ADVERTISEMENT

ಸರ್ಕಾರದ ಸಮ್ಮತಿ ಸಾಧ್ಯತೆ: ಮಾತೆ ಮಹಾದೇವಿ

ಲಿಂಗಾಯತ ಪ್ರತ್ಯೇಕ ಧರ್ಮ ವಿಚಾರ

​ಪ್ರಜಾವಾಣಿ ವಾರ್ತೆ
Published 14 ಮಾರ್ಚ್ 2018, 6:27 IST
Last Updated 14 ಮಾರ್ಚ್ 2018, 6:27 IST
ಬಳ್ಳಾರಿಯ ಬಸವ ಮಂಟಪದಲ್ಲಿ ರಾಷ್ಟ್ರೀಯ ಬಸವ ದಳ ಮಂಗಳವಾರ ಏರ್ಪಡಿಸಿದ್ದ ತಮ್ಮ 73ನೇ ಜನ್ಮದಿನಾಚರಣೆಯನ್ನು ಕೂಡಲ ಸಂಗಮ ಬಸವಧರ್ಮ ಪೀಠದ ಅಧ್ಯಕ್ಷೆ ಮಾತೆ ಮಹಾದೇವಿ ಉದ್ಘಾಟಿಸಿದರು.
ಬಳ್ಳಾರಿಯ ಬಸವ ಮಂಟಪದಲ್ಲಿ ರಾಷ್ಟ್ರೀಯ ಬಸವ ದಳ ಮಂಗಳವಾರ ಏರ್ಪಡಿಸಿದ್ದ ತಮ್ಮ 73ನೇ ಜನ್ಮದಿನಾಚರಣೆಯನ್ನು ಕೂಡಲ ಸಂಗಮ ಬಸವಧರ್ಮ ಪೀಠದ ಅಧ್ಯಕ್ಷೆ ಮಾತೆ ಮಹಾದೇವಿ ಉದ್ಘಾಟಿಸಿದರು.   

ಬಳ್ಳಾರಿ: ‘ಲಿಂಗಾಯತವನ್ನು ಪ್ರತ್ಯೇಕ ಧರ್ಮ ಎಂದು ಪರಿಗಣಿಸಬೇಕು ಎಂದು ತಜ್ಞರ ಸಮಿತಿಯು ನೀಡಿರುವ ಶಿಫಾರಸ್ಸನ್ನು ಸರ್ಕಾರ ಒಪ್ಪುವುದೆಂಬ ಭರವಸೆ ಇದೆ’ ಎಂದು ಕೂಡಲ ಸಂಗಮ ಬಸವಧರ್ಮ ಪೀಠದ ಅಧ್ಯಕ್ಷೆ ಮಾತೆ ಮಹಾದೇವಿ ಅಭಿಪ್ರಾಯಪಟ್ಟರು.

ನಗರದ ಬಸವೇಶ್ವರ ನಗರದ ಬಸವ ಮಂಟಪದಲ್ಲಿ ರಾಷ್ಟ್ರೀಯ ಬಸವ ದಳ ಏರ್ಪಡಿಸಿದ್ದ ತಮ್ಮ 73ನೇ ಜನ್ಮದಿನಾಚರಣೆಯ ಸಂದರ್ಭದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಮಾ.14ರಂದು ಸಚಿವ ಸಂಪುಟ ಸಭೆಯಲ್ಲಿ ಪ್ರತ್ಯೇಕ ಧರ್ಮದ ಕುರಿತು ಚರ್ಚೆ ನಡೆಯಲಿದ್ದು, ಸರ್ಕಾರ ಯಾವ ನಿರ್ಣಯ ಕೈಗೊಳ್ಳಲಿದೆ ಎಂದು ಕಾಯುತ್ತಿದ್ದೇವೆ. ಸರ್ಕಾರದ ನಿರ್ಣಯ ಪ್ರಕಟವಾದ ಬಳಿಕ ಮುಂದಿನ ನಡೆಯ ಬಗ್ಗೆ ಯೋಜನೆ ರೂಪಿಸಲಾಗುವುದು’ ಎಂದರು.

‘ವೀರಶೈವ ಮತ್ತು ಲಿಂಗಾಯಿತದ ವಿಚಾರಗಳು ಭಿನ್ನವಾದವು. ಲಿಂಗಾಯಿತ ಧರ್ಮ ಪ್ರತ್ಯೇಕ ಹಾಗೂ ಸ್ವತಂತ್ರ ಧರ್ಮವಾಗಿದ್ದು, ಅದಕ್ಕೆ ಅಲ್ಪ ಸಂಖ್ಯಾತರ ಸ್ಥಾನ ಮಾನ ನೀಡಬೇಕು ಎಂಬ ಆಗ್ರಹ ನಮ್ಮದು. ಅದಕ್ಕೆ ಪ್ರಮುಖ ವಿರಕ್ತ ಮಠಗಳ ಸ್ವಾಮೀಜಿಗಳು ಕೈಜೋಡಿಸಿದ್ದಾರೆ’ ಎಂದರು.

ADVERTISEMENT

‘ಈ ಮೊದಲು ಸರ್ಕಾರವು ಸಮಾಲೋಚನೆಗೆ ಎರಡೂ ಬಣಗಳು ಒಟ್ಟಿಗೇ ಬರಬೇಕು ಎಂದು ಹೇಳಿತ್ತು. ಅದು ಸಾಧ್ಯವಿಲ್ಲ. ಏಕೆಂದರೆ ಎರಡೂ ರೈಲುಹಳಿಗಳ ರೀತಿ ಎಂದಿಗೂ, ಎಲ್ಲಿಯೂ ಸೇರಲು ಸಾಧ್ಯವಿಲ್ಲ ಎಂದು ನಮ್ಮ ನಿಲುವನ್ನು ಸ್ಪಷ್ಟಪಡಿಸಿದ್ದೆವು’ ಎಂದರು.

23 ವರ್ಷದ ಬಳಿಕ: ಕಾರ್ಯಕ್ರಮದಲ್ಲಿ ಮಾತನಾಡಿದ ಧಾರವಾಡ ಅನುಭಾವ ಪೀಠದ ಗಂಗಾದೇವಿ, 23 ವರ್ಷಗಳ ಹಿಂದೆ ಮಾತೆ ಮಹಾದೇವಿ ತಮ್ಮ 50ನೇ ಜನ್ಮದಿನಾಚರಣೆ ಸಲುವಾಗಿ ನಗರಕ್ಕೆ ಬಂದಿದ್ದರು. ಈಗ ಮತ್ತೆ ಇಲ್ಲಿ ತಮ್ಮ ಜನ್ಮದಿನವನ್ನು ಆಚರಿಸಿಕೊಳ್ಳುತ್ತಿದ್ದಾರೆ’ ಎಂದರು.

ಪೀಠದ ಅಕ್ಕಮಹಾದೇವಿ, ರಾಷ್ಟ್ರೀಯ ಬಸವದಳದ ಕಾರ್ಯಾಧ್ಯಕ್ಷೆ ಶಾರದಾ, ಬಸವತತ್ವ ಪ್ರಚಾರ ಪ್ರತಿಷ್ಠಾನದ ಅಧ್ಯಕ್ಷ ಈ.ಕೃಷ್ಣಪ್ಪ, ದಳದ ಕಾರ್ಯದರ್ಶಿ ರವಿಶಂಕರ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.