ಕಂಪ್ಲಿ: ‘ಇಂದಿನ ಬದಲಾದ ಹವಾಗುಣ ಹಾಗೂ ಮಳೆಯ ವೈಪರೀತ್ಯ ಮುಂತಾದ ಕಾರಣಗಳಿಂದಾಗಿ ರೈತರು ತಮಗಿರುವ ಕಡಿಮೆ ಜಮೀನಿನಲ್ಲಿ ಸಮಗ್ರ ಕೃಷಿ ಪದ್ಧತಿ ಅಳವಡಿಸಿಕೊಳ್ಳುವಂತೆ’ ಮುನಿರಾಬಾದ್ ತೋಟಗಾರಿಕೆ ವಿದ್ಯಾಲಯದ ಸಹಾಯಕ ಪ್ರಾಧ್ಯಾಪಕ ಡಾ. ಇಟಗಿ ಪ್ರಭಾಕರ ರೈತರಿಗೆ ಸಲಹೆ ನೀಡಿದರು.
ಇಲ್ಲಿಗೆ ಸಮೀಪದ ದೇವಸಮುದ್ರ ಗ್ರಾಮಕ್ಕೆ ಗ್ರಾಮೀಣ ತೋಟಗಾರಿಕೆ ಕಾರ್ಯಾನುಭವ ನಿಮಿತ್ತ ಆಗಮಿಸಿರುವ ಬಿ.ಎಸ್.ಸಿ ಅಂತಿಮ ತೋಟಗಾರಿಕೆ ವಿದ್ಯಾರ್ಥಿಗಳು ಮೆಣಸಿನಕಾಯಿ, ಹತ್ತಿ ಹಾಗೂ ಭತ್ತ ಬೆಳೆದ -ಗದ್ದೆಗಳಿಗೆ ಬುಧವಾರ ಭೇಟಿ ನೀಡಿದ ಸಂದರ್ಭದಲ್ಲಿ ಮಾತನಾಡಿ, ‘ಸಮಗ್ರ ಕೃಷಿ ಪದ್ಧತಿ ರೈತರಿಗೆ ವರದಾನ’ ಎಂದು ಹೇಳಿದರು.
ವಿದ್ಯಾರ್ಥಿಗಳು ರೈತರ ತೋಟ, ಗದ್ದೆಗಳಿಗೆ ಭೇಟಿ ನೀಡಿ ಮಣ್ಣಿನ ಗುಣಧರ್ಮ, ತೇವಾಂಶ, ನೀರಾವರಿ ಪದ್ಧತಿ, ಕೀಟಭಾದೆ, ಮಾರಾಟ ವ್ಯವಸ್ಥೆ, ಆರ್ಥಿಕ ಸ್ಥಿತಿ, ಲಾಭಾಂಶ, ಪ್ರಾಯೋಗಿಕವಾಗಿ ಅರಿತುಕೊಳ್ಳುವುದರ ಜೊತೆಗೆ ಇಲ್ಲಿಯವರೆಗೆ ಬೆಳೆದ ಬೆಳೆಗಳ ಕುರಿತು ರೈತರೊಂದಿಗೆ ಸಂವಾದ ನಡೆಸಿದರು. ಕೀಟಶಾಸ್ತ್ರ ವಿಭಾಗದ ಪ್ರಾಧ್ಯಾಪಕ ವೆಂಕಟೇಶ ಹೊಸಮನಿ ಉಪಸ್ಥಿತರಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.