ADVERTISEMENT

ಹತ್ತಿ ಬೆಳೆಗೆ ಎಲೆ ಮುದುರು ರೋಗ: ರೈತ ಕಂಗಾಲು

​ಪ್ರಜಾವಾಣಿ ವಾರ್ತೆ
Published 16 ಸೆಪ್ಟೆಂಬರ್ 2011, 6:05 IST
Last Updated 16 ಸೆಪ್ಟೆಂಬರ್ 2011, 6:05 IST

ಸಿರುಗುಪ್ಪ: ತಾಲ್ಲೂಕಿನ ಮುಂಗಾರು ಹಂಗಾಮಿನ ಪ್ರದೇಶದಲ್ಲಿ ಬಿತ್ತನೆ ಮಾಡಿದ ಬಿಟಿ ಹತ್ತಿ ಬೆಳೆಗೆ ಕೆಂಪುರೋಗ ಮತ್ತು ಎಲೆಮುದುರು ರೋಗ, ಹಾಗೂ ರಸಹೀರುವ ಕೀಟಗಳ ಬಾಧೆ ಕಂಡು ಬಂದಿದೆ.

ಕೃಷಿ ಇಲಾಖೆಯ ಮಾಹಿತಿ ಪ್ರಕಾರ 15342 ಹೆಕ್ಟೇರ್ ಪ್ರದೇಶದಲ್ಲಿ ಈ ಬಿಟಿ ಹತ್ತಿ ಬೆಳೆಯನ್ನು ರೈತರು ಬಿತ್ತನೆ ಮಾಡಿದ್ದು ಸಮೃದ್ಧವಾಗಿ ಬೆಳದ ಪೈರು ಒಣ ಹವೆ ಮತ್ತು ಮೋಡಕವಿದ ವಾತಾವರಣದಿಂದ ಅನೇಕ ರೋಗ ಬಾಧೆಗಳು ಕಾಣಿಸಿಕೊಂಡಿವೆ ಎಂದು ಸಹಾಯಕ ಕೃಷಿ ನಿರ್ದೇಶಕ ಸಿ.ಆರ್. ಚಂದ್ರಶೇಖರ ಬುಧವಾರ ಪ್ರಜಾವಾಣಿಗೆ ಮಾಹಿತಿ ನೀಡಿದರು.

ಈ ರೋಗಗಳ ನಿಯಂತ್ರಣಕ್ಕಾಗಿ ರೈತರು ಕೃಷಿ ಇಲಾಖೆ ಶಿಫಾರಸ್ಸು ಮಾಡಿದ ಔಷಧಗಳನ್ನು ಸಿಂಪರಣೆ ಮಾಡಲು ಕೋರಿದ್ದಾರೆ. ತಾಲ್ಲೂಕಿನ ಹಚ್ಚೊಳ್ಳಿ ಹೋಬಳಿ ಮತ್ತು ಸಿರುಗುಪ್ಪ ಹೋಬಳಿಯ ಮಳೆಯಾಶ್ರಿತ ಪ್ರದೇಶ ದಲ್ಲಿ ಈ ಬೆಳೆಗೆ ರೋಗ ಉಲ್ಬಣ ಗೊಂಡಿದ್ದು ಇಮಾಡಾಕ್ಲೊಪಿರೆಡ್ ಔಷಧ ಇದರ ಜೊತೆಗೆ ಫ್ರೈಡ್ ಕೀಟ ನಾಶಕವನ್ನು ಬೆಳಿಗ್ಗೆ 11 ಗಂಟೆಯೊಳಗೆ ಅಥವಾ ಮಧ್ಯಾಹ್ನ 3 ಗಂಟೆಯ ತಂಪಿನ ವಾತಾವರಣದಲ್ಲಿ ಔಷಧವನ್ನು ಸಿಂಪರಣೆ ಮಾಡುವಂತೆ ರೈತರಿಗೆ ತಿಳಿಸಿದ್ದಾರೆ.

ಈ ಔಷಧ ಸಿಂಪರಣೆ ಮಾಡುವು ದರಿಂದ ಹೂ ಉದುರುವ ಪ್ರಮಾಣ ಕಡಿಮೆ ಮಾಡಬಹುದು, ಎಲೆ ಕೆಂಪಾಗುವಿಕೆಯನ್ನು ತಡೆಗಟ್ಟಬಹುದು, ಒಂದು ಎಕರೆಗೆ ಕನಿಷ್ಟ 200 ಲೀ ನೀರಿನಲ್ಲಿ ಔಷಧ ಮಿಶ್ರಣ ಮಾಡಿ ಹತ್ತಿ ಬೆಳೆಯ ಬುಡದಿಂದ ಹಿಡಿದು ಸಾಲುಗಳ ಸುತ್ತಮುತ್ತ ಸಹ ಔಷಧ ಸಿಂಪರಣೆ ಮಾಡಲು ಅವರು ಸಲಹೆ ಮಾಡಿದ್ದಾರೆ. ಇದರ ಜೊತೆಗೆ ಜಿಂಕ್‌ಸಲ್ಫೇಟ್ ಮತ್ತು ಬೊರೆಕ್ಸ ಔಷಧವನ್ನು ಸಿಂಪಡಿಸಿದರೆ ಒಳ್ಳೆಯದು ಎಂದು ಅವರು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.