ADVERTISEMENT

ಸದಾಶಿವ ಆಯೋಗ ವರದಿ ಜಾರಿಗೆ ಆಗ್ರಹ

​ಪ್ರಜಾವಾಣಿ ವಾರ್ತೆ
Published 18 ಸೆಪ್ಟೆಂಬರ್ 2013, 9:31 IST
Last Updated 18 ಸೆಪ್ಟೆಂಬರ್ 2013, 9:31 IST

ಕೂಡ್ಲಿಗಿ: ನ್ಯಾಯಮೂರ್ತಿ ಎ.ಜೆ. ಸದಾಶಿವ ಆಯೋಗದ ವರದಿಯನ್ನು ಕೇಂದ್ರಕ್ಕೆ ಶಿಫಾರಸ್ಸು ಮಾಡಬೇಕು, ವರದಿಯನ್ನು ಯತವತ್ತಾಗಿ ಜಾರಿಗೆ ತರಬೇಕು ಎಂಬುದು ಸೇರಿದಂತೆ ಹಲವಾರು ಬೇಡಿಕೆಗಳ ಈಡೇರಿಸುವಂತೆ ಒತ್ತಾಯಿಸಿ ಮಾದಿಗೆ ದಂಡೋರ(ಮಾದಿಗ ಮೀಸಲಾತಿ ಹೋರಾಟ ಸಮಿತಿ) ಸೋಮವಾರ ಪಟ್ಟಣದ ತಹಶೀಲ್ದಾರ್‌ ಕಚೇರಿ ಅವರಣದಲ್ಲಿ ಧರಣಿ ಸತ್ಯಾಗ್ರಹ ನಡೆಸಿ ತಹಶೀಲ್ಡಾರ್‌ಗೆ ಮನವಿ ಪತ್ರ ಸಲ್ಲಿಸಿದರು.

ರಾಜ್ಯದ ಮುಖ್ಯಮಂತ್ರಿಗಳಿಗೆ ಬರೆದ ಮನವಿ ಪತ್ರವನ್ನು ತಹಶೀಲ್ದಾರರಿಗೆ ನೀಡಿ, ಬಿಜೆಪಿ ಸರ್ಕಾರದ ಅವಧಿಯಲ್ಲಿ ಬೆಳಗಾವಿ ಅಧಿವೇಶನದಲ್ಲಿ  ನ್ಯಾಯಮೂರ್ತಿ ಸದಾಶಿವ ಆಯೋಗದ ವರದಿಯ ಬಗ್ಗೆ ಧ್ವನಿ ಎತ್ತಿದ್ದ ಸಿದ್ದರಾಮಯ್ಯನವರೇ ಈಗ ರಾಜ್ಯದ ಮುಖ್ಯ ಮಂತ್ರಿಯಾಗಿದ್ದು, ಕೇಂದ್ರದಲ್ಲಿಯೂ ತಮ್ಮದೇ ಪಕ್ಷದ ಸರ್ಕಾರವಿದ್ದು ವರದಿಯನ್ನು ಜಾರಿಗೆ ತರುವ ಮೂಲಕ ಮಾದಿಗ ಸಮಾಜಕ್ಕೆ ನ್ಯಾಯ ಒದಗಿಸಿಕೊಡಬೇಕೇಂದು ಪ್ರತಿಭಟನಾಕಾರರು ಒತಾ್ತಯಿಸಿದರು.

ಪರಿಶಿಷ್ಟ ಜಾತಿಯಲ್ಲಿನ ಸ್ಪೃಶ್ಯರು ಮೀಸಲಾತಿಯಲ್ಲಿ ಹೆಚ್ಚಿನ ಪಾಲನ್ನು ಪಡೆಯುತಿದ್ದರಿಂದ ಪರಿಶಿಷ್ಟ ಜಾತಿಯಲ್ಲಿ ಹೆಚ್ಚು ಜನ ಸಂಖ್ಯೆ ಹೊಂದಿರುವ ಮಾದಿಗ ಸಮಾಜಕ್ಕೆ ಅನ್ಯಾವಾಗುತ್ತಿರುವುದನ್ನು ತಡೆಯಲು ಸರ್ಕಾರ ತಕ್ಷಣ ಮೀಸಲಾತಿ ವರ್ಗಿಕರಣಕ್ಕೆ ಮುಂದಾಗಬೇಕು ಎಂದು ಒತ್ತಾಯಿಸಿದ್ದಾರೆ.

೧೦,೪೫೦ ಜನ ಗ್ರಾಮ ಸಹಾಯಕರನ್ನು ಡಿ ಗ್ರೂಪ್ ನೌಕರರೆಂದು ಪರಿಗಣಿಸಬೇಕು, ಪೌರ ಕಾರ್ಮಿಕರ ಗುತ್ತಿಗೆ ಪದ್ಧತಿಯನ್ನು ರದ್ದು ಮಾಡಿ ಅಂತಹ ಕಾರ್ಮಿಕರನ್ನು ಕಾಯಂಗೊಳಿಸಬೇಕು, ಎಲ್ಲಾ ಇಲಾಖೆಗಳಲ್ಲಿನ ದಿನಗೂಲಿ ಕರ್ಮಚಾರಿ ಮತ್ತು ಅಂಶಕಾಲಿಕ ನೌಕರರನ್ನು ಕಾಯಂ­ಗೊಳಿಸಬೇಕು, ಚರ್ಮ ಕುಶಲಕರ್ಮಿ ಕೆಲಸಗಾರರಿಗೆ ವಿಶೇಷ ಸಾಲ ಸೌಲಭ್ಯವನ್ನು ಒದಗಿಸಬೇಕು, ಕೂಡ್ಲಿಗಿ ತಾಲ್ಲೂಕಿನಲ್ಲಿ ಮೂಲ ಸೌಕರ್ಯಗಳನ್ನು ಕಲ್ಪಿಸಬೇಕು ಎಂದು ಧರಣಿ ನಿರತರು ಒತಾ್ತಯಿಸಿದರು.

ಮಾದಿಗ ದಂಡೋರ ಸಮಿತಿ ತಾಲ್ಲೂಕು ಘಟಕದ ಅಧ್ಯಕ್ಷ ಸಾಲುಮನಿ ರಾಘವೇಂದ್ರ, ಗೌರವಧ್ಯಕ್ಷ ಜಿ.ಸಿಡ್ಲಪ್ಪ, ಜಿಲ್ಲಾ ಘಟಕದ ಹೆಚ್.ಸಿ.ದುರುಗಪ್ಪ,ಜಿಲ್ಲಾ ಕಾರ್ಯದರ್ಶಿ ಬಿ.ಹನುಮೇಶ್,ಜಿ.ದಂಡೆಪ್ಪ, ಕೆ.ತಿಪ್ಪೇಸ್ವಾಮಿ, ಹೆಚ್.ದುರುಗೇಶ್, ಹೆಚ್.ತಿಮ್ಮರೆಡ್ಡಿ, ಕೆ.ಮಹೇಶ್, ಸಿದ್ದೇಶ್, ಬಿ.ಮಹೇಶ್, ಕೆ.ಮೂಗಪ್ಪ, ಯು.ಬಸವರಾಜ,ಟಿ.ಮರಿಸ್ವಾಮಿ, ಹೆಚ್.ವೆಂಕಟೇಶ್, ಎಸ್.ಜಿ.ನಾಗರಾಜ, ಅಂಜಿನಪ್ಪ, ಟಿ.ಸಿದ್ದೇಶ್ ಇತರರು ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.