ADVERTISEMENT

ಹೈ-ಕ ವಿಶೇಷ ಸ್ಥಾನಮಾನ:ವಿಜಯೋತ್ಸವ

​ಪ್ರಜಾವಾಣಿ ವಾರ್ತೆ
Published 20 ಡಿಸೆಂಬರ್ 2012, 6:53 IST
Last Updated 20 ಡಿಸೆಂಬರ್ 2012, 6:53 IST
ಹೂವಿನಹಡಗಲಿ ಪಟ್ಟಣದ ಲಾಲ್‌ಬಹದ್ದೂರ್ ಶಾಸ್ತ್ರಿ ವೃತ್ತದಲ್ಲಿ ಬುಧವಾರ ಹಮ್ಮಿಕೊಂಡಿದ್ದ ಸಂಭ್ರಮಾಚರಣೆಯಲ್ಲಿ ತಾ.ಪಂ.ಸದಸ್ಯ ಹಾಗೂ ಜಿಬಿಆರ್ ಕಾಲೇಜ್ ಆಡಳಿತ ಮಂಡಳಿಯ ಅಧ್ಯಕ್ಷ ಐಗೋಳ್ ಚಿದಾನಂದ ಮಾತನಾಡಿದರು.
ಹೂವಿನಹಡಗಲಿ ಪಟ್ಟಣದ ಲಾಲ್‌ಬಹದ್ದೂರ್ ಶಾಸ್ತ್ರಿ ವೃತ್ತದಲ್ಲಿ ಬುಧವಾರ ಹಮ್ಮಿಕೊಂಡಿದ್ದ ಸಂಭ್ರಮಾಚರಣೆಯಲ್ಲಿ ತಾ.ಪಂ.ಸದಸ್ಯ ಹಾಗೂ ಜಿಬಿಆರ್ ಕಾಲೇಜ್ ಆಡಳಿತ ಮಂಡಳಿಯ ಅಧ್ಯಕ್ಷ ಐಗೋಳ್ ಚಿದಾನಂದ ಮಾತನಾಡಿದರು.   

ಬಳ್ಳಾರಿ: ಹೈದರಾಬಾದ್ ಕರ್ನಾಟಕಕ್ಕೆ ವಿಶೇಷ ಸ್ಥಾನಮಾನ ನೀಡುವ ನಿಟ್ಟಿನಲ್ಲಿ ಸಂವಿಧಾನದ 371ನೇ ಕಲಮಿಗೆ ತಿದ್ದುಪಡಿ ತರುವ ಮಸೂದೆಯನ್ನು ಲೋಕಸಭೆಯಲ್ಲಿ ಮಂಗಳವಾರ ಮಂಡಿಸಿರುವ ಹಿನ್ನೆಲೆಯಲ್ಲಿ ವಿವಿಧ ಸಂಘಟನೆಗಳು ನಗರದಲ್ಲಿ ಬುಧವಾರ ವಿಜಯೋತ್ಸವ ಆಚರಿಸಿದರು.

ಹೈದರಾಬಾದ್ ಕರ್ನಾಟಕ ಪ್ರದೇಶದ ಅತ್ಯಂತ ಹಿಂದುಳಿದಿರುವ ಬೀದರ್, ಗುಲ್ಬರ್ಗ, ಯಾದಗಿರಿ, ರಾಯಚೂರು, ಬಳ್ಳಾರಿ ಮತ್ತು ಕೊಪ್ಪಳ ಜಿಲ್ಲೆಗಳಿಗೆ  ವಿಶೇಷ ಸ್ಥಾನಮಾನ ಕಲ್ಪಿಸಲು ಸಂವಿಧಾನದ 371ನೇ `ಜೆ' ಕಲಮಿಗೆ ತಿದ್ದುಪಡಿ ತರುವ ಮಸೂದೆಯನ್ನು ಮಂಡಿಸಿರುವುದು ಸ್ವಾಗತಾರ್ಹ ಎಂದು ಹೈದರಾಬಾದ್ ಕರ್ನಾಟಕ ಹೋರಾಟ ಸಮಿತಿ ಹಾಗೂ ಬಳ್ಳಾರಿ ಜಿಲ್ಲಾ ಹಿತರಕ್ಷಣಾ ಸಮಿತಿ ವತಿಯಿಂದ ಬೆಳಿಗ್ಗೆ ಬೈಕ್ ರ‌್ಯಾಲಿ ನಡೆಸಿ ಸಂಭ್ರಮಾಚರಣೆ ನಡೆಸಲಾಯಿತು.

ಬೈಕ್ ರ‌್ಯಾಲಿ ನಂತರ ಪರಸ್ಪರ ಸಿಹಿ ಹಂಚುವುದರ ಮೂಲಕ ವಿಜಯೋತ್ಸವ ಆಚರಿಸಿದ ಕಾರ್ಯಕರ್ತರು ಕೇಂದ್ರ ಸರ್ಕಾರದ ಕ್ರಮವನ್ನು ಕೊಂಡಾಡಿದರು.

ಸಮಿತಿಯ ಸಂಚಾಲಕ ಪನ್ನರಾಜ್, ಟಿ.ಜಿ. ವಿಠ್ಠಲ್, ರಿಜ್ವಾನ್ ಖಾನ್, ಕೆ. ಉಮಾಪತಪ್ಪ, ಚೆನ್ನಪ್ಪ, ಯಶವಂತರಾಜ್, ಎಲ್.ಮಾರೆಣ್ಣ, ಸಿದ್ಮಲ್ ಮಂಜುನಾಥ, ಜಿಲ್ಲಾ ವಾಣಿಜ್ಯೋದ್ಯಮ ಸಂಸ್ಥೆ, ವಿವಿಧ ಕನ್ನಡಪರ ಸಂಘಟನೆಗಳು, ಡಾ. ಬಿ.ಆರ್. ಅಂಬೇಡ್ಕರ್ ಸಂಘ, ಮಾದಿಗ ದಂಡೋರ ಸಮಿತಿ ಮತ್ತಿತರ  ಸಂಘಟನೆಗಳ ಮುಖಂಡರು ಈ ಸಂದರ್ಭ ಭಾಗವಹಿಸಿದ್ದರು.

ಪಾಲಿಕೆ ಸದಸ್ಯೆ ಕೆ.ಶಶಿಕಲಾ ಅವರು ನಗರದ ಕಪಗಲ್ ರಸ್ತೆಯಲ್ಲಿರುವ ಬದ್ರಿನಾರಾಯಣ ದೇವಸ್ಥಾನದ ಬಳಿ ಸಾರ್ವಜನಿಕರೊಂದಿಗೆ ಮಂಗಳವಾರ ರಾತ್ರಿ  ವಿಜಯೋತ್ಸವ ಆಚರಿಸಿ, ಪರಸ್ಪರ ಸಿಹಿ ಹಂಚಿ ಸಂಭ್ರಮಿಸಿದರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.