ADVERTISEMENT

ಐದು ವರ್ಷ ಕಳೆದರೂ ಸೇತುವೆ ಅಪೂರ್ಣ

ಎಂ.ಬಸವರಾಜಯ್ಯ
Published 8 ಜನವರಿ 2018, 8:48 IST
Last Updated 8 ಜನವರಿ 2018, 8:48 IST
ರಾರಾವಿ ಗ್ರಾಮದ ಬಳಿಯ ಹಗರಿ ನದಿಗೆ ನಿರ್ಮಿಸುತ್ತಿರುವ ರಸ್ತೆ ಸೇತುವೆ ಕಾಮಗಾರಿ ಅರ್ಧಕ್ಕೆ ನಿಂತಿರುವುದು
ರಾರಾವಿ ಗ್ರಾಮದ ಬಳಿಯ ಹಗರಿ ನದಿಗೆ ನಿರ್ಮಿಸುತ್ತಿರುವ ರಸ್ತೆ ಸೇತುವೆ ಕಾಮಗಾರಿ ಅರ್ಧಕ್ಕೆ ನಿಂತಿರುವುದು   

ಸಿರುಗುಪ್ಪ: ಆಂಧ್ರಪ್ರದೇಶ ಮತ್ತು ರಾಜ್ಯದ ಸಂಪರ್ಕ ಕೊಂಡಿ ಎನಿಸಿರುವ ತಾಲ್ಲೂಕಿನ ರಾರಾವಿ ಗ್ರಾಮದ ಬಳಿ ಹಗರಿ ನದಿಗೆ(ವೇದಾವತಿ) ನಿರ್ಮಿಸುತ್ತಿರುವ ಸೇತುವೆ ನಿರ್ಮಾಣ ಕಾಮಗಾರಿ ಆರಂಭಗೊಂಡು ಐದು ವರ್ಷಗಳೇ ಕಳೆದಿವೆ. ಆದರೆ, ಈ ವರೆಗೂ ಕಾಮಗಾರಿ ಪೂರ್ಣಗೊಂಡಿಲ್ಲ.

2013 ಜನವರಿ 10ರಂದು ಆಗಿನ ಬಿಜೆಪಿ ಸರ್ಕಾರದ ಮುಖ್ಯಮಂತ್ರಿ ಜಗದೀಶ ಶೆಟ್ಟರ್‌ ಅವರು ಸೇತುವೆಯ ನಿರ್ಮಾಣ ಕಾಮಗಾರಿಗೆ ಚಾಲನೆ ನೀಡಿದ್ದರು. ನಿಗದಿಯಂತೆ 2015ಕ್ಕೆ ಸೇತುವೆಯ ಕಾಮಗಾರಿಯು ಸಂಪೂರ್ಣ ಮುಗಿದು, ಅದು ಸಾರ್ವಜನಿಕರ ಬಳಕೆ ಮುಕ್ತವಾಗಬೇಕಿತ್ತು.

ಆದರೆ, ಇಂದಿಗೂ ಸೇತುವೆ ಕಾಮಗಾರಿ ಆಮೆಗತಿಯಲ್ಲಿ ನಡೆಯುತ್ತಲೇ ಇದೆ. ಬ್ರಿಟಿಷರ ಕಾಲದಲ್ಲಿ ನಿರ್ಮಿಸಲಾಗಿದ್ದ ಸೇತುವೆ ಕಳೆ ಮಟ್ಟದಲ್ಲಿದ್ದು, ಮಳೆಗಾಲದಲ್ಲಿ ಮುಳುಗುತ್ತದೆ. ಅದರಿಂದ ಸಂಪರ್ಕ ಸ್ಥಗಿತಗೊಳ್ಳುತ್ತದೆ. ಕೆಳ ಸೇತುವೆ ಮುಳುಗಿದರೆ, ಜನರು ಆಂಧ್ರದ ಅದೋನಿ ಮತ್ತಿತರ ಪ್ರದೇಶಗಳಿಗೆ ಸುತ್ತಿ ಬಳಸಿ ಹೋಗುವುದು ಅನಿವಾರ್ಯವಾಗಿದೆ.

