಿ: ಸಮುದಾಯದಲ್ಲಿ ವೈಚಾರಿಕ ಪ್ರಜ್ಞೆ ಬೆಳೆಸುವ ನಿಟ್ಟಿನಲ್ಲಿ ಲೇಖಕರು ಚಿಂತನೆ ಮಾಡುವ ಅಗತ್ಯವಿದೆ. ಅನಗತ್ಯವಾಗಿ ಮೂಢನಂಬಿಕೆ ಪ್ರಚೋದಿಸುವ, ದೇವರ ಆಸ್ತಿತ್ವ ಬಲಪಡಿಸುವಂತಹ ಲೇಖಕರ ಅಗತ್ಯವಿಲ್ಲ ಎಂದು ಸಾಹಿತಿ ಹುರಕಡ್ಲಿ ಶಿವಕುಮಾರ ಪ್ರತಿಪಾದಿಸಿದರು.

ಪಟ್ಟಣದ ರಾಮನಗರದ ಯುವಕರ ಸಂಘದಲ್ಲಿ ನಮ್ಮೂರ ಬರಹಗಾರರ ಬಳಗ ಹಮ್ಮಿಕೊಂಡಿದ್ದ ಓಂ ಪ್ರಕಾಶ್ ಅವರ ಎರಡು ಕೃತಿಗಳ ಬಿಡುಗಡೆ ಸಮಾರಂಭದಲ್ಲಿ ಅವರು ಮಾತನಾಡಿದರು.

ಕಿರಿಯ ಲೇಖಕರ ಬರವಣಿಗೆಯ ವಸ್ತು, ಭಾಷೆ ಮತ್ತು ಸೂಕ್ಷ್ಮತೆಗಳ ಮೇಲೆ ಹಿರಿಯ ಲೇಖಕರ ಪ್ರಭಾವವಿರುತ್ತದೆ. ಸಾಧ್ಯವಾದಷ್ಟು ಅಧ್ಯಯನ ನಡೆಸಿ ಹೊಸ ಪ್ರಯೋಗಗಳಿಗೆ ಕಿರಿಯ ಲೇಖಕರು ಮನಸ್ಸನ್ನು ತೆರೆಯಬೇಕು. ಇಲ್ಲದಿದ್ದರೆ ಅವರ ಬರಹಗಳು ಓದುಗರೊಂದಿಗೆ ನಡೆಸುವ ಪೊಳ್ಳು ಸಂವಾದವಾಗುತ್ತದೆ ಎಂದು ಅಭಿಪ್ರಾಯಪಟ್ಟರು.

ಓಂಪ್ರಕಾಶ್ ಅವರ ಕಥಾ ಸಂಕಲನ `ಜಂಬಣ್ಣ ಮತ್ತು ಬನ್ನಿಮರ' ಮತ್ತು `ಅಡ್ಡಂಗಡಿ ಕೊಟ್ರಪ್ಪನವರ ಜೀವನ ಚರಿತ್ರೆ' ಕೃತಿಗಳನ್ನು ಸಾಹಿತಿ ಬಾಳಾಸಾಹೇಬ ಲೋಕಾಪುರ ಬಿಡುಗಡೆ ಮಾಡಿದರು.

ಸಾಹಿತಿ ಮೇಟಿ ಕೊಟ್ರಪ್ಪ, ಸಾಹಿತ್ಯಾನಂದ ಅಡ್ಡಂಗಡಿ ಕೊಟ್ರಪ್ಪ ಅವರನ್ನು ಕುರಿತು ಮಾತನಾಡಿದರು. ಶಿಕ್ಷಕ ಜಿ.ಎಸ್. ಮಂಜುನಾಥ್ ಹಾಸ್ಯ ಕಾರ್ಯಕ್ರಮ ಪ್ರಸ್ತುತ ಪಡಿಸಿದರು. ಶಿಕ್ಷಕ ಶಿವಾನಂದ ಶಿಶುವಿನಹಳ್ಳಿ ಅಧ್ಯಕ್ಷತೆ ವಹಿಸಿದ್ದರು. ನಾಣ್ಯಾಪುರ ಹನಮಂತ ಶೆಟ್ರು, ಎಚ್.ಎಂ.ಗುರುಶಿದ್ದಯ್ಯ, ಎಸ್.ಸಿ. ಪರ್ವತಪ್ಪ, ಎ.ಆರ್. ಪಂಪಣ್ಣ, ಜಗನ್ನಾಥ್, ಜಯಶಂಕರಪ್ರಸಾದ, ಲೇಖಕ ಎ. ಚಿದಾನಂದಗೌಡ, ಉಪ್ಪಾರ ಬಸಪ್ಪ ಹಾಗೂ ಟಿ.ಶೇಕ್ಷಾವಲಿ ಉಪಸ್ಥಿತರಿದ್ದರು.

ಸಂತೋಷಿಮಾ ಶಿಶುವಿನಹಳ್ಳಿ ಪ್ರಾರ್ಥಿಸಿದರು. ಪರಮೇಶ್ವರಯ್ಯ ಸೊಪ್ಪಿಮಠ ಸ್ವಾಗತಿಸಿದರು. ಅಂಬಿಗರ ಜಗದಂಬ, ಯಶೋಧ ಚಕ್ರಸಾಲಿ ನಿರೂಪಿಸಿದರು. ಬಿ. ಮೌನೇಶ್ ಗದ್ದಿಕೇರಿ ವಂದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.