ಬಳ್ಳಾರಿ : ಈದ್-ಮಿಲಾದ್ ನಿಮಿತ್ತ ಇಲ್ಲಿನ ಕೌಲ್ಬಜಾರ್ ದಿವಾನ್ ಮಸ್ತಾನ್ ದರ್ಗಾದಿಂದ ಹಾಗೂ ಜಾನಿಬಾಬಾ ದರ್ಗಾದಿಂದ ಶನಿವಾರ ಮುಸ್ಲಿಮರು ಭವ್ಯ ಮೆರವಣಿಗೆ ನಡೆಸಿದರು.
ಸಾವಿರಾರು ಮುಸ್ಲಿಂ ಸಮುದಾಯದವರು ಎರಡೂ ದರ್ಗಾಗಳ ಮುಂದೆ ಜಮಾಯಿಸಿ ಅಲ್ಲಾನ ಪ್ರಾರ್ಥನೆ ಮಾಡಿದರು.
ಕೌಲ್ಬಜಾರ್ ಪ್ರಮುಖ ರಸ್ತೆಗಳಲ್ಲಿ ದರ್ಗಾ, ಮಸೀದಿ ಸ್ತಬ್ದ ಚಿತ್ರಗಳ ಮೆರವಣಿಗೆ ಮಾಡಿದರು. ಬಳಿಕ ದಿವಾನ್ ಮಸ್ತಾನ್ ದರ್ಗಾ ಬಳಿ ಸಾರ್ವಜನಿಕರಿಗೆ ಸಮೋಸ ಮತ್ತು ಹಾಲಿನ ಸಿಹಿ ಖಾದ್ಯವನ್ನು ವಿತರಿಸಿದರು.
ಜಾನಿಬಾಬಾ ದರ್ಗಾದಿಂದ ಇಂದಿರಾಗಾಂಧಿ ವೃತ್ತ, ಗಡಿಗಿ ಚೆನ್ನಪ್ಪ, ಬೆಂಗಳೂರು ರಸ್ತೆ, ಬ್ರೂಸ್ಪೇಟೆ ಪೊಲೀಸ್ ಠಾಣೆ, ತೇರುಬೀದಿ, ಜೈನ್ ಮಾರುಕಟ್ಟೆ, ಎಚ್.ಆರ್.ಗವಿಯಪ್ಪ ವೃತ್ತ, ಹೊಸ ಬಸ್ ನಿಲ್ದಾಣ ರಸ್ತೆ, ಜೋಳದರಾಶಿ ದೊಡ್ಡನಗೌಡ ರಂಗಮಂದಿರ ರಸ್ತೆ, ಮಹಮ್ಮದೀಯ ಶಾಲೆಯ ಮುಂಭಾಗದ ರಸ್ತೆಯ ಮುಖೇನ ಕೌಲ್ ಬಜಾರ್ ಮೊದಲನೇ ಗೇಟ್ನವರೆಗೆ ನೂರಾರು ಮುಸ್ಲಿಮರು ಮೆರವಣಿಗೆ ಕೈಗೊಂಡರು.
ಜಿಲ್ಲಾ ಕಾಂಗ್ರೆಸ್ ಸಮಿತಿ (ನಗರ) ಅಧ್ಯಕ್ಷ ಜಿ.ಎಸ್.ಮಹಮ್ಮದ್ ರಫೀಕ್, ಮುಖಂಡರಾದ ನಾಸೀರ್ ಹುಸೇನ್ ಖಾನ್, ಹುಮಾಯುನ್ ಖಾನ್, ನೂರ್ಬಾಷಾ, ಅಯಾಜ್, ರಿಜ್ವಾನ್ ಸೇರಿದಂತೆ ಇತರೆ ಮುಖಂಡರು ಮೆರವಣಿಗೆಯಲ್ಲಿ ಭಾಗವಹಿಸಿ ಹಬ್ಬದ ಶುಭಾಶಯವನ್ನು ಪರಸ್ಪರ ವಿನಿಮಯ ಮಾಡಿಕೊಂಡರು.
ಡಿವೈಎಸ್ಪಿ ಉಮೇಶ ಈಶ್ವರ ನಾಯಕ, ಸಿಪಿಐಗಳಾದ ಕೆ.ಪ್ರಸಾದಗೋಖಲೆ, ಗಾಯತ್ರಿ, ಪಿಎಸ್ಐಗಳಾದ ಎಂ.ವಸಂತ ಕುಮಾರ, ವಿಜಯಲಕ್ಷ್ಮಿ, ಶ್ರೀಶೈಲಕುಮಾರ ನೇತೃತ್ವದಲ್ಲಿ ಭವ್ಯ ಮೆರವಣಿಗೆಗೆ ಸೂಕ್ತ ಭದ್ರತೆ ಕಲ್ಪಿಸಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.