ಬಳ್ಳಾರಿ: ರೈತರು ಬೆಳೆದ ಕಬ್ಬನ್ನು ಸಮೀಪದ ಹಾಗೂ ಅನುಕೂಲವಾಗುವ ಕಾರ್ಖಾನೆಗಳಿಗೆ ಪೂರೈಸಲು ಅನುಮತಿ ನೀಡುವುದಲ್ಲದೆ, ಕಬ್ಬು ಬೆಳೆಗಾರರ ಸಮಸ್ಯೆಗಳ ನಿವಾರಣೆಗೆ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿ ಜಿಲ್ಲೆಯ ಹಗರಿಬೊಮ್ಮನಹಳ್ಳಿ ತಾಲ್ಲೂಕಿನ ರೈತರು ಗುರುವಾರ ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಿದರು.
ತಾಲ್ಲೂಕಿನ ಉಪನಾಯಕನಹಳ್ಳಿ, ನಕರಾಳು ತಾಂಡ, ಮರಬ್ಬಿಹಾಳು, ನಾರಾಯಣದೇವನ ಕೆರೆ, ವರದಾಪುರ ಮತ್ತಿತರ ಅನೇಕ ಗ್ರಾಮಗಳ ರೈತರು ಬೆಳೆದಿರುವ ಕಬ್ಬು ಬೆಳೆಯನ್ನು ಕಟಾವು ಮಾಡಿ, ತಮಗೆ ಅನುಕೂಲವಾಗುವ ಕಾರ್ಖಾನೆಗಳಿಗೆ ಸರಬರಾಜು ಮಾಡಲು ಅನುಮತಿ ನೀಡಬೇಕು ಎಂದು ಆಗ್ರಹಿಸಿದರು.
ಹೊಸಪೇಟೆ ತಾಲ್ಲೂಕು ವ್ಯಾಪ್ತಿಯಲ್ಲಿರುವ ಐಎಸ್ಆರ್ ಕಾರ್ಖಾನೆ ಸಿಬ್ಬಂದಿಯು ಹಗರಿಬೊಮ್ಮನಹಳ್ಳಿ ತಾಲ್ಲೂಕಿನ ರೈತರು ಬೇರೆಡೆ ಸರಬರಾಜು ಮಾಡುವ ಕಬ್ಬನ್ನು ಪೊಲೀರಿಗೆ ಒಪ್ಪಿಸುತ್ತಿದ್ದಾರೆ. ಆದರೆ, ಈ ಕ್ರಮ ಸರಿಯಲ್ಲ ಎಂದು ಮನವಿಯಲ್ಲಿ ತಿಳಿಸಲಾಯಿತು.
ಈ ಕುರಿತು ಕಳೆದ ವರ್ಷ ಎರಡು ಬಾರಿ ಮನವಿ ಸಲ್ಲಿಸಿದರೂ ಸಂಬಂಧಿಸಿದ ಅಧಿಕಾರಿಗಳು ಯಾವುದೇ ಕ್ರಮ ಕೈಗೊಂಡಿಲ್ಲ. ಕಾರ್ಖಾನೆಗಳಲ್ಲಿ ಅಕ್ಟೋಬರ್ ತಿಂಗಳಿಂದ ಕಬ್ಬು ಅರೆಯುವ ಕಾರ್ಯ ಆರಂಭಿಸಲಿದ್ದು, ಕಬ್ಬನ್ನು ರೈತರು ಯಾವುದೇ ಕಾರ್ಖಾನೆಗೂ ಸರಬರಾಜು ಮಾಡಲು ಅನುಮತಿ ನೀಡಬೇಕು. ಒಂದೊಮ್ಮೆ ಅನುಮತಿ ದೊರೆಯದಿದ್ದರೆ ಅಕ್ಟೋಬರ್ 15ರ ನಂತರ ಉಗ್ರ ಸ್ವರೂಪದ ಪ್ರತಿಭಟನೆ ಹಮ್ಮಿಕೊಳ್ಳಲಾಗುವುದು ಎಂದು ಅವರು ಎಚ್ಚರಿಸಿದರು.
ರೈತ ಮುಖಂಡರಾದ ಡಿ.ಶಿವಾನಂದ, ಜಿ.ಪಂ. ಸದಸ್ಯ ರೋಗಾಣಿ ಹುಲುಗಪ್ಪ, ಬಸಪ್ಪ, ಗೋಣಿಬಸಪ್ಪ, ಕೆ.ನಾಗಪ್ಪ, ಎಲ್.ಚಂದ್ರಾನಾಯ್ಕ, ಆರ್.ಸಿದ್ದಪ್ಪ, ಪಿ.ಪ್ರಭಾಕರ್, ಬಿ.ನಾಗರಾಜ್, ಎಸ್.ಪಂಪಾಪತಿ, ರಾಘವೇಂದ್ರ, ಭೀಮಪ್ಪ, ಹೇಮಣ್ಣ ಮತ್ತಿತರರು ಉಪಸ್ಥಿತರಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.