ADVERTISEMENT

ಶಾಸಕರಿಂದ ಬೆನ್ನಿಗೆ ಚೂರಿ

​ಪ್ರಜಾವಾಣಿ ವಾರ್ತೆ
Published 22 ಅಕ್ಟೋಬರ್ 2012, 5:25 IST
Last Updated 22 ಅಕ್ಟೋಬರ್ 2012, 5:25 IST

ಸಿರುಗುಪ್ಪ: ರಾಜಕೀಯ ಕುತಂತ್ರದಿಂದ ಬೆನ್ನಿಗೆ ಚೂರಿ ಹಾಕಿದವರಿಗೆ ಮುಂದಿನ ಚುನಾವಣೆಯಲ್ಲಿ ಜನರು ತಕ್ಕ ಪಾಠ ಕಲಿಸುವರು ಎಂದು ಸಂಸದೆ ಜೆ. ಶಾಂತಾ ಸ್ಥಳೀಯ ಶಾಸಕ ಸೋಮಲಿಂಗಪ್ಪ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು.

ಇಲ್ಲಿ ಭಾನುವಾರ ಹಮ್ಮಿಕೊಂಡಿದ್ದ `ಶಾಸಕರ ಭ್ರಷ್ಟಾಚಾರ ವಿರುದ್ಧ ಹೋರಾಟ~ ಕಾರ್ಯಕ್ರಮದ ಪ್ರಯುಕ್ತ ಬಿಎಸ್‌ಆರ್ ಕಾಂಗ್ರೆಸ್ ಹಮ್ಮಿಕೊಂಡಿದ್ದ ಪ್ರತಿಭಟನಾ ರ‌್ಯಾಲಿಯಲ್ಲಿ ಪಾಲ್ಗೊಂಡು, ನಂತರ ನಡೆದ ಕಾರ್ಯಕರ್ತರ ಸಮಾವೇಶದಲ್ಲಿ ಮಾತನಾಡಿದರು.

ಶಾಸಕ ಶ್ರೀರಾಮುಲು, ಜನಾರ್ದನರೆಡ್ಡಿ ಅವರ ಆಶೀರ್ವಾದದಿಂದ ಸೋಮಲಿಂಗಪ್ಪ ಶಾಸಕರಾಗಿ, ಅಧಿಕಾರ ಅನುಭವಿಸಲು ಸಾಧ್ಯವಾಗಿದೆ. ಚುನಾವಣೆಯಲ್ಲಿ ಸ್ಪರ್ಧಿಸಲು ಟಿಕೆಟ್ ಸಿಗದೆ ಹತಾಶ ಸ್ಥಿತಿಯಲ್ಲಿದ್ದವರನ್ನು ಕರೆತಂದು ಚುನಾವಣೆಯಲ್ಲಿ ಗೆಲ್ಲುವಂತೆ ಮಾಡಿದವರನ್ನೇ ಮರೆತಿದ್ದಾರೆ. ಇದೆಲ್ಲವೂ ಕ್ಷೇತ್ರದ ಜನರಿಗೆ ಗೊತ್ತಿದೆ. ಅದಕ್ಕೆ ಮುಂದಿನ ಚುನಾವಣೆಯಲ್ಲಿ ಜನರೇ ಉತ್ತರ ಕೊಡುವರು ಎಂದು ಹೇಳಿದರು.

ಬಳ್ಳಾರಿ ಜಿಲ್ಲೆಯಲ್ಲಿ ಸಂಚರಿಸುವ ಬಿಎಸ್‌ಆರ್ ಕಾಂಗ್ರೆಸ್ ಪಕ್ಷದ ಸಂಕಲ್ಪ ಯಾತ್ರೆಯನ್ನು ಸಿರುಗುಪ್ಪದಲ್ಲಿಯೇ ಆರಂಭಿಸಲಾಗುವುದು. ಪಕ್ಷದ ವರಿಷ್ಠ ಶ್ರೀರಾಮುಲು ಯಾತ್ರೆ ಉದ್ಘಾಟಿಸುವರು ಎಂದು ತಿಳಿಸಿದರು.


ಶಾಸಕ ಸೋಮಶೇಖರ ರೆಡ್ಡಿ ಮಾತನಾಡಿ, `ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಸಿರುಗುಪ್ಪ ಕ್ಷೇತ್ರದ ಉಸ್ತುವಾರಿಯನ್ನು ತಾವೇ ಹೊತ್ತುಕೊಂಡು ಪಕ್ಷದ ಅಭ್ಯರ್ಥಿಯನ್ನು ಕಣಕ್ಕೆ ಇಳಿಸಲಾಗುವುದು. ಆಗ ಗೆಲ್ಲುವುದು ಸೋಮರೆಡ್ಡಿನಾ ಅಥವಾ ಸೋಮಲಿಂಗಪ್ಪನಾ ಎಂಬುದನ್ನು ನೋಡೋಣ~ ಎಂದು ಶಾಸಕರಿಗೆ ಸವಾಲೆಸೆದರು.

ಕಂಪ್ಲಿ ಶಾಸಕ ಸುರೇಶಬಾಬು, ಬಳ್ಳಾರಿ ಮೇಯರ್ ಇಬ್ರಾಹಿಂ, ಹಳೇಕೋಟೆ ಜಿ.ಪಂ. ಸದಸ್ಯೆ ನಾಗರತ್ನಮ್ಮ, ಡಿ. ಹನುಮಂತಪ್ಪ, ಈರಮ್ಮ ಎರ‌್ರೆಪ್ಪ, ಜಿ. ಸಿದ್ದಪ್ಪ, ತಿಮ್ಮಪ್ಪ, ಮುಲ್ಲಾಬಾಬು, ಮೃತ್ಯುಂಜಯ ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದರು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT