ADVERTISEMENT

ಸಡಗರದ ಆಂಜನೇಯ ರಥೋತ್ಸವ

​ಪ್ರಜಾವಾಣಿ ವಾರ್ತೆ
Published 6 ಏಪ್ರಿಲ್ 2011, 9:15 IST
Last Updated 6 ಏಪ್ರಿಲ್ 2011, 9:15 IST
ಸಡಗರದ ಆಂಜನೇಯ  ರಥೋತ್ಸವ
ಸಡಗರದ ಆಂಜನೇಯ ರಥೋತ್ಸವ   

ಮರಿಯಮ್ಮನಹಳ್ಳಿ: ಪಟ್ಟಣದ ಸಮೀಪದ 114-ಡಣಾಪುರ ಗ್ರಾಮದ ಶ್ರೀಆಂಜನೇಯ ಸ್ವಾಮಿಯ ರಥೋತ್ಸವ ಸೋಮವಾರ ಸಂಜೆ ಸಡಗರ ಸಂಭ್ರಮದೊಂದಿಗೆ ಜರುಗಿತು.

 ಈ ಹಿಂದೆ ಕಾರಣಾಂತರಗಳಿಂದ ನಿಂತು ಹೋಗಿದ್ದ ರಥೊತ್ಸವ, ಸುಮಾರು 15ವರ್ಷಗಳ ನಂತರ ಇದೇ ಪ್ರಥಮ ಬಾರಿ ಯುಗಾದಿ ಹಬ್ಬದಂದು ಜರುಗಿತು. ಸುಮಾರು ಐದು ಲಕ್ಷಕ್ಕಿಂತ ಅಧಿಕ ವೆಚ್ಚದಲ್ಲಿ ಹೊಸಪೇಟೆ ತಾ.ಪಂ.ಮಾಜಿ ಉಪಾಧ್ಯಕ್ಷೆ ವ್ಯಾಸನಕೆರೆ ಶ್ರಿನಿವಾಸ ಮತ್ತು ಅವರ ಕುಟುಂಬ ವರ್ಗದವರು ನೂತನ ರಥವನ್ನು ನಿರ್ಮಿಸಿಕೊಟ್ಟಿದ್ದಾರೆ.

 ರಥೋತ್ಸವದ ಅಂಗವಾಗಿ ಆಂಜನೇಯ ಸ್ವಾಮಿಗೆ ವಿಶೇಷ ಪೂಜೆ ಪುನಸ್ಕಾರಗಳನ್ನು, ಧಾರ್ಮಿಕ ವಿಧಿ-ವಿಧಾನಗಳನ್ನು ನೆರವೇರಿಸಲಾಯಿತು. ದೇವಸ್ಥಾನಕ್ಕೆ ಬೆಳಿಗ್ಗೆಯಿಂದಲೇ ನೂರಾರು ಭಕ್ತರು ಭೇಟಿ ನೀಡಿ ಆಂಜನೇಯ ಸ್ವಾಮಿಯ ದರ್ಶನ ಪಡೆದರು.

 ಸಂಜೆ 5ಕ್ಕೆ ಸಾವಿರಾರು ಭಕ್ತ ಸಾಮೂಹದೆದುರು ರಥೋತ್ಸವಕ್ಕೆ ವಿವಿಧ ಅಲಂಕಾರಿಕ ವಸ್ತುಗಳನ್ನು, ಚಿತ್ರಪಟಗಳಿಂದ ಹಾಗೂ ವಿವಿಧ ಬಗೆಯ ಹೂ, ಮಾವಿನ ತೋರಣದೊಂದಿಗೆ ಅಲಕೃಂತಗೊಂಡಿದ್ದ ರಥಕ್ಕೆ ಪೂಜೆ ನೆರವೇರಿಸುವದರ ಮೂಲಕ ರಥೋತ್ಸಕ್ಕೆ ಚಾಲನೆ ನೀಡಿಲಾಯಿತು. ಈ ಸಂದರ್ಭದಲ್ಲಿ ದೇವರ ಪಟವನ್ನು ಹಾರುಜು ಮಾಡಲಾಯಿತು. ನಾಣಿಕೆರೆ ನಿಂಗಮ್ಮ 58ಸಾವಿರ ರೂಪಾಯಿಗಳಿಗೆ ಹಾರಾಜಿನಲ್ಲಿ ಪಟವನ್ನು ಪಡೆದರು.

 ನಂತರ ಸ್ಥಳೀಯ ಹಾಗೂ ಸುತ್ತಮುತ್ತಲಿನಿಂದ ಬಂದಿದ್ದ ಸಾವಿರಾರು ಭಕ್ತರು ರಥೋತ್ಸದಲ್ಲಿ ಭಾಗವಹಿಸಿ, ರಥಕ್ಕೆ ಹೂ ಹಣ್ಣು ಎಸೆದು ಹರಕೆ ತೀರಿಸಿಕೊಂಡರು. ಸಾವಿರಾರು ಸಂಖ್ಯೆಯಲ್ಲಿ ಸೇರಿದ್ದ ಭಕ್ತರು ಜಯಘೋಷಗಳೊಂದಿಗೆ ರಥವನ್ನು ದೇವಸ್ಥಾನದಿಂದ ದೂರದವರೆಗೆ ಎಳೆದುಕೊಂಡು ಹೋಗಿ ನಂತರ ಸ್ವಸ್ಥಾಕ್ಕೆ ಎಳೆದು ತಂದರು. 

 ಈ ಉತ್ಸವದ ಅಂಗವಾಗಿ ಬೆಳಿಗ್ಗೆ ನೂತನ ರಥವನ್ನು ನಿರ್ಮಿಸಿಕೊಟ್ಟ ತಾ.ಪಂ.ಮಾಜಿ ಉಪಾಧ್ಯಕ್ಷೆ ವ್ಯಾಸನಕೆರೆ ಶ್ರಿನಿವಾಸ ಮತ್ತು ಅವರ ಕುಟುಂಬ ವರ್ಗದವರನ್ನು ಹಾಗೂ ಇತರೆ ಗಣ್ಯರನ್ನು ದೇವಸ್ಥಾನ ಸಮಿತಿಯಿಂದ ಸನ್ಮಾನಿಸಲಾಯಿತು. ನಂತರ ಹೋಮ ಹವನಗಳು ಜರುಗಿದವು. ಅಲ್ಲದೇ ರಥೋತ್ಸವದ ಅಂಗವಾಗಿ ಗ್ರಾಮದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿತ್ತು. ಯಾವುದೇ ಅಹಿತಕರ ಘಟನೆಗಳು ಜರುಗದಂತೆ ಪಟ್ಟಣದ ಪಿಎಸ್‌ಐ ಆರ್.ಎಲ್.ಮೋತಿಲಾಲ್ ಮತ್ತು ಸಿಬ್ಬಂದಿ ಸೂಕ್ತ ಬಿಗಿ ಬಂದೋಬಸ್ತ್ ಏರ್ಪಡಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.