ಸಂಡೂರು: ‘ಯೇಸು ಕ್ರಿಸ್ತರು ಜಗತ್ತಿಗೆ ಶಾಂತಿ, ಪ್ರೀತಿ ಸಂದೇಶ ಸಾರಿದರು’ ಎಂದು ಕ್ರೈಸ್ತ ಜ್ಯೋತಿ ಚರ್ಚ್ನ ಫಾದರ್ ಫಿಲಿಪ್ ಹೇಳಿದರು. ಪಟ್ಟಣದ ಕೃಪಾನಿಲಯ ಶಾಲೆಯಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ಕ್ರಿಸ್ಮಸ್ ಆಚರಣೆಯಲ್ಲಿ ಮಾತನಾಡಿದರು.
‘ದೇವನೊಬ್ಬನೆ, ನಾವೆಲ್ಲ ದೇವರ ಮಕ್ಕಳು ಎಂಬುದು ಅವರ ಸ್ಪಷ್ಟ ನಿಲುವಾಗಿತ್ತು. ದೇವರ ಮಕ್ಕಳಾದ ನಾವು ಪರಸ್ಪರ ಪ್ರೀತಿ, ವಿಶ್ವಾಸ, ಸಹಕಾರದಿಂದ ಜೀವನ ನಡೆಸಬೇಕು. ಆಗ ಮಾತ್ರ ಸಾರ್ಥಕ ಜೀವನ ಹೊಂದಬಹುದು’ ಎಂದರು.
ವಕೀಲ ನಾಗರಾಜ ಗುಡೆಕೋಟೆ ಮಾತನಾಡಿ, ಶಿಕ್ಷಣ ಮತ್ತು ಆರೋಗ್ಯ ಕ್ಷೇತ್ರದಲ್ಲಿ ಕ್ರೈಸ್ತ ಮಿಷನರಿಗಳ ಸೇವೆ ಅಗಾಧವಾಗಿದೆ. ವಿದ್ಯಾರ್ಥಿಗಳು ಗುರಿ ಇಟ್ಟುಕೊಂಡು ಸಾಧನೆ ಶಿಖರ ಏರಬೇಕು’ ಎಂದರು.
ಕಳೆದ ವರ್ಷದಲ್ಲಿ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಹೆಚ್ಚಿನ ಅಂಕ ಗಳಿಸಿದ ವಿದ್ಯಾರ್ಥಿನಿ ಸಹನಾ ರಾಯ್ಕರ್ ಅವರನ್ನು ಗೌರವಿಸಲಾಯಿತು. ಬೆಂಗಳೂರಿನಲ್ಲಿ ನಡೆದ ಕರಾಟೆ ಸ್ಪರ್ಧೆಯಲ್ಲಿ ವಿಜೇತರಾದವರಿಗೆ ಗಣ್ಯರು ಬಹುಮಾನಗಳನ್ನು ವಿತರಿಸಿದರು.
ಸಂಸ್ಥೆಯ ಪ್ರಾವಿನ್ಸಿಯಲ್ ಕೌನ್ಸಿಲರ್ ಆದ ಸಿಸ್ಟರ್ ಜೋಸಿಟಾ ಕಾರ್ಯಕ್ರಮ ಉದ್ಘಾಟಿಸಿದರು. ಸಿಸ್ಟರ್ ಮೇರಿ ಕ್ರಿಸ್ಟಿನಾ ಬೈಬಲ್ ಪಠಣ ಮಾಡಿದರು. ಮುಖ್ಯಶಿಕ್ಷಕಿ ಸಿಸ್ಟರ್ ಜೆನ್ನಿಫರ್, ಮುಖಂಡ ಮಾರುತಿರಾವ್ ಶಿಂಧೆ, ಸಿಸ್ಟರ್ ಡಾ. ನಿವೇದಿತಾ, ಸಿಸ್ಟರ್ ಆರೋಗ್ಯ ಮೇರಿ, ಸಿಸ್ಟರ್ ಬೆರ್ನಾ, ಸಿಸ್ಟರ್ ಲೂಸಿ ಉಪಸ್ಥಿತರಿದ್ದರು. ವಿದ್ಯಾರ್ಥಿಗಳ ಸಾಂಸ್ಕೃತಿಕ, ಕರಾಟೆ ಪ್ರದರ್ಶನಕ್ಕೆ ಪ್ರೇಕ್ಷಕರ ಮನಸೂರೆಗೊಂಡರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.