ADVERTISEMENT

ಶಾಲೆಗಳಲ್ಲಿ ಕೊಳಲಿನ ಕಲರವ...!

​ಪ್ರಜಾವಾಣಿ ವಾರ್ತೆ
Published 18 ಡಿಸೆಂಬರ್ 2013, 5:33 IST
Last Updated 18 ಡಿಸೆಂಬರ್ 2013, 5:33 IST

ಬಳ್ಳಾರಿ: ‘ಸಂಗೀತದಿಂದ ಮಾನಸಿಕ ಒತ್ತಡ ನಿವಾರಣೆ ಸಾಧ್ಯ’ ಎಂಬುದನ್ನು ಪ್ರಚುರಪಡಿಸುವ ನಿಟ್ಟಿನಲ್ಲಿ, ಖ್ಯಾತ ಕೊಳಲು ವಾದಕ, ಹರಿಹರದ ಬಾಪು ಪದ್ಮನಾಭ ನೇತೃತ್ವದಲ್ಲಿ ಸಾಗಿರುವ ‘ವೇಣು ಯಾತ್ರೆ’ ಅಭಿಯಾನವು ಮಂಗಳವಾರ  ನಗರಕ್ಕೆ ಆಗಮಿಸಿದೆ.

ನಗರವೂ ಒಳಗೊಂಡಂತೆ ತಾಲ್ಲೂಕಿನ 12ಕ್ಕೂ ಹೆಚ್ಚು ಖಾಸಗಿ ಹಾಗೂ ಸರ್ಕಾರಿ ಪ್ರಾಥಮಿಕ ಮತ್ತು  ಪ್ರೌಢಶಾಲೆಗಳಿಗೆ ತೆರಳಲಿರುವ ಯಾತ್ರೆಯಲ್ಲಿ, ವಿದ್ಯಾರ್ಥಿಗಳು ಏಕಾಗ್ರತೆ ಕಾಯ್ದುಕೊಳ್ಳುವ ನಿಟ್ಟಿನಲ್ಲಿ ಕೊಳಲು ವಾದನ, ತಬಲಾ ವಾದನ ಸಹಕಾರಿ ಎಂಬುದರ ಕುರಿತು ವಿಶೇಷ ಉಪನ್ಯಾಸ ನೀಡುವ ಜತೆಗೆ, ಸಂವಾದವನ್ನೂ ಆಯೋಜಿಸಲಾಗಿದೆ.

ಆಧುನಿಕತೆಯ ಭರಾಟೆಯಲ್ಲಿ ತೀವ್ರಗೊಳ್ಳುತ್ತಿ­ರುವ ಸ್ಪರ್ಧೆಯಿಂದಾಗಿ,  ಸಂವೇದನಯೇ ಮರೆತು ಹೋಗುತ್ತಿದ್ದು, ಹೃದಯಕೇಂದ್ರಿತ ಸಹಜ ಜೀವನವು ಬುದ್ಧಿಕೇಂದ್ರಿತವಾಗಿ ಬದಲಾಗುತ್ತಿದೆ. ಮಕ್ಕಳ ಮನಸ್ಸಲ್ಲೂ ಸ್ಪರ್ಧೆಯ ಮನೋಭಾವ ಬಿತ್ತುತ್ತಿರುವುದರ ಪರಿಣಾಮ ಭಾವನೆ ಬತ್ತಿ ಹೋಗುತ್ತಿದೆ.

ಆದರೆ, ಜಂಜಡ ಮತ್ತು ಧಾವಂತದ ಜೀವನದಲ್ಲಿ ಸಂಗೀತದ ಸಹಾಯದೊಂದಿಗೆ ಮಾನಸಿಕ ಒತ್ತಡವನ್ನು ನಿರ್ವಹಿಸಬಹುದಾಗಿದೆ ಎಂಬುದನ್ನು ತಿಳಿಸುವ ನಿಟ್ಟಿನಲ್ಲಿ ಈ ಅಭಿಯಾನ ಆರಂಭಿಸಲಾಗಿದೆ ಎಂದು ನಗರದ ನಂದಿ ಇಂಟರ್‌ ನ್ಯಾಷನಲ್‌ ಶಾಲೆಯಲ್ಲಿ ಮಂಗಳವಾರ ಕಾರ್ಯಕ್ರಮ ಪ್ರಸ್ತುತಪಡಿಸಿದ ಬಾಪು ಪದ್ಮನಾಭ ‘ಪ್ರಜಾವಾಣಿ’ಗೆ ತಿಳಿಸಿದರು.

