ADVERTISEMENT

ಶಂಕ್ರಯ್ಯಗೆ ಉತ್ತಮ ಶಿಕ್ಷಕ ಪ್ರಶಸ್ತಿ

ಎಂ.ಪಿ.ಎಂ.ಶಿವಪ್ರಕಾಶಸ್ವಾಮಿ
Published 11 ಸೆಪ್ಟೆಂಬರ್ 2011, 7:10 IST
Last Updated 11 ಸೆಪ್ಟೆಂಬರ್ 2011, 7:10 IST

ಹೂವಿನಹಡಗಲಿ ತಾಲ್ಲೂಕಿನ ಮೀರಾಕೊರ‌್ನಹಳ್ಳಿಯ ಶರಣಬಸವೇಶ್ವರ ಸರ್ಕಾರಿ ಪ್ರೌಢಶಾಲೆ ಮುಖ್ಯ ಉಪಾಧ್ಯಾಯ ತೊ.ಮ. ಶಂಕ್ರಯ್ಯ ಪ್ರಸಕ್ತ ಸಾಲಿನ  ರಾಜ್ಯ ಮಟ್ಟದ  ಉತ್ತಮ ಶಿಕ್ಷಕ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ.

ಹುಬ್ಬಳ್ಳಿಯಲ್ಲಿ ಈಚೆಗೆ ಜರುಗಿದ ರಾಜ್ಯ ಮಟ್ಟದ ಶಿಕ್ಷಕರ ದಿನಾಚರಣೆ ಕಾರ್ಯಕ್ರಮದಲ್ಲಿ ಶಂಕ್ರಯ್ಯನವರಿಗೆ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ವಿಶ್ವೇಶ್ವರ ಹೆಗಡೆ ಕಾಗೇರಿ  ಪ್ರಶಸ್ತಿ ನೀಡಿ ಸನ್ಮಾನಿಸಿದರು.

ಕೊಂಡಜ್ಜಿ ಹಿರಿಯ ಪ್ರಾಥಮಿಕ ಶಾಲೆ, ಮಾಗಳ ಸರ್ಕಾರಿ ಪ್ರೌಢಶಾಲೆ, ಸೊಪ್ಪಿನ ಕಾಳಮ್ಮ ಬಾಲಕಿಯರ ಸ.ಪ.ಪೂ. ಕಾಲೇಜು ಹಾಗೂ ಮಿರಾ ಕೊರ‌್ನಹಳ್ಳಿ ಸರ್ಕಾರಿ ಪ್ರೌಢಶಾಲೆಯಲ್ಲಿ ಗುಣಾತ್ಮಕ ಶಿಕ್ಷಣಕ್ಕೆ ಹೆಚ್ಚು ಒತ್ತು ನೀಡುವುದರ ಜೊತೆಗೆ ಶಾಲೆಯ ಅನೇಕ ಸಮಸ್ಯೆಗಳನ್ನು ಬಗೆಹರಿಸಿ ಅಭಿವೃದ್ಧಿ ಕಾರ್ಯ ಕೈಗೊಂಡು ಹೆಸರುಗಳಿಸಿದ್ದಾರೆ.

ತಾಲ್ಲೂಕಿನ ಹಿರೇಹಡಗಲಿ ಗ್ರಾಮದ ತೋಟದ್ದೆೀವರ ಮಠದ ಸುಲೋಚನಮ್ಮ ಕೊಟ್ರಯ್ಯನವರ ಪುತ್ರರಾಗಿ ಜನಿಸಿದ ಶಂಕ್ರಯ್ಯನವರು ಪ್ರಾಥಮಿಕ ಹಾಗೂ ಪ್ರೌಢ  ಶಿಕ್ಷಣವನ್ನು ಹಿರೇಹಡಗಲಿಯಲ್ಲಿ, ಹಡಗಲಿಯಲ್ಲಿ ಪದವಿ ಹಾಗೂ ಹರಪನಹಳ್ಳಿಯಲ್ಲಿ ಬಿ.ಇಡಿ. ಪದವಿ ಪಡೆದು 1989ರಲ್ಲಿ ಶಿಕ್ಷಕ ವೃತ್ತಿಗೆ ಸೇರ್ಪಡೆಯಾದರು.

ಕನ್ನಡ ಸಾಹಿತ್ಯ ಪರಿಷತ್‌ನ ತಾಲ್ಲೂಕು ಅಧ್ಯಕ್ಷರಾಗಿದ್ದ ಶಂಕ್ರಯ್ಯ, 1999ರಲ್ಲಿ  ಮಾಜಿ ಉಪಮುಖ್ಯಮಂತ್ರಿ ದಿವಂಗತ ಎಂ.ಪಿ.ಪ್ರಕಾಶ್‌ರ ಅಧ್ಯಕ್ಷತೆ ಯಲ್ಲಿ 11ನೇ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನವನ್ನು ಆಯೋಜಿಸಿದ್ದರು.

ಬಾಗಲಕೋಟೆಯ ಮುಳುಗಡೆ ಹಾಗೂ ಕೃಷ್ಣಾ ಮೇಲ್ದಂಡೆ ಯೋಜನೆ ಕುರಿತಾದ ಗೀತ ನಾಟಕ, ಮುಳುಗು ಕೋಟೆ, ಸಂಪಿಗೆ ಕೋಲ್‌ಸಂಪಿಗೆ, ಪರಿಸರ ನಾಟಕ, ಹೂ ಬಿಸಿಲು ಎಂಬ ಕವನ ಸಂಕಲನ ಬಿಡುಗಡೆ ಮಾಡಿ ತಮ್ಮ ಛಾಪನ್ನು ಮೂಡಿಸಿದ್ದಾರೆ.

ಅನೇಕ ಸಂಘಟನೆ ಜೊತೆಗೆ ಗುರುತಿಸಿ ಕೊಂಡು ಸೇವೆ ಸಲ್ಲಿಸುತ್ತಿರುವ ಇವರನ್ನು ಶಿಕ್ಷಕ ಬಳಗ, ಗ್ರಾಮಸ್ಥರು ಮತ್ತು ಶಿಕ್ಷಣ ಪ್ರೇಮಿಗಳು ಅಭಿನಂದಿಸಿದ್ದಾರೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.