ADVERTISEMENT

ಸಂಗೀತ ಕ್ಷೇತ್ರಕ್ಕೆ ಗವಾಯಿಗಳ ಕೊಡುಗೆ ಅಪಾರ

​ಪ್ರಜಾವಾಣಿ ವಾರ್ತೆ
Published 3 ಅಕ್ಟೋಬರ್ 2012, 3:30 IST
Last Updated 3 ಅಕ್ಟೋಬರ್ 2012, 3:30 IST

ಮರಿಯಮ್ಮನಹಳ್ಳಿ: ಸಂಗೀತಕ್ಕೆ ಯಾವುದೇ ರೀತಿಯ ಗಡಿ, ದೇಶ, ಭಾಷೆಗಳಾಗಲಿ ಇಲ್ಲ, ಇದೊಂದು ರೀತಿಯ ಜಗದ ಭಾಷೆಯಾಗಿದೆ ಎಂಬುದು ಸಹ ಸುಳ್ಳಲ್ಲ ಎಂದು ಸಾಹಿತಿ ಡಾ.ವೆಂಕಟಗಿರಿ ದಳವಾಯಿ ಅಭಿಪ್ರಾಯಪಟ್ಟರು.

ಪಟ್ಟಣದ ಸಮುದಾಯ ಭವನದಲ್ಲಿ ಸೋಮವಾರ ಸಂಜೆ ಗೊಲ್ಲರಹಳ್ಳಿಯ ಶ್ರೀಗುರು ಪುಟ್ಟರಾಜ ಸಂಗೀತಾ ಕಲಾ ಬಳಗದ ವತಿಯಿಂದ ಹಮ್ಮಿಕೊಂಡಿದ್ದ ಪುಟ್ಟರಾಜ ಗವಾಯಿಗಳ ಪುಣ್ಯ ಸ್ಮರಣೋತ್ಸವ ಹಾಗೂ ಪುಟ್ಟರಾಜಶ್ರೀ ಪ್ರಶಸ್ತಿ ಪ್ರದಾನ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಸಂಗೀತ ಕ್ಷೇತ್ರಕ್ಕೆ ಪುಟ್ಟರಾಜ ಗವಾಯಿಗಳು ಸಲ್ಲಿಸಿದ ಕೊಡುಗೆ ಅಪಾರವಾಗಿದ್ದು, ಅವರೊಂದು ಹಾಡುವ ಮರವಿದ್ದಂತೆ. ಸಂಗೀತದ ಜತೆಗೆ ಮಾನವೀಯ ಮೌಲ್ಯಗಳನ್ನು ನೀಡಿದ್ದಾರೆ. ಸಾಧಕರೆಲ್ಲರೂ ಜಗತ್ತಿ ನಲ್ಲಿ ತಮ್ಮದೇ ಆದ ರೀತಿಯಲ್ಲಿ ದೊಡ್ಡ ಹೆಜ್ಜೆ ಗುರುತು ಮೂಡಿಸಿದ್ದಾರೆ.
 
ಅದರಂತೆ ಗವಾಯಿಗಳು ಸಹ ತಮ್ಮದೇ ಮರೆಯಾಗದ ಗುರುತನ್ನು ಸಂಗೀತ ಲೋಕಕ್ಕೆ ನೀಡಿದ್ದಾರೆ. ಜತೆಗೆ ಅಂಧರಲ್ಲಿನ ಪ್ರತಿಭೆ ಗುರುತಿಸಿ ಅವರನ್ನು ಸ್ವಾಭಿಮಾನಿಗಳನ್ನಾಗಿ ಸಮಾಜದಲ್ಲಿ ಮೂಡಿಸಿದ ಕೀರ್ತಿ ಅವರಿಗೆ ಸಲ್ಲುತ್ತದೆ. ಅವರು ನೀಡಿದ ಆದರ್ಶ, ಮೌಲ್ಯಗಳು ಎಲ್ಲರಿಗೂ ಪಾಠವಾಗಬೇಕೆಂದರು.

ಗುರುಪಾದ ದೇವರ ಮಠದ ಮಲ್ಲಿಕಾರ್ಜುನ ಸ್ವಾಮೀಜಿ ಮಾತ ನಾಡಿ, ನಮಗೆ ಸಮಾಜ ಏನು ಕೊಟ್ಟಿದೆ ಎಂಬುದಕ್ಕಿಂತ, ನಾವು ಸಮಾಜಕ್ಕೆ ಏನು ಮಾಡಬೇಕಿದೆ ಎಂಬುದನ್ನು ಅರಿತು ಕೊಳ್ಳಬೇಕಿದೆ. ಈ ನಿಟ್ಟಿನಲ್ಲಿ ಗವಾಯಿಗಳು ಧರ್ಮಕ್ಕೆ, ಸಮಾಜಕ್ಕೆ ನೀಡಿದ ಕೊಡುಗೆ ಅಪಾರವಾಗಿದೆ. ಅವರು ವ್ಯಕ್ತಿಯಾಗಿರಲಿಲ್ಲ, ದೊಡ್ಡ ಶಕ್ತಿಯಾಗಿ ಅವರು ಮೂಡಿಸಿದ ಹೆಜ್ಜೆ ಚಿರಸ್ಮರಣೀಯವಾಗಿದೆ ಎಂದರು.

ಈ ಸಂದರ್ಭದಲ್ಲಿ ಸಂಗೀತ ನಿರ್ದೇಶಕ ಡಿ.ಎಂ.ತೋಟಯ್ಯ ಸ್ವಾಮಿ ಮತ್ತು ಕೂಡ್ಲಿಗಿಯ ರಂಗ ಕಲಾವಿದೆ ದುರುಗಮ್ಮ ಅವರಿಗೆ ಪುಟ್ಟರಾಜಶ್ರೀ ಪ್ರಶಸ್ತಿ ಪ್ರದಾನ ಮಾಡಲಾಯಿತು. ಕಲಾಬಳಗದ ಅಧ್ಯಕ್ಷ ಡಾ.ಕೆ. ನಾಗರಾಜ ಅಧ್ಯಕ್ಷತೆ ವಹಿಸಿದ್ದರು.

ಸಾಲಿ ಸಿದ್ದಯ್ಯ ಸ್ವಾಮಿ, ಎಚ್. ಶ್ರೀನಿವಾಸ ರಾವ್, ದುರುಗಮ್ಮ, ತೋಟಯ್ಯ ಸ್ವಾಮಿ ಮಾತನಾಡಿದರು. ಪಿ. ಓಬಪ್ಪ ಉಪಸ್ಥಿತರಿದ್ದರು. ನಂತರ ಸಂಗೀತ ಕಲಾವಿದರಿಂದ ನಾದ ಸಂಪದ ಸಂಗೀತ ಕಾರ್ಯಕ್ರಮ ಜರುಗಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.