ADVERTISEMENT

ಈ ಸೇತುವೆಗೆ ಮುಕ್ತಿ ಯಾವಾಗ ಎಂದು ಹಗರಿ ನದಿ ದಂಡೆಯ ಗ್ರಾಮಸ್ಥರು ಚಾತಕ ಪಕ್ಷಿಯಂತೆ ಎದುರು ನೋಡುತ್ತಿದ್ದಾರೆ. ಹೈದರಾಬಾದಿನ ಮಾಧವನ್ ಹೈಟೆಕ್ ಇನ್ಫ್ರಾಸ್ಟ್ರಕ್ಚರ್‌ ಪ್ರೈವೇಟ್‌ ಲಿಮಿಟೆಡ್‌ ಕಂಪನಿ ಈ ಸೇತುವೆ ನಿರ್ಮಾಣದ ಕಾಮಗಾರಿ ಗುತ್ತಿಗೆ ಪಡೆದಿದ್ದು, ₹29.65 ಕೋಟಿ ಅನುದಾನ ಬಿಡುಗಡೆಯಾಗಿತ್ತು. ಆದರೆ, ಈ ತನಕ ಸೇತುವೆ ನಿರ್ಮಾಣ ಪೂರ್ಣಗೊಂಡಿಲ್ಲ.

‘ಹಗರಿ ನದಿ ರಸ್ತೆ ಸೇತುವೆ ನಿರ್ಮಾಣಕ್ಕಾಗಿ ಎರಡು ದಶಕಗಳಿಂದ ಹೋರಾಟ ಮಾಡುತ್ತಾ ಬಂದಿದ್ದೇವೆ. ಐದು ವರ್ಷಗಳ ಹೀಂದೆ ಆರಂಭಗೊಂಡ ಕಾಮಗಾರಿ ಕುಂಟುತ್ತಾ
ಸಾಗಿದೆ. ಕಾಮಗಾರಿ ಪೂರ್ಣಗೊಳಿಸುವಂತೆ ಮತ್ತೆ ಬೀದಿಗಳಿಯುವ ಮುನ್ನ ಸಂಬಂಧಪಟ್ಟವರು ಕಾಮಗಾರಿಯನ್ನು ಪೂರ್ಣಗೊಳಿಸಬೇಕು’ ಎಂಬುದು ರಾರಾವಿ ಗ್ರಾಮಸ್ಥ ಇ.ಆರ್‌.ಯಲ್ಲಪ್ಪ ಆಗ್ರಹ. ಈ ಸೇತುವೆ ನಿರ್ಮಾಣ ಯಾವಾಗ ಪೂರ್ಣಗೊಳ್ಳುತ್ತದೆ ಎಂದು ಹಗರಿ ನದಿ ದಂಡೆಯ ಗ್ರಾಮಸ್ಥರು ಚಾತಕ ಪಕ್ಷಿಯಂತೆ ಕಾಯುತ್ತಿದ್ದಾರೆ.

* *

ಸೇತುವೆ ಕಾಮಗಾರಿ 2015 ಪೂರ್ಣಗೊಳ್ಳಬೇಕಿತ್ತು. ತಾಂತ್ರಿಕ ಕಾರಣದಿಂದ ಈ ಸೇತುವೆ 2018ಕ್ಕೆ ಮುಗಿಸಲು ಗುತ್ತಿಗೆ ದಾರರಿಗೆ ಅವಕಾಶ ಕೊಡಲಾಗಿದೆ ಹನುಮಂತರಾವ್‌, ಎಇಇ, ಲೋಕೋಪಯೋಗಿ ಇಲಾಖೆ, ಸಿರುಗುಪ್ಪ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.