ಕಲೆಯ ಸಹಕಾರದಿಂದ ಭಾವವನ್ನು ಪ್ರಚೋದಿಸುವ ಮೂಲಕ ‘ಹೃದಯ ಕೇಂದ್ರ’ ವಿಕಸನವನ್ನೇ ಗುರಿಯಾಗಿಸಿಕೊಂಡು, 12ರಿಂದ 18 ವರ್ಷ ವಯಸ್ಸಿನ ವಿದ್ಯಾರ್ಥಿಗಳಲ್ಲಿ ಸಂಗೀ­ತದ ಮಹತ್ವ ಸಾರುವ ಮೂಲಕ, ಕಲೆಗೆ ಜಾತಿ, ಧರ್ಮ, ವಯಸ್ಸಿನ ಅಂತರವಿಲ್ಲ ಎಂಬುದನ್ನೂ ತಿಳಿಸಲಾಗುತ್ತದೆ. ತಬಲಾ ವಾದಕ ಪುಣೆಯ ರಮಾಕಾಂತ್‌ ರಾವುಫ್‌ ಸಹ ಯಾತ್ರೆಯಲ್ಲಿ ಭಾಗವಹಿಸಿದ್ದಾರೆ ಎಂದು ಅವರು ಹೇಳಿದರು.

ನಾದ ಮತ್ತು ಭಾವದ ಕುರಿತು ತಿಳಿಸುವ ಮೂಲಕ ವಿದ್ಯಾರ್ಥಿಗಳೊಂದಿಗೆ ಮುಕ್ತ ಸಂವಾದವನ್ನೂ ಏರ್ಪಡಿಸಲಾಗುತ್ತಿದೆ. ಮಕ್ಕಳ ಮನೋ ವಿಕಾಸಕ್ಕೆ ಸಹಕಾರಿಯಾಗಿರುವ ಸಂಗೀತದತ್ತ ಪಾಲಕರನ್ನೂ ಆಕರ್ಷಿಸುವ ಅಗತ್ಯವಿದೆ. ಈ ನಿಟ್ಟಿನಲ್ಲಿ, ಕೊಳಲು ವಾದನದ ವಿವಿಧ ರಾಗಗಳ ‘ಹೀಲಿಂಗ್‌ ಮಂತ್ರಾಸ್‌– ರುದ್ರ’ ಸಿ.ಡಿ. ಹೊರತರಲಾಗಿದ್ದು, ಇದೇ 22ರಂದು ಸಂಜೆ 6.30ಕ್ಕೆ ನಗರದ ಪೋಲಾ ಪ್ಯಾರಾಡೈಸ್‌ ಹೋಟೆಲ್‌ ಸಭಾಂಗಣದಲ್ಲಿ ನಡೆಯಲಿರುವ ವೇಣುಯಾತ್ರೆಯ ಸಮಾ­ರೋಪ ಸಮಾರಂಭದಲ್ಲಿ ಬಿಡುಗಡೆ ಮಾಡಲಾ­ಗುವುದು ಎಂದು ಅವರು ವಿವರಿಸಿದರು.

ಈ ಕಾರ್ಯಕ್ರಮದಲ್ಲಿ ಭಾಗವಹಿಸಲು ಇಚ್ಛಿಸುವವರು ಸಂಘಟಕರನ್ನು ಮೊಬೈಲ್‌ ದೂರವಾಣಿ ಸಂಖ್ಯೆಗಳಾದ 9620330777, 9620116999 ಮೂಲಕ ಸಂಪರ್ಕಿಸಬಹುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.